ಮಲೆನಾಡಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಶೃಂಗೇರಿ ತಾಲೂಕಿನ ಕೆರೆಕಟ್ಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಶೀರ್ಲು ಗ್ರಾಮದ ಅಡಲಕ್ಕಿ ಎಂಬಲ್ಲಿ ಕಾಡಾನೆ ಹಾವಳಿಯಿಂದ ಗ್ರಾಮಸ್ಥರಿಗೆ ತೊಂದರೆ ಎದುರಾಗಿದೆ.
ಕಾಡಾನೆ ಸೀತು ಎಂಬ ಮಹಿಳೆಯ ಗದ್ದೆ ಮತ್ತು ತೋಟದ ಮೇಲೆ ಕಳೆದ ಹದಿನೈದು ದಿನಗಳಿಂದ ನಿರಂತರ ದಾಳಿ ನಡೆಸುತ್ತಿದ್ದು, ಅಡಿಕೆ ಮರಗಳು ಸೇರಿದಂತೆ ಫಸಲಿಗೆ ಬಂದ ಭತ್ತದ ಬೆಳೆಯನ್ನು ಸಂಪೂರ್ಣ ನಾಶ ಮಾಡಿದೆ. ದಿನವಿಡೀ ಜಮೀನಿನ ಪಕ್ಕದ ದಟ್ಟ ಕಾಡಿನಲ್ಲಿ ಬೀಡು ಬಿಟ್ಟು ಸಂಜೆಯಾಗುತ್ತಿದ್ದಂತೆ ಜಮೀನಿಗೆ ಆನೆ ದಾಳಿ ಇಡುತ್ತಿದೆ. ಇದು ಜಮೀನಿನ ಪಕ್ಕದಲ್ಲಿ ವಾಸಿಸುತ್ತಿರುವ ನಿವಾಸಿಗಳ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಗ್ರಾ.ಪಂ ಸದಸ್ಯನ ಹತ್ಯೆ; ಅಂತಿಮ ದರ್ಶನಕ್ಕೆ ಬಿಗಿಭದ್ರತೆ
ಅರಣ್ಯ ಇಲಾಖೆಯ ಸಿಬ್ಬಂದಿಗಳು ಪ್ರತಿದಿನ ಸ್ಥಳಕ್ಕೆ ಬಂದು ಪಟಾಕಿ ಸಿಡಿಸಿ ಆನೆಯನ್ನು ಓಡಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಆನೆ ರಾತ್ರಿಯಿಡೀ ಜಮೀನಿನಲ್ಲಿ ಇದ್ದು ಬೆಳಗಾಗುವಷ್ಟರಲ್ಲಿ ಮತ್ತೆ ಕಾಡು ಸೇರಿಕೊಳ್ಳುತ್ತಿದೆ ಎನ್ನಲಾಗಿದೆ.





