ಬಯಲುಸೀಮೆಯ ನೀರಾವರಿ ಹೋರಾಟಗಾರ, ಚಿಂತಕ, ವಿದೇಶದಲ್ಲಿ ಅತ್ಯುನ್ನತ ವೈದ್ಯರಾಗಿದ್ದರೂ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸಿಕೊಡುವ ಕನಸು ಕಂಡಿದ್ದ ಸಹೃದಯಿ ಡಾ. ಮಧುಸೀತಪ್ಪ ನಿಧನ ಹೊಂದಿದ್ದು, ಅವರ ಅಗಲಿಕೆ ಹೋರಾಟ ರಂಗಕ್ಕೆ ಬರಿಲಾಗದ ನಷ್ಟವಾಗಿದೆ.
ನೀರಾವರಿ ಹೋರಾಟಕ್ಕೆ ಡಾಕ್ಯುಮೆಂಟರಿ, ಜಾನಪದ ಹಾಡುಗಳನ್ನು ನಿರ್ಮಿಸಿ ತಮ್ಮದೇ ಕಾಣಿಕೆ ನೀಡಿದ್ದ ಮಧುಸೀತಪ್ಪನವರ ಅಕಾಲಿಕ ಮರಣ ವಿಷಾದಕರ.
ಕರ್ನಾಟಕ ನೀರಾವರಿ ವೇದಿಕೆ ಅಧ್ಯಕ್ಷ ಹಾಗೂ ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡ ಡಾ.ಮಧು ಸೀತಪ್ಪ(59) ಚೇಳೂರು ತಾಲೂಕಿನ ಶಿವಪುರ ಬಳಿಯ ತಮ್ಮ ತೋಟದಲ್ಲಿ ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರ ಮೃತದೇಹವನ್ನು ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಲಂಡನ್ ನಗರದಲ್ಲಿರುವ ಪತ್ನಿ ಮತ್ತು ಮಗ ಆಗಮಿಸಿದ ನಂತರ ಸ್ಥಳ ನಿಗದಿಪಡಿಸಿದ ಬಳಿಕ ಮೃತರ ಅಂತ್ಯಸಂಸ್ಕಾರ ನಡೆಯಲಿದೆ.
ವೈದ್ಯರಾದ ಮಧು ಸೀತಪ್ಪ ಕೆಲಕಾಲ ಲಂಡನ್ನಲ್ಲಿಯೂ ಕೆಲಸ ಮಾಡಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿಯಿಂದ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.
ಈ ಹಿಂದೆ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಇವರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಲು ಯತ್ನಿಸಿ ವಿಫಲರಾಗಿದ್ದರು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ನೀರಾವರಿ ಹೋರಾಟಗಳಲ್ಲಿಯೂ ತೊಡಗಿದ್ದರು. ಅವರ ಪತ್ನಿ ಮತ್ತು ಪುತ್ರ ಲಂಡನ್ನಲ್ಲಿದ್ದು ಅವರು ಬಂದ ನಂತರ ಅಂತ್ಯಕ್ರಿಯೆ ನಡೆಯಲಿದೆ.
ಸಿಪಿಐಎಂ ಪಕ್ಷದ ಮುಖಂಡ ಚನ್ನರಾಯಪ್ಪ ಮಾತನಾಡಿ, “ಚಿಕ್ಕಬಳ್ಳಾಪುರ ಜಿಲ್ಲೆಯ ಅವಿಭಜಿತ ಕೋಲಾರ, ತುಮಕೂರು, ಚಿತ್ರದುರ್ಗ, ರಾಮನಗರ ಜಿಲ್ಲೆಗಳು ವರ್ಷಗಳನಂತರ ನೀರಿಲ್ಲದೆ ಬರಡಾಗುತ್ತವೆ. ಕುಡಿಯುವ ನೀರಿನ ಹಾಹಾಕಾರ ಉಂಟಾಗುತ್ತಿದ್ದಂಹ ದಾರುಣ ಪರಿಸ್ಥಿತಿ ತಪ್ಪಿಸಲು ಪೂರಕ ಯೋಜನೆಗಳ ಅನುಷ್ಠಾನ ಗಳಿಸಿ ಅದರ ಬಗ್ಗೆ ಸಾಕಷ್ಟು ಕೆಲಸ ಮಾಡಿದವರು ಸಮಾಜಮುಖಿ ಪರಮಶಿವಯ್ಯನವರು. ಬಾಲ್ಯದಿಂದಲೂ ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಯ ಕಡೆ ತುಡಿತ ಹೊಂದಿದ್ದರು. ಪರಮಶಿವಯ್ಯನವರ ದೃಷ್ಟಿಕೋನ ಹಾಗೂ ಚಿಂತನೆಗಳ ಬಗ್ಗೆ ಆಕರ್ಷಿತರಾದ ಡಾ. ಮಧು ಸೀತಪ್ಪ ಅವರು ಪರಮಶಿವಯ್ಯನವರನ್ನು ಭೇಟಿಯಾಗಿ ಅವರೊಂದಿಗೆ ಚರ್ಚಿಸಿ ಅಗತ್ಯ ಕೆಲಸಗಳತ್ತ ಗಮನ ಹರಿಸಿದರು” ಎಂದು ಹೇಳಿದರು.
ಕೋಲಾರ ಜಿಲ್ಲೆಯ ಚಿಲಕನೆಪುರ ಗ್ರಾಮದಲ್ಲಿ ಜನಿಸಿದ ಡಾ.ಮಧು ಅವರ ತಂದೆ ಸೀತಪ್ಪ ಸ್ವಾತಂತ್ರ್ಯ ಹೋರಾಟಗಾರರು. ತಾಯಿ ಶಾರದ ಸೀತಪ್ಪ ವಿದ್ಯಾ ಸಂಸ್ಥೆಯಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಮಧು ತಮ್ಮ ಆರಂಭಿಕ ಶಿಕ್ಷಣವನ್ನು ಕೋಲಾರದ ಹೈಸ್ಕೂಲ್ನಲ್ಲಿ ಪೂರೈಸಿದರು. ಆ ಬಳಿಕ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಮತ್ತು ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪೂರೈಸಿದರು.
ಈ ಸುದ್ದಿ ಓದಿದ್ದೀರಾ? ಚಿಂತಾಮಣಿ | ಆರು ತಿಂಗಳ ಹಿಂದೆಯೇ ಚಾಲನೆ ಸಿಕ್ಕರೂ ಆಮೆಗತಿಯಲ್ಲಿ ಸಾಗುತ್ತಿರುವ ಚೇಳೂರು ರಸ್ತೆ ಕಾಮಗಾರಿ!
ಮಧುಸೀತಪ್ಪನವರ ಹಿತೈಷಿಗಳು, “ಮಧು ಅವರಿಗೆ ಸದ್ಗತಿ ಪ್ರಾಪ್ತಿಯಾಗಲೆಂದು ಪ್ರಾರ್ಥಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಶ್ರೀಯುತರ ಅಗಲಿಕೆಯ ನೋವು ಭರಿಸುವ ಶಕ್ತಿ ಅವರ ಕುಟುಂಬಕ್ಕೆ, ಅಪಾರ ಬಂಧು ಬಳಗಕ್ಕೆ ಭಗವಂತ ದಯಪಾಲಿಸಲಿ” ಎಂದು ಪ್ರಾರ್ಥನೆ ಮಾಡಿದರು.
“ಡಾ. ಮಧು ಸೀತಪ್ಪ ವಿಧಿವಶರಾಗಿದ್ದಾರೆ, ಬಯಲುಸೀಮೆಗೆ ಶಾಶ್ವತ ನೀರಾವರಿ ಹರಿಸಬೇಕೆಂಬ ಕನಸುಕಂಡಿದ್ದ ಗೆಳೆಯನ ಅಕಾಲಿಕ ಮರಣದಿಂದ ತೀವ್ರ ಆಘಾತವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ” ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ತಿಳಿಸಿದ್ದಾರೆ.





