ಪ್ರಸ್ತುತ SC/ST ಕುಂದುಕೊರತೆಗಳ ಸಭೆಗಳು ಕಚೇರಿಗಳಲ್ಲಿಯೇ ನಡೆಯುತ್ತಿರುವುದರಿಂದ ದಲಿತ ಸಮುದಾಯದ ನೈಜ ಸಮಸ್ಯೆಗಳು ಬೆಳಕಿಗೆ ಬಾರದೇ ಉಳಿಯುತ್ತಿವೆ. ಹಾಗಾಗಿ ಸಮುದಾಯಗಳ ಸಮಸ್ಯೆ ಬಗೆಹರಿಸಲು ದಲಿತ ಕೇರಿಗಳಲ್ಲೂ ಸಭೆ ನಡೆಸಬೇಕು ಎಂದು ಚಿಕ್ಕನಾಯಕನಹಳ್ಳಿ ಠಾಣಾ ಸಬ್ ಇನ್ಸ್ಪೆಕ್ಟರ್ ಯತೀಶ್ ಅವರಿಗೆ ಮನವಿ ಮಾಡಿದರು.
ನಗರದ ಪೊಲೀಸ್ ಠಾಣೆಯಲ್ಲಿ ನಡೆದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡದವರ ಕುಂದುಕೊರತೆಗಳ ಸಭೆಯಲ್ಲಿ ಹಲವು ದಲಿತ ಸಂಘಟನೆಗಳ ಮುಖಂಡರು ಹಾಗೂ ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿ ಮಾತನಾಡಿದರು.
ಜಾತಿ ತಾರತಮ್ಯ, ದೇವದಾಸಿ ಪದ್ಧತಿ ಮತ್ತು ಸಾಮಾಜಿಕ ಅಸಮಾನತೆ, ಶಿಕ್ಷಣದಿಂದ ಹೊರಗುಳಿಯುತ್ತಿರುವ ದಲಿತ ಮಕ್ಕಳು ಹಾಗೂ ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿರುವುದು, ಹಳ್ಳಿಗಳಲ್ಲಿ ಅಕ್ರಮ ಮದ್ಯ ಹಾಗೂ ಗಾಂಜಾ ಚಟುವಟಿಕೆಗಳ ಹೆಚ್ಚಳ, ದುಶ್ಚಟಗಳಿಗೆ ದಲಿತ ಮಕ್ಕಳು ಬಲಿಯಾಗುತ್ತಿರುವುದು, ದಲಿತ ಹೆಣ್ಣುಮಕ್ಕಳ ಮೇಲಿನ ಹಿಂಸಾಚಾರ ಮತ್ತು ಪೋಕ್ಸೋ ಪ್ರಕರಣಗಳ ಏರಿಕೆ, ಮೈಕ್ರೋಫೈನಾನ್ಸ್ ಸಂಸ್ಥೆಗಳ ಸಿಬ್ಬಂದಿಯಿಂದ ದಲಿತ ಕುಟುಂಬಗಳ ಮೇಲೆ ದಬ್ಬಾಳಿಕೆ, ವಾರದ ಬಡ್ಡಿ ಮತ್ತು ಕಿರುಕುಳದ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಿರುವುದು, ಪೊಲೀಸ್ ಇಲಾಖೆಯ ಮೇಲಿನ ಭಯ ಹಾಗೂ ಅವಿಶ್ವಾಸ, ದೂರು ದಾಖಲಿಸುವಲ್ಲಿ ವಿಳಂಬ ಮತ್ತು ರಾಜಿ ಸಂಧಾನದ ಒತ್ತಾಯ, ಹಳ್ಳಿಗಳಲ್ಲಿ ಗಸ್ತು ವ್ಯವಸ್ಥೆಯ ದುರ್ಬಲತೆ, ಜೂಜು, ಮಟ್ಕಾ, ಈಸ್ಪಿಟ್ ಚಟುವಟಿಕೆಗಳು ಹೆಚ್ಚಾಗಿರುವುದು ಸೇರಿದಂತೆ ಹಲವು ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕರಾದ ಲಿಂಗದೇವರು ಅವರು “ಈ ಎಲ್ಲ ಸಮಸ್ಯೆಗಳ ಮೂಲ ಜನರೊಂದಿಗೆ ನೇರ ಸಂವಾದ ಮತ್ತು ಅರಿವು ಕೊರತೆಯಲ್ಲಿದೆ. ಹೀಗಾಗಿ ದಲಿತ ಕೇರಿಗಳಲ್ಲೇ ಸಭೆಗಳನ್ನು ನಡೆಸಬೇಕು” ಎಂದು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರು.
ಇದನ್ನೂ ಓದಿ: ತುಮಕೂರು | ರಾಜಣ್ಣರನ್ನು ಸಚಿವ ಸಂಪುಟಕ್ಕೆ ಮರು ಸೇರ್ಪಡೆಗೊಳಿಸಿ: ಜಿ ಎನ್ ಮೂರ್ತಿ
ಜೈ ಭೀಮ್ ಛಲವಾದಿ ಮಹಾಸಭಾ ತಾಲ್ಲೂಕು ಸಂಚಾಲಕ ಆನಂದ್ ಆಶ್ರಿಹಾಳ್ ಮಾತನಾಡಿ, “ಅಸ್ಪೃಶ್ಯತೆ ಆಚರಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ದಲಿತರಿಗೆ ಮುಕ್ತ ಪ್ರವೇಶ ಸಿಗುತ್ತಿಲ್ಲ. ದಲಿತರ ಹಕ್ಕುಗಳ ಕುರಿತು ಸ್ಥಳದಲ್ಲೇ ಸಭೆಗಳು ನಡೆಯಬೇಕು” ಎಂದು ಒತ್ತಾಯಿಸಿದರು.
DSS ತಾಲ್ಲೂಕು ಸಂಚಾಲಕರ ಯರೆಕಟ್ಟೆ ರಮೇಶ್ ಮಾತನಾಡಿ, “ಮೈಕ್ರೋಫೈನಾನ್ಸ್ ಸಿಬ್ಬಂದಿಗಳ ದೌರ್ಜನ್ಯವನ್ನು ತೀವ್ರವಾಗಿ ವಿರೋಧಿಸುತ್ತೇವೆ. ಈ ಸಂಸ್ಥೆಗಳು RBI ನಿಯಮಗಳನ್ನು ಗಾಳಿಗೆ ತೂರಿ ಮಹಿಳೆಯರ ಮೇಲೆ ಕಿರುಕುಳ, ಅವಮಾನ, ವಾರದ ಬಡ್ಡಿ ಸಂಗ್ರಹವನ್ನು ಮುಂದುವರಿಸುತ್ತಿವೆ. ಧರ್ಮಸ್ಥಳ ಮತ್ತು ಶ್ರೀಶಕ್ತಿ ಸಂಘಗಳು ನಿಯಮ ಪಾಲಿಸಬೇಕು” ಎಂದು ಒತ್ತಾಯಿಸಿದರು.
ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ ಉಪಾಧ್ಯಕ್ಷ ಗುರುಮೂರ್ತಿ, ಆನಂದ್, ಲೋಕೇಶ್, ಲಿಂಗದೇವರು, ಅಗಸರಹಳ್ಳಿ ನರಸಿಂಹಮೂರ್ತಿ, ಬಸವರಾಜು ಹಾಗೂ ಇತರ ಮುಖಂಡರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.





