ಚಿಕ್ಕಮಗಳೂರು ನಗರದ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆ ಅಡಿ ಎಂಇಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಡುಗೆ ಸಿಬ್ಬಂದಿ ತರಬೇತಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಕಾಲಕಾಲಕ್ಕೆ ರಾಜ್ಯ ಸರ್ಕಾರ ಬಿಸಿಯೂಟ ಅಡುಗೆ ಸಿಬ್ಬಂದಿಯ ಗೌರವಧನ ಹೆಚ್ಚಿಸುತ್ತಲೇ ಬಂದಿದೆ. ಆದರೆ, ಕೇಂದ್ರ ಸರ್ಕಾರ ತನ್ನ ಪಾಲನ್ನು ಆರಂಭದಿಂದಲೂ ಹೆಚ್ಚಿಸಿಲ್ಲ. ಸಂಘಟನಾತ್ಮಕ ಹೋರಾಟದಿಂದ ಸಮಪಾಲು ಪಡೆಯಲು ಸಾಧ್ಯ, ಹಾಗೆಯೇ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಅಕ್ಷರ ದಾಸೋಹ ಬಿಸಿಯೂಟ ಕಾರ್ಯಕ್ರಮ ಜಾರಿ ಮಾಡಲಾಗಿತ್ತು. ಆರಂಭದಲ್ಲಿ ಈಶಾನ್ಯ ಕರ್ನಾಟಕದಲ್ಲಿ ಜಾರಿಯಾಗಿ ನಂತರ ರಾಜ್ಯದಾದ್ಯಂತ ವಿಸ್ತರಣೆಯಾಗಿದೆ.
ಬಿಸಿಯೂಟ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರದಿಂದ ಶೇ 60ರಷ್ಟು ಹಣ, ರಾಜ್ಯದಿಂದ ಶೇ 40ರಷ್ಟು ಅನುದಾನದ ಒಪ್ಪಂದದಲ್ಲಿ ಈ ಯೋಜನೆ ಆರಂಭವಾಯಿತು. ಆರಂಭದಲ್ಲಿ ರಾಜ್ಯ ಸರ್ಕಾರ ₹400, ಕೇಂದ್ರ ಸರ್ಕಾರ ₹600 ಸೇರಿ ₹1 ಸಾವಿರ ನೀಡಲಾಗುತ್ತಿತ್ತು. ಯೋಜನೆ ಆಂಭವಾಗಿ 23 ವರ್ಷ ಕಳೆದಿದೆ. ಆದರೆ, ಇಂದಿಗೂ ಕೇಂದ್ರ ಸರ್ಕಾರ ತನ್ನ ಪಾಲಿನ ₹600 ಮಾತ್ರ ನೀಡುತ್ತಿದೆ. ಆದರೆ, ರಾಜ್ಯ ಸರ್ಕಾರ ₹400ರಿಂದ ₹4 ಸಾವಿರ ಗೌರವಧನ ಹೆಚ್ಚಿಸಿದೆ. ಕೇಂದ್ರ ಸರ್ಕಾರವೂ ₹6 ಸಾವಿರ ನೀಡಿದ್ದರೆ ₹10 ಸಾವಿರ ಗೌರವಧನ ಪಡೆಯಬಹುದಿತ್ತು ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಕಲುಷಿತ ನೀರು; ನೂರಾರು ಮೀನು ಸಾವು
ಈ ಸಂದರ್ಭದಲ್ಲಿ ಶಿಕ್ಷಣ ಅಧಿಕಾರಿ ನೀಲಕಂಠ, ಅಕ್ಷರ ದಾಸೋಹ ಫೆಡರೇಶನ್ ಅಧ್ಯಕ್ಷ ಜಿ.ರಘು, ಬಿಇಒ ರುದ್ರಪ್ಪ, ನಟರಾಜ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್, ಇಂಧುಮತಿ, ಸಮೀಮಾ ಬಾನು, ಕಾಂತರಾಜು, ಅಂಜನಪ್ಪ, ಪೂರ್ಣೇಶ್ ಹಾಗೂ ಇನ್ನಿತರರಿದ್ದರು.





