ಅತ್ಯಂತ ಅಸಮರ್ಥ(ಮೋಸ್ಟ್ ಇನ್ಎಫಿಶಿಯೆಂಟ್) ವಿಪಕ್ಷ ನಾಯಕ ಆರ್ ಆಶೋಕ್. ಬಿಜೆಪಿಯವರಿಗೆ ಗತಿಯಿಲ್ಲದೆ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ನೇರ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರದಲ್ಲಿ ಶನಿವಾರ ನಡೆದ ಡಾ. ಕೆ ಸುಧಾಕರ್ ಅಭಿನಂದನಾ ಸಮಾರಂಭದಲ್ಲಿ ʼಭವಿಷ್ಯ ಅಂತ್ಯ ಮಾಡ್ತೀವಿ ಎಂದೇಳಿದವರು ನಾಪತ್ತೆಯಾಗಿದ್ದಾರೆʼ ಎಂದು ಪರೋಕ್ಷವಾಗಿ ಪ್ರದೀಪ್ ಈಶ್ವರ್ ಕುರಿತು ವ್ಯಂಗ್ಯವಾಡಿದ್ದ ವಿಪಕ್ಷ ನಾಯಕ ಆರ್ ಅಶೋಕ್ ಅವರಿಗೆ ತಿರುಗೇಟು ನೀಡಿದರು.
“1962ರಲ್ಲಿ ನಮಗೆ ಅಧಿಕೃತ ವಿಪಕ್ಷ ನಾಯಕರು ಅಂತ ಇರಲಿಲ್ಲ. ಮೊಟ್ಟಮೊದಲಿಗೆ ಶಿವಪ್ಪ ವಿಪಕ್ಷ ನಾಯಕರಾಗಿ ಆಯ್ಕೆಯಾದರು. ಆನಂತರ ಬಂದ ದೇವೇಗೌಡರು, ಎಸ್ ಆರ್ ಬೊಮ್ಮಾಯಿಯವರು, ಬಂಗಾರಪ್ಪನವರು, ಸಿದ್ದರಾಮಯ್ಯನವರು ಸೇರಿದಂತೆ ಎಲ್ಲರೂ ವಿಪಕ್ಷ ನಾಯಕನ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಆದರೆ, ರಾಜ್ಯದ ಅತ್ಯಂತ ಅಸಮರ್ಥ ವಿಪಕ್ಷ ನಾಯಕ ಅಂತ ಯಾರಾದರೂ ಇದ್ದರೆ ಅದು ಆರ್ ಅಶೋಕ್ ಮಾತ್ರ” ಎಂದು ಹರಿಹಾಯ್ದರು.
“ನಮ್ಮ ಪಕ್ಷದ ಆಂತರಿಕ ವಿಚಾರ ನಾವು ಬಗೆಹರಿಸಿಕೊಳ್ಳುತ್ತೇವೆ. ನಿಮಗ್ಯಾಕೆ ಸರ್ ಅಂತ ತೆವಲು? ನಮ್ಮ ಪಕ್ಷದ ವರಿಷ್ಠರಿದ್ದಾರೆ. ಪಕ್ಷದ ಸಮಸ್ಯೆಗಳನ್ನು ನಮ್ಮ ನಾಯಕರು ಬಗೆಹರಿಸುತ್ತಾರೆ” ಎಂದು ಗುಡುಗಿದರು.
“ವಿಪಕ್ಷ ನಾಯಕರಾದವರು ಸಮಸ್ಯೆಗಳ ಕುರಿತು ಮಾತನಾಡಬೇಕು. ಕೋಚಿಮುಲ್ನಲ್ಲಿ ಹಾಲು ಉತ್ಪಾದನೆ ಜಾಸ್ತಿ ಆಗಿದೆ. ಅಂತೆಯೇ ರಾಜ್ಯದಲ್ಲೂ ಹಾಲಿನ ಉತ್ಪಾದನೆ ಹೆಚ್ಚಾಗಿದೆ. ಹಾಗಾಗಿ 50 ಎಂಎಲ್ ಜಾಸ್ತಿ ಮಾಡಿ ಅದಕ್ಕೆ ಹಣ ಪಡೆದಿದ್ದಾರೆ. ರೈತರ ಸಮಸ್ಯೆ ನಿಮಗೆ ಹೇಗೆ ಅರ್ಥ ಆಗುತ್ತೆ ಸಾರ್. ರೈತರ ಸಮಸ್ಯೆ ಬಗ್ಗೆ ಅಶೋಕ್ ಅವರು ಎಲ್ಲಿ ಧ್ವನಿ ಎತ್ತಿದ್ದಾರೆ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಎಚ್ಎಎಲ್ ಭೂಮಿಗೆ ಪರ್ಯಾಯ ಭೂಮಿ ನೀಡುವಲ್ಲಿ ವಿಳಂಬ; ಫಣೀಂದ್ರ ಮುನಿ ಆರೋಪ
“ಆರ್ ಅಶೋಕ್ ವೈಯಕ್ತಿಕ ಟೀಕೆಗೆ ಬರಬೇಡಿ. ನಿಮ್ಮ ಪಕ್ಷದ ಸಮಸ್ಯೆ ಬಗ್ಗೆ ಮಾತನಾಡಿ. ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಯಾವಾಗ ಎನ್ಡಿಎ ಬಿಟ್ಟು ಹೊಗುತ್ತಾರೋ ಗೊತ್ತಿಲ್ಲ. ಮೊದಲು ಎನ್ಡಿಎ ಗಟ್ಟಿ ಮಾಡಿಕೊಳ್ಳಿ” ಎಂದು ಕುಟುಕಿದರು.
“ವಿಪಕ್ಷ ನಾಯಕನ ಕೆಲಸ ಗೊತ್ತಿಲ್ಲವೆಂದರೆ ಸಿದ್ದರಾಮಯ್ಯ ಅವರ ಬಳಿ ತರಬೇತಿ ಪಡೆದುಕೊಳ್ಳಿ. ಬಿಜೆಪಿಯವರು ಗಂಭೀರ ವಿಚಾರದ ಬಗ್ಗೆ ಮಾತಾಡಿದ್ದೇ ನೋಡಿಲ್ಲ” ಎಂದು ವ್ಯಂಗ್ಯವಾಡಿದರು.





