ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನಲ್ಲಿ ಪಟ್ಟಣ ಪಂಚಾಯಿತಿ ಅಸ್ತಿತ್ವದಲ್ಲಿದೆಯೇ ಎಂಬ ಪ್ರಶ್ನೆಯನ್ನು ಕೇಳಬೇಕಾಗಿದೆ ಎಂದು ಬೋರನಕಣಿವೆ ಸುವರ್ಣ ವಿದ್ಯಾ ಚೇತನದ ಅಧ್ಯಕ್ಷ ರಾಮಕೃಷ್ಣಪ್ಪ ಸಂಶಯ ವ್ಯಕ್ತಪಡಿಸಿದರು.
ಹುಳಿಯಾರು ಪಟ್ಟಣ ಪಂಚಾಯಿತಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘದ ಹೊಸಹಳ್ಳಿ ಚಂದ್ರಣ್ಣ ಬಣದಿಂದ ಸಂತೆ ಮೈದಾನದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಹಾಗೂ ಕಸವಿಲೇವಾರಿ ಘಟಕಕ್ಕೆ ಭೂಮಿ ನೀಡಲು ಒತ್ತಾಯಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಭಾನುವಾರ 18 ನೇ ದಿನ ಪೂರೈಸಿದೆ. ಈ ದಿನ ರೈತರೊಂದಿಗೆ ಬೋರನಕಣಿವೆ ಸುವರ್ಣ ವಿದ್ಯಾ ಚೇತನದಿಂದ ಧರಣಿಯಲ್ಲಿ ಕುಳಿತು ಬೆಂಬಲ ಸೂಚಿಸಿ ಮಾನಾಡಿದರು.
ಕಸ ವಿಲೇವಾರಿ ಮತ್ತು ಸಂತೆ ಸ್ಥಳಾಂತರದ ಬಗ್ಗೆ ರಾಜ್ಯ ರೈತ ಸಂಘದ ಹೊಸಳ್ಳಿ ಚಂದ್ರಣ್ಣ ಬಣದ ರೈತರ ಧರಣಿ 18 ನೇ ದಿನಕ್ಕೆ ಕಾಲಿಟ್ಟರೂ, ಇಲ್ಲಿಗೆ ಜನರಿಂದ ಆಯ್ಕೆಯಾದ ಅಧ್ಯಕ್ಷರಾಗಲಿ ಉಪಾಧ್ಯಕ್ಷರಾಗಲಿ ಬಂದು ಸಮಸ್ಯೆ ಬಗೆ ಹರಿಸಲು ಪ್ರಯತ್ನ ಪಟ್ಟಿಲ್ಲ. ಪಟ್ಟಣ ಪಂಚಾಯತಿ ಸದಸ್ಯರು ಈ ಕಡೆ ತಲೆ ಹಾಕಿಲ್ಲ. ಚಳಿ ಮಳೆ ಬಿಸಿಲನ್ನು ಸಹಿಸಿಕೊಂಡು ರೈತರು ನಡೆಸುತ್ತಿರುವ ಆಹೋ ರಾತ್ರಿ ನಡೆಯುತ್ತಿರುವ ಧರಣಿÀ ಇವರ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಬೇಕಾಗಿದೆ, ಅಧಿಕಾರದ ಸವಿಯನ್ನು ಉಂಡ ಇವರಿಗೆ ಸಮಸ್ಯೆಯನ್ನು ಬಗೆಹರಿಸಬೇಕಾದ ನೈತಿಕ ಜವಾಬ್ದಾರಿ ಇಲ್ಲವೇ? ಈ ಪ್ರಶ್ನೆಗಳಿಗೆ ಮುಷ್ಕರ ನಡೆಯುತ್ತಿರುವ ಸ್ಥಳಕ್ಕೆ ಬಂದು ಉತ್ತರಿಸಬೇಕೆಂದು ಆಗ್ರಹಿಸಿದರು.
ವಾರದ ಸಂತೆಯಲ್ಲಿ ಸುಂಕ ವಸೂಲಿ ಮಾಡುತ್ತಿರುವ ಹಣ ಎಲ್ಲಿ ಹೋಯಿತು ಎಂದು ಅಲೆಮಾರಿ ಸಂಘಟನೆಯ ನಾಯಕಿ ಲಕ್ಷ್ಮೀ ಪ್ರಶ್ನಿಸಿದರು. ಅಧಿಕಾರಿಗಳು ಬಂದು ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಹೇಳುತ್ತಲೇ ದಿನವನ್ನು ದೂಡುತ್ತಿದ್ದಾರೆ ಎಂದು ರೈತ ನಾಯಕ ಮಲ್ಲೇಶಪ್ಪ ಬೇಸರಗೊಂಡು ಆಪಾದಿಸಿದರು. ಮಹಿಳಾ ಸಂಘಟನೆ ಅಧ್ಯಕ್ಷೆ ಶಿವಲಿಂಗಮ್ಮ, ಗೃಹಿಣಿ ಲತಾ ಮಣಿ ಮಾತನಾಡಿದರು. ನಿರ್ಗತಿಕರ ಮಹಿಳೆಯರ ಸಂಘದ ಅಧ್ಯಕ್ಷೆ ಹೋರಾಟಗಾರ್ತಿ ಜಯಲಕ್ಷ್ಮಿ ಸಮಸ್ಯೆ ಬಗೆ ಹರಿಯುವವರೆಗೂ ಮುಷ್ಕರ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ, ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಕರಿಯಪ್ಪ, ಟಿ.ಎಸ್.ಪ್ರಶಾಂತ್, ಮಲ್ಲೇಶಣ್ಣ, ನೀರಾ ಈರಣ್ಣ, ಓಂಕಾರಮ್ಮ, ಟಿ.ಎನ್.ಶಿವಣ್ಣ, ಎನ್.ಜಿ.ರೇವಣ್ಣ, ಎಂ.ಶ್ರೀನಿವಾಸ್, ಎಚ್.ಪಿ,ಮಂಜುನಾಥ್, ಪುಟ್ಟಯ್ಯ, ಹೂವಿನತಿಮ್ಮಣ್ಣ, ಪೆದ್ದಾಬೋವಿ, ದುರ್ಗಾರಾಜು, ಹನುಮಂತರಾಜ್ ಅರಸ್, ಮಂಜುನಾಥ್, ಶ್ರೀನಿವಾಸ್, ಶ್ರೀಧರ್, ಗಂಗಾಧರಯ್ಯ, ವಸಂತಪ್ಪ, ಪುಷ್ಪಭಾಯಿ, ಮಹಿಳಾ ಸಂಘಟನೆಯ ಅಂಜಿನಮ್ಮ, ಸುಂದರಮ್ಮ ಮತ್ತಿತರರು ಧರಣಿಯಲ್ಲಿ ಭಾಗವಹಿಸಿದ್ದರು.





