ಪ್ರಾದೇಶಿಕ ಸಾರಿಗೆ ಇಲಾಖೆಯ ಅಟೆಂಡರ್ ಒಬ್ಬರು ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ನಗರದ ವ್ಯಕ್ತಿಯೊಬ್ಬರು 8 ಬೈಕ್ಗಳಿಗೆ ರಾಜ್ಯದಾದ್ಯಂತ ಸಂಚರಿಸಲು ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿದ್ದರು. ಜೊತೆಗೆ ಒಂದು ಬೈಕಿಗೆ ₹500ರಂತೆ ಸರ್ಕಾರಕ್ಕೆ ಶುಲ್ಕ ಪಾವತಿಸಿದ್ದರು. ಆದರೆ ಅವರಿಗೆ ಪರವಾನಗಿ ನೀಡಲು ಚಿಕ್ಕಮಗಳೂರು ಆರ್ಟಿಒ ಮಧುರಾ ಅವರು ತಲಾ ಒಂದು ಬೈಕಿಗೆ ಒಂದು ಸಾವಿರದಂತೆ ಒಟ್ಟು ₹8,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.
ಕುಪಿತನಾದ ವ್ಯಕ್ತಿ ವಿಚಾರವನ್ನು ಲೋಕಾಯುಕ್ತ ಪೊಲೀಸರಿಗೆ ತಿಳಿಸಿದ್ದರು. ನಂತರ ಸೆಪ್ಟಂಬರ್ 4 ರಂದು ಆರ್ಟಿಒ ಕಚೇರಿಗೆ ಬಂದ ವ್ಯಕ್ತಿಗೆ ಮಧುರಾ ಅವರು ಅಟೆಂಡರ್ ಲತಾ ಬಳಿ ಲಂಚ ನೀಡುವಂತೆ ಹೇಳಿದ್ದಾರೆ. ಅದರಂತೆ ಅಧಿಕಾರಿಯ ಮಾತು ಕೇಳಿ ಲಂಚ ಸ್ವೀಕರಿಸಲು ಮುಂದಾದ ಅಟೆಂಡರ್ ಲತಾರನ್ನು ಲೋಕಾಯುಕ್ತರು ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಬರ ನಿರ್ವಹಣೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ; ರೈತ ಸಂಘ ಆಗ್ರಹ
ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಇಲಾಖೆ ಭ್ರಷ್ಟಾಚಾರದ ಕೂಪವಾಗಿದ್ದು, ಇಲ್ಲಿ ಹಣವಿಲ್ಲದೆ ಯಾವುದೇ ಕಡತಗಳು ಮುಂದುವರಿಯುವುದಿಲ್ಲ. ಸಾರ್ವಜನಿಕರ ಯಾವುದೇ ಕೆಲಸಗಳಿಗೂ ಲಂಚದ ಬೇಡಿಕೆ ಇಡಲಾಗುತ್ತದೆ ಎಂಬ ದೂರುಗಳು ಹಿಂದಿನಿಂದಲೂ ಕೇಳಿಬಂದಿದ್ದವು. ಇದೀಗ ಆರ್ಟಿಒ ವಿಭಾಗದಲ್ಲಿ ಲಂಚ ಸ್ವೀಕರಿಸುವಾಗ ಸಾಕ್ಷಿ ಸಮೇತ ಲೋಕಾಯುಕ್ತರ ಬಲೆಗೆ ಬಿದ್ದಿರುವ ಪ್ರಕರಣ ನಡೆದಿದೆ.




