ಮಲೆನಾಡಿನ ಪ್ರಕೃತಿ ಸೌಂದರ್ಯ, ಧಾರ್ಮಿಕ ದರ್ಗಾಗಳ ಶಾಂತ ವಾತಾವರಣ ಅನುಭವಿಸಲು ಕರ್ನಾಟಕದ ಮಲೆನಾಡು ಭಾಗಕ್ಕೆ ಪ್ರತಿದಿನ ನೂರಾರು ಪ್ರವಾಸಿಗರು ಹಾಗೂ ಭಕ್ತಾದಿಗಳು ವಿವಿಧ ರಾಜ್ಯಗಳಿಂದ, ವಿದೇಶಗಳಿಂದ ಭೇಟಿ ನೀಡುತ್ತಾರೆ. ಹಿಂದೆ ಇಲ್ಲಿನ ಪ್ರವಾಸಿ ತಾಣಗಳಿಗೆ ಬೇಕೆಂದಾಗಲೆಲ್ಲಾ ಪ್ರವೇಶಿಸಲು ಅವಕಾಶವಿತ್ತು. ಆದರೆ ಇತ್ತೀಚೆಗೆ ಸರ್ಕಾರ ಬಾಬಾ ಬುಡನ್ಗಿರಿ ಸೇರಿದಂತೆ ಹಲವು ಪ್ರವಾಸಿ ಮತ್ತು ಧಾರ್ಮಿಕ ತಾಣಗಳಿಗೆ ಆನ್ಲೈನ್ ನೋಂದಣಿ ಕಡ್ಡಾಯ ಎಂದು ಆದೇಶ ಹೊರಡಿಸಿದೆ. ಈ ಹೊಸ ಕ್ರಮ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರವಾಸಿಗರು ಹೇಳುವಂತೆ, ಆನ್ಲೈನ್ ವ್ಯವಸ್ಥೆಯನ್ನು ಬಳಸಲು ಸ್ಮಾರ್ಟ್ಫೋನ್, ಇಂಟರ್ನೆಟ್, OTP, ಡಿಜಿಟಲ್ ಪಾವತಿ ಸೇರಿದಂತೆ ಹಲವು ಹಂತಗಳಿವೆ. ನಗರ ಪ್ರದೇಶದ ಜನರಿಗೆ ಇದು ಸಲೀಸಾಗಿದ್ದರೂ, ಗ್ರಾಮೀಣ ಮತ್ತು ಬಡ ವರ್ಗದ ಜನರಿಗೆ ಈ ಪ್ರಕ್ರಿಯೆ ಕಬ್ಬಿಣದ ಕಡಲೆಯಾಗಿದೆ. ಹಳ್ಳಿ ಭಾಗದಲ್ಲಿ ಬಹುತೇಕರು ಉನ್ನತ ವಿದ್ಯಾಭ್ಯಾಸ ಪಡೆಯದೇ ಇರುವವರಿದ್ದಾರೆ. ಅಂತಹವರಿಗೆ ಈ ಆನ್ಲೈನ್ ನೋಂದಣಿ ಪ್ರಕ್ರಿಯೆ ಕುರಿತು ಯಾವುದೇ ಅರಿವಿಲ್ಲ.
“ಹಿಂದೆ ಕುಟುಂಬದೊಂದಿಗೆ ಅಕಸ್ಮಾತ್ ಪ್ರವಾಸಕ್ಕೆ ನಿರ್ಧರಿಸಿದರೆ, ತಕ್ಷಣವೇ ಹೊರಡಬಹುದಾಗಿತ್ತು. ಈಗ ಮೊದಲೇ ಯೋಜನೆ ಮಾಡಿ ನೋಂದಣಿ ಮಾಡಿಕೊಂಡಿರಬೇಕು. ವಿಶೇಷವಾಗಿ ಬಾಬಾ ಬುಡನ್ಗಿರಿ ಮತ್ತು ಇತರೆ ದರ್ಗಾಗಳಿಗೆ ದೂರದ ಊರುಗಳಿಂದ ಬರುವ ಭಕ್ತಾದಿಗಳು ರಸ್ತೆಯಲ್ಲಿ ಗಂಟೆಗಟ್ಟಲೆ ಪ್ರಯಾಣಿಸಿ ತಲುಪಿದ ಬಳಿಕ “ಬುಕ್ಕಿಂಗ್ ಇಲ್ಲದಿದ್ದರೆ ಪ್ರವೇಶವಿಲ್ಲ” ಎಂದು ಹೇಳುವುದರಿಂದ ಅವರ ಭಾವನೆಗಳಿಗೆ ತೀವ್ರ ಧಕ್ಕೆ ಉಂಟಾಗುತ್ತಿದೆ” ಎನ್ನುತ್ತಾರೆ ಪ್ರವಾಸಿಗಳು.

ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕೊಟ್ಟಿದ್ದರೂ, ಮಲೆನಾಡಿನ ಪ್ರವಾಸ ತಾಣಗಳಿಗೆ ತಲುಪಿದ ಮೇಲಿನ ಅಡ್ಡಿ ಮಾತ್ರ ಹೋಗಿಲ್ಲ. ಹೋರ ರಾಜ್ಯದಿಂದ ಬರುವ ಭಕ್ತಾದಿಗಳಿಗೆ ಈ ಬದಲಾವಣೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. “ನಾವು ಇಲ್ಲಿ ಬಂದ ನಂತರವೇ ತಿಳಿಯುತ್ತದೆ, ಮೊದಲೇ ಆನ್ಲೈನ್ ಬುಕ್ಕಿಂಗ್ ಮಾಡಿರಬೇಕು ಎಂದು! ದೂರದಿಂದ ಬಂದು ಈಗ ಹಿಂತಿರುಗಬೇಕೆ?” ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ಇಂಟರ್ನೆಟ್ ಇಲ್ಲದೆ, ಸ್ಮಾರ್ಟ್ಫೋನ್ ಇಲ್ಲದೇ ಬಂದಿರುವುದು ಸಾಮಾನ್ಯ. ಬುಕ್ಕಿಂಗ್ ಮಾಡೋ ವಿಧಾನ ತಿಳಿಯದೇ ದ್ವಾರದಲ್ಲೇ ನಿಲ್ಲುವ ಪರಿಸ್ಥಿತಿಗಳೂ ಇವೆ.
ಸ್ಥಳೀಯ ನಿವಾಸಿಗಳು ಮತ್ತು ಪ್ರವಾಸಿಗರನ್ನು ಕರೆದೊಯ್ಯುವ ವಾಹನಗಳ ಮಾಲೀಕರು ಈದಿನ.ಕಾಂ ಜೊತೆ ಮಾತನಾಡಿ, “ಸರ್ಕಾರ ಹೇಳೋದು ಪ್ರವಾಸೋದ್ಯಮ ಬೆಳೆಸೋದು ಅಂತ, ಆದರೆ ಈ ಆನ್ಲೈನ್ ಬುಕ್ಕಿಂಗ್ ಗೊಂದಲದಿಂದ 15 ರಿಂದ 20 ಸಾವಿರ ಕುಟುಂಬಗಳು ನೇರವಾಗಿ ಸಂಕಷ್ಟಕ್ಕೆ ಸಿಲುಕಿವೆ. ನಮ್ಮ ಟ್ಯಾಕ್ಸಿ, ಲಾಡ್ಜ್, ಹೋಟೆಲ್, ಗೈಡ್, ಚಹಾ ಅಂಗಡಿ—ಎಲ್ಲರ ವ್ಯವಹಾರ ಕುಂದಿದೆ. ಜನ ಬರುತ್ತಿದ್ದಾರೆ, ಆದರೆ ಒಳ ಹೋಗಲು ಆಗದೆ ಮಧ್ಯದಲ್ಲೇ ಹಿಂತಿರುಗುತ್ತಿದ್ದಾರೆ” ಎಂದರು.
ಮಲೆನಾಡಿನ ಪ್ರಮುಖ ಪ್ರವಾಸ ತಾಣಗಳಲ್ಲಿ ವಾಹನಗಳ ದಟ್ಟ ಸಂಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ʼಆನ್ಲೈನ್ ಬುಕ್ಕಿಂಗ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಜಾರಿಗೊಳಿಸಲಾಗಿದೆʼ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಿಂದ ಮಾಹಿತಿ ಹೊರಬಿದ್ದ ಕೂಡಲೆ ಅದು ಎಲ್ಲೆಡೆ ಹಬ್ಬಿತು. ಸದ್ಯಕ್ಕೆ ಮಾತ್ರ ಈ ವ್ಯವಸ್ಥೆ ಎಂದು ಹೇಳಿದ್ದರೂ, ʼಈ ಆದೇಶ ಇದೇ ರೀತಿ ಮುಂದುವರೆದರೆ?ʼ ಎಂಬ ಭಯದ ವಾತಾವರಣ ಪ್ರವಾಸಿಗರು, ಭಕ್ತಾದಿಗಳು ಹಾಗೂ ಪ್ರವಾಸ ವಾಹನ ಮಾಲೀಕರಲ್ಲಿ ಆವರಿಸಿದೆ.
“ಆನ್ಲೈನ್ ನೋಂದಣಿ ಮಾಡಿರುವುದರಿಂದ ನಮಗೆ ಬರುವುದಕ್ಕೆ ತುಂಬಾ ತೊಂದರೆಯಾಗುತ್ತಿದೆ. ಹಾಗೆಯೇ, ಪ್ರವಾಸ ತಾಣಗಳಿಗೆ ಬರುವಂತಹ ವಾಹನಗಳಿಗೆ ಹೆಚ್ಚಿನ ಶುಲ್ಕ ಪಡೆಯುತ್ತಿದ್ದಾರೆ. ಬೈಕಿಗೆ ರೂ.50, ಕಾರಿಗೆ ರೂ.100, ಟಿಟಿ ಗಾಡಿಗಳಿಗೆ ಹಾಗೂ ಇತರೆ ಗಾಡಿಗಳಿಗೆ ರೂ.150ಕ್ಕಿಂತ ಹೆಚ್ಚು ಹಣವನ್ನು ಪಡೆಯುತ್ತಿದ್ದಾರೆ” ಎಂದು ಪ್ರವಾಸಿಗರು ಆರೋಪಿಸಿದರು.

“ಶುಲ್ಕ ಪಡೆಯುವುದು ತಪ್ಪಲ್ಲ. ಆದರೆ ಅದಕ್ಕೆ ತಕ್ಕ ಸೌಲಭ್ಯಗಳಿದ್ದರೆ ಮಾತ್ರ!” ಎನ್ನುವುದು ಪ್ರವಾಸಿಗರ ವಾದ. ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳಿಂದ ಪ್ರಯಾಣವೇ ಕಷ್ಟ. ಕುಟುಂಬ ಸಮೇತ ಬಂದರೆ ಶೌಚಾಲಯಗಳ ಕೊರತೆ. ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಪ್ರವಾಸ ತಾಣದೊಳಗಿನ ಸೈನ್ ಬೋರ್ಡ್, ಸುರಕ್ಷತಾ ಸಿಬ್ಬಂದಿ, ಕ್ಲೀನಿಂಗ್ ಎಲ್ಲವೂ ಅಸ್ತವ್ಯಸ್ತ. ವಾಹನ ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ. ಪರಿಸ್ಥಿತಿ ಹೀಗಿರುವಾಗ ಅವುಗಳನ್ನು ಸರಿಪಡಿಸುವುದು ಬಿಟ್ಟು, ಅನಗತ್ಯವಾಗಿ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ ಮಾಡಿದ್ದಾರೆ. ʼಅಭಿವೃದ್ಧಿ ಮಾಡಿ, ಸೌಲಭ್ಯ ಕೊಟ್ಟು ಆಮೇಲೆ ಶುಲ್ಕ ತೆಗೆದುಕೊಳ್ಳಲಿ. ಆದರೆ ಇಲ್ಲಿ ಸೌಲಭ್ಯ ಇಲ್ಲದಿದ್ದರೂ ಶುಲ್ಕ ಮಾತ್ರ ಹೆಚ್ಚಿಸಿದ್ದಾರೆ. ಅದರ ಮೇಲೆ ಬುಕ್ಕಿಂಗ್ ಬೇರೆ” ಎನ್ನುವುದು ಸ್ಥಳೀಯರ ಆಕ್ರೋಶ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಪ್ರವಾಸಿತಾಣಕ್ಕೆ ಬರುವ ಪ್ರವಾಸಿಗರಿಗೆ ಆನ್ಲೈನ್ ನೋಂದಣಿ ಕಡ್ಡಾಯ; ಸ್ಥಳೀಯರ ಆಕ್ರೋಶ
ಮಲೆನಾಡಿನ ಪ್ರವಾಸೋದ್ಯಮ ಅನೇಕ ಕುಟುಂಬಗಳ ಜೀವನಾಧಾರ. ಹಳ್ಳಿಗಳಲ್ಲಿರುವ ಹೋಂ ಸ್ಟೇಗಳು, ರೆಸಾರ್ಟ್ಗಳು, ಪ್ರವಾಸಿಗರನ್ನು ಬೆಟ್ಟ-ಪರ್ವತಗಳಿಗೆ ಕರೆದೊಯ್ಯುವ ವಾಹನ ಮಾಲೀಕರು, ಸ್ಥಳೀಯ ಮಾರ್ಗದರ್ಶಕರು… ಇವರ ಬದುಕೇ ಪ್ರಕೃತಿ ಪ್ರವಾಸದ ಮೇಲೆ ಅವಲಂಬಿತವಾಗಿದೆ. ಆದರೆ ಸರ್ಕಾರ ಜಾರಿಗೊಳಿಸಿದ ಆನ್ಲೈನ್ ನೋಂದಣಿ ನೀತಿಯಿಂದ ಈ ಸಮಗ್ರ ವಲಯವೇ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.
ʼಈ ನೋಂದಣಿ ಬೇಡವಾಗಿತ್ತುʼ ಎಂದು ಅನೇಕರು ನೋವಿನಿಂದ ಹೇಳುತ್ತಾರೆ. ಯಾರಾದರೂ ಮಲೆನಾಡಿಗೆ ಬರಲು ನಿರ್ಧರಿಸಿದರೂ, ನೋಂದಣಿ ಮಾಡಬೇಕಾ? ಎಂಬ ಪ್ರಶ್ನೆ ಕೇಳುತ್ತಿದ್ದಂತೆಯೇ ಅವರು ಗೊಂದಲಕ್ಕೀಡಾಗಿ ಹಿಂದೆ ಸರಿಯುತ್ತಾರೆ. ಅನೇಕರು ನೋಂದಣಿ ಮಾಡದೇ ಬಂದರೂ, ‘ಬುಕ್ಕಿಂಗ್ ಇಲ್ಲ’ ಎಂದು ವಾಪಸಾಗುತ್ತಾರೆ. ಇದರಿಂದ ಪ್ರವಾಸಿಗರ ಸಂಖ್ಯೆ ಕುಸಿಯುತ್ತಿದೆ. ಜತೆಗೆ ಸ್ಥಳೀಯ ವ್ಯಾಪಾರವೂ. ಈ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಗಮನಕ್ಕೆ ತೆಗೆದುಕೊಳ್ಳುತ್ತಾರಾ? ಪ್ರವಾಸೀ ತಾಣಗಳ ಸ್ಥಳೀಯ ವ್ಯಾಪಾರಕ್ಕೆ ಅನುವು ಮಾಡಿಕೊಡುತ್ತಾರಾ? ಕಾದು ನೋಡಬೇಕಿದೆ.





