ಚಿಕ್ಕಬಳ್ಳಾಪುರ ಜಿಲ್ಲೆಯ ಕಂದವಾರ ಗ್ರಾಮದ ನಿವಾಸಿ ನಿವೃತ್ತ ಅಭಿಯಂತರ ಡಿ ಟಿ ಶ್ರೀನಿವಾಸಮೂರ್ತಿ ಇಂಜಿನಿಯರ್ಸ್ ಡೇ ಅಂಗವಾಗಿ ಮುದ್ದೇನಹಳ್ಳಿ ಗ್ರಾಮದಲ್ಲಿ ಲಯನ್ಸ್ ಕ್ಲಬ್ ಸಂಸ್ಥೆ ಜಿಲ್ಲಾ ಘಟಕವು ನೀಡುತ್ತಿರುವ ಆಚಾರ್ಯಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಲಾಯಿತು.
ತಾಲೂಕಿನ ಮುದ್ದೇನಹಳ್ಳಿಯಲ್ಲಿ ಇಂಜಿನಿಯರ್ಸ್ ಡೇ ಅಂಗವಾಗಿ ಕಳೆದ 20 ವರ್ಷಗಳಿಂದ ಲಯನ್ಸ್ ಸಂಸ್ಥೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ನೀಡುತ್ತಿರುವ ಆಚಾರ್ಯಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಂಜನಿಯರ್ ಆಗಿ ಅನುಪಮ ಸೇವೆ ಸಲ್ಲಿಸಿರುವ ಶ್ರೀನಿವಾಸ್, 2025ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದಿರುವ ನಂದಿ ಕ್ಲಸ್ಟರ್ ಈರೇನಹಳ್ಳಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಪ್ರೇಮಾವತಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕೃತ ನಿವೃತ್ತ ಅಭಿಯಂತರ ಡಿ.ಟಿ.ಶ್ರೀನಿವಾಸಮೂರ್ತಿ ಮಾತನಾಡಿ, “ಯಾವುದೇ ಇಂಜಿನಿಯರ್ ವೃತ್ತಿಯಲ್ಲಿರುವವರು ಮಾಧ್ಯಮದ ಕಣ್ಣಿಗೆ, ಸಮಾಜ ಕಣ್ಣಿಗೆ ಭೌತಿಕವಾಗಿ ಕಾಣುವುದಿಲ್ಲ.ಆದರೆ ನಾವು ನಿರ್ಮಾಣ ಮಾಡಿರುವ ಕೆಲಸಗಳ ಮೂಲಕ ನಮ್ಮ ಹೆಸರು ಚಿರಸ್ಥಾಯಿಯಾಗಿರಲಿದೆ. ಮೂಲತಃ ಇಂಜಿನಿಯರ್ ಆದ ನಾನು ರಾಷ್ಟ್ರೀಯ ಹೆದ್ದಾರಿ ಅಭಿಯಂತರ, ಕೆ.ಎನ್.ಆರ್ ಕನ್ಸ್ಟ್ರಕ್ಷನ್ ಸೇರಿ ಇಂಜಿನಿಯರ್ ಆಗಿ ಹತ್ತಾರು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತನಾಗಿದ್ದೇನೆ. ನನ್ನ ವೃತ್ತಿಯಲ್ಲಿ ಹತ್ತು ಜನಕ್ಕೆ ಉಪಯೋಗವಾಗುವ ಕೆಲಸ ಮಾಡಿರುವ ತೃಪ್ತಿ ನನಗಿದೆ. ನನ್ನ ಸೇವೆಯನ್ನು ಗುರುತಿಸಿ ಚಿಕ್ಕಬಳ್ಳಾಪುರ ಲಯನ್ಸ್ ಸಂಸ್ಥೆ ವಿಶ್ವೇಶ್ವರಯ್ಯ ಅವರ ಜನ್ಮದಿನದಂದು ಆಚಾರ್ಯಶ್ರೇಷ್ಠ ಪ್ರಶಸ್ತಿ ಪ್ರಧಾನ ಮಾಡಿ ನನ್ನ ಜವಾಬ್ದಾರಿಯನ್ನು ಹೆಚ್ಚುವಂತೆ ಮಾಡಿದೆ. ಇದಕ್ಕಾಗಿ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ | ಸಾಮಾಜಿಕ & ಶೈಕ್ಷಣಿಕ ಸಮೀಕ್ಷೆ ಕಾರ್ಯದಿಂದ ವಿನಾಯಿತಿ ನೀಡಲು ಶಿಕ್ಷಕರ ಮನವಿ
ಲಯನ್ ಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮಣ್ ಮಾತನಾಡಿ, “ಲಯನ್ಸ್ ಸಂಸ್ಥೆ ಸೇವಾಕಾರ್ಯಗಳಿಗೆ ಹೆಸರಾದ ಸಂಸ್ಥೆಯಾಗಿದೆ. ವಿಶ್ವದಾದ್ಯoತ ಲಯನ್ಸ್ನ ಶಾಖೆಗಳಿದ್ದು ಕಾಲಕಾಲಕ್ಕೆ ಸಮಾಜಕ್ಕೆ ಬೇಕಾದ ಸೇವಾಕಾರ್ಯಗಳನ್ನು ಮಾಡುತ್ತಾ ಜವಾಬ್ದಾರಿಯುತ ನಾಗರೀಕರನ್ನು ಕಟ್ಟುವಲ್ಲಿ ಮುನ್ನಡೆದಿದ್ದೇವೆ. ಕಳೆದ ೨೦ ವರ್ಷಗಳಿಂದ ಚಿಕ್ಕಬಳ್ಳಾಪುರ ಘಟಕವು ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು ಪ್ರತಿವರ್ಷ ಇಂಜನಿಯರ್ಸ್ ಡೇ ಅಂಗವಾಗಿ ವಿವಿಧ ಕ್ಷೇತ್ರದ ಗಣ್ಯರನ್ನು ಆರಿಸಿ ಅವರಿಗೆ ಆಚಾರ್ಯ ಶ್ರೇಷ್ಟ ಪ್ರಶಸ್ತಿ ಪ್ರದಾನ ಮಾಡುತ್ತಾ ಬರಲಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಡಾ.ಚಂದ್ರಪ್ಪ, ಡಾ.ಭಾರ್ಗವಿ ಸುನಿಲ್, ಡಾ.ಲಕ್ಷಿ ನಾರಯಣರೆಡ್ಡಿ, ಡಾ.ಪಿ.ಸಿ.ಲಕ್ಷ್ಮಿ ನಾರಾಯಣ, ಪ್ರೊ.ಮಲ್ಲಣ್ಣ, ಡಾ.ಜಿ.ವಿ.ಜ್ಞಾನೇಂದ್ರ ರೆಡ್ಡಿ, ಭಾರತಿ ಶ್ರೀನಿವಾಸ್, ನೂತನ, ಡಾ.ರಘು, ಚಿಕ್ಕಬಳ್ಳಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಚಂದ್ರಣ್ಣ, ಮಾಜಿ ಅಧ್ಯಕ್ಷ ಬ್ರಹ್ಮಾಚಾರಿ, ಖಜಾಂಚಿ ಲಯನ್ ರವೀಂದ್ರ, ಲಯನ್ ಸುನಿಲ್ ಮತ್ತು ಇತರರು ಇದ್ದರು ಇದ್ದರು.





