ಚಿಕ್ಕಮಗಳೂರು ತಾಲ್ಲೂಕಿನ ಉದ್ದೇಬೋರನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಲಕ್ಯಾ ಹೋಬಳಿ ಘಟಕದ ಉದ್ದೇಬೋರನಹಳ್ಳಿ ಶಾಖೆಯಿಂದ ರೈತ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ರಾಷ್ಟ್ರದಲ್ಲೇ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲೇ ಹಾವೇರಿ ಮೊದಲ ಸ್ಥಾನ ಪಡೆದಿದೆ. ಇದಕ್ಕೆ ಮೂಲ ಕಾರಣವೇನು, ರೈತರು ಬದುಕುವ ಭರವಸೆ ಕಳೆದುಕೊಂಡು ಆತಂಕ ಸ್ಥಿತಿಯಲ್ಲಿರುವುದನ್ನು ಪ್ರತಿಯೊಬ್ಬರು ಅವಲೋಕಿಸಬೇಕು. ದೇಶದ ವಿಜ್ಞಾನಿಗಳು ರೈತರ ಇಳುವರಿ ಹೆಚ್ಚಳಗೊಳಿಸಲು ಸಾಕಷ್ಟು ಪ್ರಯೋಗ ನಡೆಸಿದರು. ಹೊಸ ಆವಿಷ್ಕಾರಗಳಿಂದ ಬೀಜಗಳನ್ನು ಉತ್ಪಾದಿಸಿ ಯಶಸ್ವಿಗೊಂಡರು. ಆದರೆ ರೈತರನ್ನು ಸ್ವಾವಲಂಬಿ ಮಾಡುವ ಪ್ರಯೋಗಗಳು ವಿಜ್ಞಾನಿಗಳಿಂದ ನಡೆಯಲಿಲ್ಲ. ಈ ಹೊರತಾಗಿ ಸ್ವಾವಲಂಬಿ ರೈತರನ್ನು ಪರಾವಲಂಬಿಗಳಾಗಿ ಮಾಡಲಾಯಿತು ಎಂದು ಸಿ.ಟಿ ರವಿ ತಿಳಿಸಿದರು.
ದೇಶದ ಶೇ.70 ರೈತಾಪಿ ವರ್ಗ ಹೊಂದಿರುವ ಭಾರತ ಕೃಷಿಪ್ರಧಾನ ರಾಷ್ಟ್ರವಾಗಿದೆ. ರೈತನ ಶಕ್ತಿಯೇ ಎತ್ತು, ಹಸುಗಳು. ಇದರಿಂದ ಹೈನುಗಾರಿಕೆಯನ್ನು ಉಪಕಸುಬಿನಂತೆ ಪ್ರಾರಂಭಿಸಿದ್ದಾರೆ. ಆ ನಿಟ್ಟಿನಲ್ಲಿ ರಾಜ್ಯಸರ್ಕಾರ ನೀರಾವರಿ ವ್ಯವಸ್ಥೆ ಕಲ್ಪಿಸಿಕೊಟ್ಟು ರೈತರ ಬೆಳೆಗಳಿಗೆ ಸೂಕ್ತ ಬೆಲೆ ಒದಗಿಸುತ್ತಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದರು.
ಪ್ರತಿನಿತ್ಯದ ಆಹಾರ ಸೇವನೆ ಜೊತೆಗೆ ಮಾತ್ರೆಗಳನ್ನು ತೆಗೆದುಕೊಳ್ಳುವಷ್ಟು ಮಾನವ ಪರಾವಲಂಬಿ ಸ್ಥಿತಿಗೆ ತಲುಪಿದ್ದೇವೆ. ನಮ್ಮ ಹಿರಿಯರು ಸಹಜವಾಗಿ ಪ್ರಕೃತಿಯೊಂದಿಗೆ ಜೋಡಿಸಿಕೊಂಡು ಬಂದಿದ್ದ ಕೃಷಿ ಜೀವನ ಹಾಗೂ ಆಹಾರ ಪದ್ಧತಿಯಿಂದ ಹೊರಬಂದಿದ್ದಾರೆ. ಇಂದು ಪ್ರತಿ ಬೆಳೆಗಳಿಗೂ ಔಷಧಿ ಸಿಂಪಡಿಸಿ, ರಾಸಾಯನಿಕ ಗೊಬ್ಬರ ಬಳಸುವಂತಾಗಿದೆ ಎಂದು ರೈತ ಮುಖಂಡರು ಮಾತಾಡಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಜ.17 ರಂದು ಡಿಸಿಸಿ ಬ್ಯಾಂಕ್ ಚುನಾವಣೆ
ಈ ವೇಳೆ ರಾಜಕೀಯ ಮುಖಂಡರು, ರೈತ ಮುಖಂಡರು ಹಾಗೂ ಕಾರ್ಯಕರ್ತರು,, ಸ್ಥಳೀಯರು ಭಾಗವಹಿಸಿದ್ದರು.





