ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್ ಗೆದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರಿಂದ ಶಾಸಕ ಪ್ರದೀಪ್ ಈಶ್ವರ್ ಮನೆ ಮೇಲೆ ಕಲ್ಲು ತೂರಿರುವ ಘಟನೆ ನಡೆದಿದೆ ಎನ್ನಲಾಗಿದೆ.
“ಪ್ರದೀಪ್ ಈಶ್ವರ್ ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಸುಧಾಕರ್ ಅವರನ್ನು ಸೋಲಿಸಿದ್ದರು. ಇಬ್ಬರ ನಡುವೆ ರಾಜಕೀಯ ವೈರುಧ್ಯಗಳಿದ್ದೇ ಇದೆ. ಇದೇ ಕಾರಣಕ್ಕೆ ಚಿಕ್ಕಬಳ್ಳಾಪುರದಲ್ಲಿ ಈ ಬಾರಿ ಸುಧಾಕರ್ ಒಂದೇ ಒಂದು ವೋಟ್ನಿಂದ ಗೆದ್ದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ, ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ” ಎಂದು ಪ್ರದೀಪ್ ಶಪಥ ಮಾಡಿದ್ದರು.
ನಿನ್ನೆ ಸುಧಾಕರ್ ಗೆಲ್ಲುತ್ತಿದ್ದಂತೇ ಪ್ರದೀಪ್ ಹಳೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಟ್ರೋಲ್ ಆಗಿದ್ದವು. ಇದೆಲ್ಲ ಬೆಳವಣಿಗೆ ನಡುವೆ ನಿನ್ನೆ ರಾತ್ರಿ ಪ್ರದೀಪ್ ನಿವಾಸಕ್ಕೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
“ಕಿಡಿಗೇಡಿಗಳು ಕಲ್ಲು ಎಸೆಯುತ್ತಿದ್ದಾಗ ಸಿಸಿಟಿವಿ ಸೆನ್ಸರ್ ಆನ್ ಆಗಿದ್ದು ಕಿಡಿಗೇಡಿಗಳು ಓಡಿ ಹೋಗಿದ್ದಾರೆ” ಎಂದು ಪ್ರದೀಪ್ ಮನೆಯ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಈ ದಿನ.ಕಾಮ್ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಸಂಪರ್ಕಿಸಿದಾಗ ಮಾತನಾಡಿದ ಅವರು, “ರಾತ್ರಿ ಸುಮಾರು 10-15ರ ಹೊತ್ತಿಗೆ ಈ ಘಟನೆ ನಡೆದಿದೆ. ನಾಲ್ಕೈದು ಹುಡುಗರ ತಂಡ ಶಾಸಕರ ಮನೆಗೆ ಕಲ್ಲೆಸೆದಿದ್ದಾರೆ. ಇದರಿಂದ ಒಂದೆಡೆ ಕಿಟಿಕಿ ಗಾಜುಗಳಿಗೆ ಹಾನಿಯಾಗಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಡ್ಯ | ದಲಿತ ಕಾಲೋನಿಯಲ್ಲಿ ಅನಧಿಕೃತ ಮೊಬೈಲ್ ಟವರ್ ನಿರ್ಮಾಣ; ತೆರವುಗೊಳಿಸುವಂತೆ ದಸಂಸ ಆಗ್ರಹ
“ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದೇವೆ. ಯಾವುದರ ಕುರಿತು ಹೀಗಾಗಿದೆ ಎಂಬುದು ತಿಳಿದುಬಂದಿಲ್ಲ. ಸಿಸಿಟಿವಿ ಪರಿಶೀಲಿಸಿ ಆರೋಪಿಗಳನ್ನು ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದೇವೆ. ತನಿಖೆಯ ಬಳಿಕವಷ್ಟೇ ಮಾಹಿತಿ ಗೊತ್ತಾಗಬೇಕಾಗಿದೆ” ಎಂದು ತಿಳಿಸಿದರು.





