ಚಿಕ್ಕಮಗಳೂರು ಜಿಲ್ಲೆಯ ಕೋಟೆ ಗ್ರಾಮದಲ್ಲಿ ರೈತಾಪಿ ವರ್ಗದವರೇ ಹೆಚ್ಚಾಗಿ ವಾಸಿಸುತ್ತಿದ್ದು, ದೀಪಾವಳಿಯ ಅಂದರೆ ನರಕಚತುರ್ದಶಿಯ ಹಿಂದಿನ ದಿನ ರೈತರು ತಮ್ಮ ತಮ್ಮ ಜಮೀನುಗಳಿಗೆ ಹೋಗಿ ಮೊದಲು ಭೂಮಿಗೆ ಲಕ್ಕೆ ಸೊಪ್ಪು ಮತ್ತು ಹೂವನ್ನು ಇಟ್ಟು ಪೂಜೆಯನ್ನು ಮಾಡಿ, ಮನೆಗೆ ಲಕ್ಕೆಯನ್ನು ಸಡಗರ ಸಂಭ್ರಮದಿಂದ ತರುವ ಹಬ್ಬವೇ ಲಕ್ಕೆಹಬ್ಬ. ಈ ಹಬ್ಬವನ್ನು ನಮ್ಮ ಹಿರಿಕರು ಹೇಗೆ ನಡೆಸಿಕೊಂಡು ಬಂದಿದ್ದಾರೆ. ಹಾಗೆಯೇ ನಾವೂ ಕೂಡ ಮುಂದುವರಿಸಿಕೊಂಡು ಬರುತ್ತಿದ್ದೇವೆ ಎಂದು ಚಿಕ್ಕಮಗಳೂರು ಜಿಲ್ಲಾ ಹಳ್ಳಿಕಾರ ಯುವಕರ ಸಂಘದ ಅಧ್ಯಕ್ಷ ಕೋಟೆ ಸೋಮಣ್ಣ ಹೇಳಿಕೊಂಡಿದ್ದಾರೆ.
ರೈತರು ಬೆಳೆದಿರುವ ದವಸಧಾನ್ಯಗಳಾದ ಭತ್ತ, ರಾಗಿ, ಜೋಳ, ಕಬ್ಬು, ನವಣೆ, ಲಕ್ಕೆ ಸೊಪ್ಪು, ಹುಲ್ಲು, ಉತ್ರಾಣಿ ಕಡ್ಡಿ, ಸಿರಿಧಾನ್ಯಗಳು ಸೇರಿದಂತೆ ಇನ್ನು ಹಲವು ತರಹದ ಸಸ್ಯಗಳನ್ನು ಸೇರಿಸಿ ಕಟ್ಟಿಕೊಂಡು ಗ್ರಾಮಕ್ಕೆ ತಂದು ಬೆಳಿಗ್ಗೆ ಲಕ್ಕೆಯನ್ನು “ನಮ್ಮ ಹಬ್ಬ, ನಮ್ಮ ಸಂಸ್ಕೃತಿ, ನಮ್ಮ ಹೆಮ್ಮೆ” ಎಂದು ಕೋಟೆ ಗ್ರಾಮದಲ್ಲಿ ಚಿಕ್ಕವರು ದೊಡ್ಡವರು ಎನ್ನದೆ ಹಲವಾರು ವರ್ಷಗಳಿಂದ ಸಾಂಪ್ರದಾಯಿಕವಾಗಿ ಎಲ್ಲರೂ ಸೇರಿ ಲಕ್ಕೆಯನ್ನು ಹೊತ್ತು ಕೋಟೆಯ ಪ್ರಮುಖ ಬೀದಿಗಳಲ್ಲಿ ʼನಾಸಿಕ್ ಡ್ರಂ ಸೆಟ್ʼನೊಂದಿಗೆ ಮೆರವಣಿಗೆ ಹೊರಟು, ಗ್ರಾಮದಲ್ಲಿರುವ ಕರಿಗಲ್ಲು, ಶ್ರೀ ರಾಮಾಂಜನೇಯ ಸ್ವಾಮಿ, ಚೌಡಮ್ಮ, ಭೂತಪ್ಪ, ಉಗ್ರಾಣದಮ್ಮ, ಎಲ್ಲಮ್ಮ ದೇವಿ, ಶ್ರೀ ವೀರಭದ್ರೇಶ್ವರ ಸ್ವಾಮಿ, ಶ್ರೀ ಪಾತಾಳೇಶ್ವರ ಸ್ವಾಮಿ ಹಾಗೂ ಕೋಟೆಯ ರಾಜಬೀದಿ ಎಂದೇ ಕರೆಸಿಕೊಳ್ಳುವ ಕೋಟೆಯ ಐತಿಹಾಸಿಕ ಸುಗ್ಗಿಕಲ್ಲಿನ ಹತ್ತಿರ ಇರುವ ಶ್ರೀ ಹರಿಹರೇಶ್ವರ ಸ್ವಾಮಿ ದೇವಸ್ಥಾನಗಳಿಗೆ ಪ್ರದಕ್ಷಿಣೆ ಹಾಕಿ ಲಕ್ಕೆಯನ್ನು ಅರ್ಪಿಸಲಾಗುತ್ತದೆ. ದೇವರಲ್ಲಿ ಈ ಗ್ರಾಮಕ್ಕೆ ಮತ್ತು ನಾಡಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತ ಕಾರ್ಯಕ್ರಮವನ್ನು ಕೊನೆಗೊಳಿಸಲಾಗುತ್ತದೆ.
ಮೆರವಣಿಗೆಯ ಉದ್ದಕ್ಕೂ “ಲಕ್ಕೆ ಲಕ್ಕ್ಯೋ.. ಗದ್ದೆಗೆ ಲಕ್ಕ್ಯೋ, ಗಾಣಕ್ಕೆ ಲಕ್ಕ್ಯೋ, ಭೂಮಿ ತಾಯಿಗೆ ಲಕ್ಕ್ಯೋ, ಎಂದು ಘೋಷಣೆ ಕೂಗುತ್ತ ಮೆರವಣಿಗೆಯ ಮೂಲಕ ಅವರ ಮನೆಗಳಿಗೆ ತೆಗೆದುಕೊಂಡು ಹೋಗಿ ಮಣೆಯ ಮೇಲೆ ಇರಿಸಿ, ಲಕ್ಕೆಗೆ ನೀರು ಮತ್ತು ಹಾಲನ್ನು, ಪ್ರೋಕ್ಷಣೆ ಮಾಡಿ ಪೂಜೆ ಸಲ್ಲಿಸಿ ಮನೆಯ ಮೇಲೆ ಹಾಕಿ ಸಂತೋಷ ಸಡಗರದಿಂದ ದೀಪಾವಳಿ ಆಚರಿಸಲಾಗುತ್ತದೆ.
ಇದನ್ನೂ ಓದಿದ್ದೀರಾ? ಚಾಮರಾಜನಗರ | ದೇವಸ್ಥಾನಕ್ಕೆ ದಲಿತರ ಪ್ರವೇಶ ನಿರಾಕರಣೆ, ಜಾತಿ ನಿಂದನೆ: 17 ಮಂದಿ ವಿರುದ್ಧ ಕೇಸ್ ದಾಖಲು
ಜೀವನದಲ್ಲಿ ಕಷ್ಟ, ಸುಖ, ಏಳು, ಬೀಳುಗಳನ್ನು ಎಲ್ಲರೂ ಕಂಡಿರುತ್ತೇವೆ. ಆದರೆ ವರ್ಷದಲ್ಲಿ ಒಮ್ಮೆ ಬರುವ ಹಬ್ಬ ಹರಿದಿನಗಳು ಎಲ್ಲರನ್ನೂ ತಕ್ಕಮಟ್ಟಿಗೆ ನೆಮ್ಮದಿಪಡಿಸುವ ಶುಭ ದಿನಗಳಾಗಿರುತ್ತವೆ. ಹಾಗೆಯೇ ಈ ದೀಪಾವಳಿ ಎಲ್ಲರ ಬಾಳಲ್ಲಿ ಸದಾ ಬೆಳಕಾಗಿರಲಿ ಎಂದು ಸ್ಥಳೀಯರು ಹಾರೈಸಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ರಂಗನಾಥ್, ನಗರಸಭೆ ಮಾಜಿ ಉಪಾಧ್ಯಕ್ಷ ಭುಜೇಂದ್ರ ರಾಜ್ ಅರಸ್, ಜಿಲ್ಲಾ ಹಳ್ಳಿಕಾರ ಯುವಕರ ಸಂಘದ ಅಧ್ಯಕ್ಷ ಕೋಟೆ ಸೋಮಣ್ಣ, ಹೇಮರಾಜ್, ಜೀವನ್, ರಘು ಬಾಲಯ್ಯ, ತೇಜು, ದ್ವಾರಕೀಶ್, ಮಿಲ್ಟ್ರಿ ಚಂದ್ರು, ತಿಮ್ಮಯ್ಯ, ಆನಂದ್, ಕಾರ್ಗಿಲ್ ಸೋಮಣ್ಣ, ರಘು ಸುಬ್ಬಣ್ಣ, ಶೈಲೇಂದ್ರ, ಚಂದ್ರು, ಕಿಟ್ಟಿ, ಈಶ್ವರ್ ಸೇರಿದಂತೆ ಹಲವು ಮುಖಂಡರು ಹಾಗೂ ಕೋಟೆ ಗ್ರಾಮದ ರೈತರು, ಗ್ರಾಮಸ್ಥರು, ಮೆರವಣಿಗೆಯಲ್ಲಿ ಇದ್ದರು.





