ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಜನವರಿ 15ರಿಂದ 25ರವರೆಗೆ ಕ್ಷೇತ್ರ ಮಟ್ಟದಲ್ಲಿ “ಮಲೆನಾಡಿಗರ ಬದುಕನ್ನು ಉಳಿಸಿ” ಎಂಬ ಘೋಷವಾಕ್ಯದೊಂದಿಗೆ ಜನಜಾಗೃತಿ ಯಾತ್ರೆಯನ್ನು ಕೈಗೊಳ್ಳಲಾಗಿದೆ. ಜನ ಜಾಗೃತಿ ಮೂಡಿಸುವ ಸಲುವಾಗಿ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಉದ್ಘಾಟನೆ ಮಾಡಿದರು.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆರೆಕಟ್ಟೆ, ನೆಮ್ಮಾರು, ಕಿಗ್ಗಾ, ಕಲ್ಕಟ್ಟೆ ಭಾಗಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಜೊತೆಗೆ ಮನೆಮನೆಗೆ ಕರಪತ್ರ ವಿತರಣೆ ಹಾಗೂ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು. ಕಸ್ತೂರಿ ರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮ ವಲಯ, ಆನೆ ಮತ್ತು ಕಾಡುಪ್ರಾಣಿಗಳ ಹಾವಳಿ, ನಿವೇಶನ ಹಾಗೂ ವಾಸದ ಮನೆ ಸಮಸ್ಯೆ, ಜೀವನಾಧಾರಿತ ಸಾಗುವಳಿ ಭೂಮಿ ತೆರವು, ಎಸ್ಐಟಿ ರಚನೆ, ಸೊಪ್ಪಿನ ಬೆಟ್ಟ, ಮಲೆನಾಡಿನಲ್ಲಿ ಪರ್ಯಾಯ ಬೆಳೆ, ಸೆಕ್ಷನ್ 4(1), ಸೆಕ್ಷನ್ 17, ಡೀಮ್ಡ್ ಅರಣ್ಯ ಕಾಯ್ದೆ, ಕಾರ್ಮಿಕರು ಮತ್ತು ವರ್ತಕರ ಸಮಸ್ಯೆಗಳು, ಕೆರೆಕಟ್ಟೆ ಹಾಗೂ ಭದ್ರ ಹಿನ್ನೀರಿನ ಸಂತ್ರಸ್ತರಿಗೆ ನ್ಯಾಯ, ಭದ್ರ ಹುಲಿ ಯೋಜನೆಯ ಬಫರ್ ಝೋನ್ ಮತ್ತು ಪರಿಸರ ಸೂಕ್ಷ್ಮ ವಲಯ,

ಹಳದಿ ಎಲೆ, ಕೊಳೆ ರೋಗ, ಎಲೆ ಚುಕ್ಕಿ ರೋಗ, ಕೃಷಿ ವಲಯದಲ್ಲಿ ಸರ್ಫೇಸಿ ಕಾಯ್ದೆ, ಬೆಳೆ ವಿಮೆ ಸಮಸ್ಯೆ, ಪಟ್ಟಣಗಳಿಗೆ ಯುವಕರ ವಲಸೆ ಸೇರಿದಂತೆ ಹಲವಾರು ಪ್ರಸ್ತುತ ಹಾಗೂ ಭವಿಷ್ಯದ ಆತಂಕಗಳ ಕುರಿತು ರೈತರು, ಕಾರ್ಮಿಕರು ಮತ್ತು ನಾಗರಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಸಮಿತಿಯ ಮುಖಂಡರು ತಿಳಿಸಿದರು.

ಪರಿಸರ ಸಂರಕ್ಷಣೆ ಅಗತ್ಯವಾದರೂ, ಅದರ ಹೆಸರಿನಲ್ಲಿ ಸ್ಥಳೀಯ ನೆಲವಾಸಿಗಳ ಬದುಕು ಕಸಿದುಕೊಳ್ಳಬಾರದು. ಅವೈಜ್ಞಾನಿಕವಾಗಿ ಜಾರಿಯಾಗುತ್ತಿರುವ ಹಲವು ಯೋಜನೆಗಳಿಂದ ಮಲೆನಾಡಿನ ರೈತರು ಮತ್ತು ಕಾರ್ಮಿಕರ ಹಕ್ಕುಗಳಿಂದ ವಂಚಿತರಗಿದ್ದಾರೆ. ಯಾವುದೇ ರಾಜಕೀಯ ಉದ್ದೇಶವಿಲ್ಲದೆ ಮಲೆನಾಡಿಗರ ಬದುಕನ್ನು ಉಳಿಸುವ ನಿಟ್ಟಿನಲ್ಲಿ ಈ ಯಾತ್ರೆ ಆರಂಭಿಸಲಾಗಿದೆ. ಹತ್ತಾರು ಮಾರಕ ಅರಣ್ಯ ಕಾಯ್ದೆಗಳು ಹಾಗೂ ಅವುಗಳ ಅವೈಜ್ಞಾನಿಕ ಅನುಷ್ಠಾನದಿಂದ ನಮ್ಮ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಸೆಕ್ಷನ್ 4ನ್ನು 17ಕ್ಕೆ ಪರಿವರ್ತಿಸುವಾಗ ನೈಸರ್ಗಿಕ ನ್ಯಾಯ ಪಾಲನೆ ಆಗದೆ ರೈತರು ಮತ್ತು ಕಾರ್ಮಿಕರನ್ನು ವಂಚಿಸಲಾಗುತ್ತಿದೆ. ಎಸ್ಐಟಿ ರಚನೆಯಿಂದ ಈಗಾಗಲೇ ದಾಖಲೆ ಹೊಂದಿರುವ ಭೂಮಿಗೂ ಕುತ್ತು ಬರುವ ಆತಂಕವಿದೆ. ಕಾಡಾನೆ ದಾಳಿಯಿಂದ ರೈತರು ಕೃಷಿ ತೋಟಕ್ಕೆ ಹೋಗಲು ಹೆದರುವ ಪರಿಸ್ಥಿತಿ ಎದುರಾಗಿದೆ ಎಂದು ರೈತ, ಕಾರ್ಮಿಕ ನಾಗರೀಕ ಸಮಿತಿಯ ಮುಖಂಡರು ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಡಿಸಿಸಿ ಬ್ಯಾಂಕ್ ಚುನಾವಣೆ; ನಿಷೇಧಾಜ್ಞೆ ಜಾರಿ
ಈ ಸಂದರ್ಭದಲ್ಲಿ ಸಮಿತಿಯ ಆದರ್ಶ, ಅಶ್ವಿನ್, ಸುಭಾಷ್, ಕಿರಣ್, ಸಚಿನ್, ಸಂತೋಷ್, ರವಿ, ಅನಿರುದ್ದ್, ಮಂಜುನಾಥ್, ಮಂಜುನಾಥ್ ಯಡದಾಳ್, ನೂತನ್ ಕುಮಾರ್, ರಾಜಕುಮಾರ್ ಹೆಗ್ಡೆ, ಶ್ರೀಧರ್, ಸಂತೃಪ್ತ್, ಆಶಿಕ್, ದಿವೀರ್ ಮಲ್ನಾಡ್, ಸುಭಾಷ್ ಚಂದ್ರ ಹಾಗೂ ಇನ್ನಿತರರಿದ್ದರು.





