ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ ನಡೆಸಿರುವ ಬಗ್ಗೆ ದಿನದಿಂದ ದಿನಕ್ಕೆ ಸತ್ಯಾಂಶಗಳು ಹೊರಬರುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪ್ರತಿಕ್ರಿಯಿಸಿದ್ದಾರೆ.
ಅಗ್ನಿಪರೀಕ್ಷೆಯಿಂದ ಧರ್ಮಸ್ಥಳ ಖಂಡಿತ ಗೆದ್ದು ಬರುತ್ತದೆ ಎಂದು ನಾನು ಹೇಳಿದ್ದೆ, ಈಗ ಬುರಡೆ ಗ್ಯಾಂಗ್ ಷಡ್ಯಂತ್ರ ದಿನೇ ದಿನೇ ಬಹಿರಂಗವಾಗುತ್ತಿದೆ. ತನಿಖೆ ಪ್ರಾಮಾಣಿಕವಾಗಿಯೂ ಪಾರದರ್ಶಕವಾಗಿಯೂ ನಡೆಯಬೇಕು. ಹಾಗೆಯೇ, ಎಸ್ಐಟಿ ರಚನೆಯಾಗಿದ್ದೇ ಕಾಣದ ಕೈಗಳ ಒತ್ತಡದಿಂದ, ಕೋಟ್ಯಾಂತರ ಜನರಿಗೆ ಇದ್ದ ನಂಬಿಕೆ ಅದೇ ನಂಬಿಕೆ ಸರ್ಕಾರಕ್ಕೂ ಇರಬೇಕಾಗಿತ್ತು. ಆದರೆ ಸರ್ಕಾರ ಬುರಡೆ ಗ್ಯಾಂಗ್ ಬೀಸಿದ ಬಲೆಗೆ ಸಿಲುಕಿತು. ಧರ್ಮಸ್ಥಳದ ವಿಚಾರದಲ್ಲಿ ಅವರು ಹೇಳುತ್ತಿರುವುದು ಸುಳ್ಳು. ಮೊದಲು ಬುರಡೆ ಗ್ಯಾಂಗ್ನ ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕಾಗಿತ್ತು. ಆದರೆ ಅವರ ತುತ್ತೂರಿಗೆ ತಲೆದೂಗಿ ಎಸ್ಐಟಿ ರಚಿಸಿದರು. ಸಮೀರ್, ಮಟ್ಟಣ್ಣ, ಮಹೇಶ್ ತಿಮರೋಡಿ ಎಂಬವರು ನಿರಂತರವಾಗಿ ಸುಳ್ಳು, ಬುರಡೆ ಬಿಡುತ್ತಿದ್ದರೂ ಸರ್ಕಾರ ಮಧ್ಯೆ ಪ್ರವೇಶ ಮಾಡಲಿಲ್ಲ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಟೀಕಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಗೌರಿ-ಗಣೇಶ್, ಈದ್ ಮಿಲಾದ್ ಹಬ್ಬದ ಆಚರಣೆಗೆ ಸೂಕ್ತ ಭದ್ರತೆ; ಎಸ್ಪಿ ವಿಕ್ರಂ ಅಮಟೆ
ಈ ಕುರಿತು ಎಸ್ಐಟಿ ತನಿಖೆ ಮುಂದುವರಿಯಬೇಕಾದರೆ ಅದನ್ನು ಹಾಲಿ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳೇ ಮಾನಿಟರ್ ಮಾಡಬೇಕು. ರಿಪೋರ್ಟ್ ಅವರಿಗೂ ಹೋಗಬೇಕು. ಇಲ್ಲದಿದ್ದರೆ ಎನ್ಐಎ ತನಿಖೆ ನಡೆಸಬೇಕು. ಇದು ನಮ್ಮ ಸ್ಪಷ್ಟವಾದ ನಿಲುವು ಎಂದು ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ತಿಳಿಸಿದರು.





