ಚಿಕ್ಕಮಗಳೂರಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರೊ. ಗಂಗಾಧರ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಗಂಗಾಧರ್ ವಿರುದ್ಧ ವಿದ್ಯಾರ್ಥಿನಿಯೊಬ್ಬರು ಗಂಭೀರ ಆರೋಪ ಮಾಡಿದ್ದು, ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ದಾಖಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿನಿ, “2023ರಲ್ಲಿ ಪ್ರೊ. ಗಂಗಾಧರ್ ಅವರು ನನಗೆ ಅಶ್ಲೀಲ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದರು. ನನ್ನೊಂದಿಗೆ ಸಹಕರಿಸು ಎಂದು ಹೇಳುತ್ತಿದ್ದರು. ತಮ್ಮ ಚೇಂಬರ್ಗೆ ಬರುವಂತೆ ಪದೇ-ಪದೇ ಪೀಡಿಸುತ್ತಿದ್ದರು. ಗಂಗಾಧರ್ ನೀಡುತ್ತಿದ್ದ ಕಿರುಕುಳದ ಬಗ್ಗೆ ಡೀನ್ ಅವರ ಗಮನಕ್ಕೆ ತಂದಿದ್ದೇನೆ. ಆದರೆ, ಅರು ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದ್ದಾರೆ.
“ಗಂಗಾಧರ್ ಅವರು ನನಗೆ ಕಳಿಸಿರುವ ಮೆಸೇಜ್ಗಳ ದಾಖಲೆಗಳನ್ನು ಡೀನ್ ಅವರಿಗೆ ಒದಗಿಸಿದ್ದೇನೆ. ಆದರೂ, ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆರು ತಿಂಗಳು ಕಾಲೇಜಿಗೆ ಬಾರದಂತೆ ನನಗೇ ಸೂಚಿಸಿದ್ದರು. ಈಗ, ಪರೀಕ್ಷೆಯನ್ನೂ ಬರೆಯಲು ಬಿಡುತ್ತಿಲ್ಲ. ನನ್ನ ಪತಿ ಕೂಡ ಅದೇ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದಾರೆ. ಅವರಿಗೂ ಕಿರುಕುಳ ನೀಡಲಾಗುತ್ತಿದೆ” ಎಂದು ದೂರಿದ್ದಾರೆ.
“ನಮಗೆ ನ್ಯಾಯ ಬೇಕು. ನನ್ನ ಅಳಲಿಗೆ ಹಲವು ಸಂಘಟನೆಗಳು ಸ್ಪಂದಿಸಿದ್ದು, ಬೆಂಬಲವಾಗಿ ನಿಂತಿದ್ದಾರೆ. ಆದ್ದರಿಂದ, ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ” ಎಂದು ಹೇಳಿದ್ದಾರೆ.
ವಿದ್ಯಾರ್ಥಿನಿಯ ಆರೋಪ ಸುದ್ದಿಯಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ, ಎಚ್ಚೆತ್ತುಕೊಂಡಿರುವ ಕಾಲೇಜಿನ ಡೀನ್ ಹಾಗೂ ನಿರ್ದೇಶಕ ಹರೀಶ್ ಅವರು ಪ್ರೊ. ಗಂಗಾಧರ್ಗೆ ನೋಟಿಸ್ ನೀಡಿದ್ದಾರೆ. ಅವರ ವಿರುದ್ಧದ ಆರೋಪಗಳಿಗ ಕಾರಣ ನೀಡುವಂತೆ ಸೂಚಿಸಿದ್ದಾರೆ.




