ಮೈಸೂರು ತಾಲ್ಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ‘ಮಕ್ಕಳ ಸಂತೆ’ ಅತ್ಯಂತ ಸಂಭ್ರಮದಿಂದ ನಡೆದು, ನಿರೀಕ್ಷೆಗೂ ಮೀರಿ ಯಶಸ್ವಿಯಾಗುವ ಮೂಲಕ ವಿದ್ಯಾರ್ಥಿಗಳಿಗೆ ವ್ಯವಹಾರಿಕ ಜ್ಞಾನ ಮತ್ತು ಸಂವಹನ ಕೌಶಲ್ಯವನ್ನು ಬೆಳೆಸಲು ಸಹಕಾರಿಯಾಯಿತು.
‘ಮಕ್ಕಳ ಸಂತೆ’ಯಲ್ಲಿ ಒಟ್ಟು 59 ಮಳಿಗೆಗಳನ್ನು ವಿದ್ಯಾರ್ಥಿಗಳು ತೆರೆದಿದ್ದರು. ಈ ಮಳಿಗೆಗಳಲ್ಲಿ ಸೊಪ್ಪು, ತರಕಾರಿ, ಹಣ್ಣುಗಳು, ತಿಂಡಿ ತಿನಿಸುಗಳು, ಶರಬತ್ತು ಹಾಗೂ ಮಜ್ಜಿಗೆಯಂತಹ ತಂಪು ಪಾನೀಯಗಳನ್ನು ವಿದ್ಯಾರ್ಥಿಗಳು ವ್ಯಾಪಾರಿಗಳಾಗಿ ಮಾರಾಟ ಮಾಡಿದರು. ಇವರಿಗೆ ಮೆಲ್ಲಹಳ್ಳಿ ಮತ್ತು ಹಾರೋಹಳ್ಳಿಯ ಸರ್ಕಾರಿ ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಅಡುಗೆ ಸಿಬ್ಬಂದಿ ಗ್ರಾಹಕರಾಗಿ ಭರ್ಜರಿಯಾಗಿಯೇ ವ್ಯಾಪಾರದಲ್ಲಿ ತೊಡಗಿ ಅತ್ಯುತ್ಸಾಹದಿಂದ ತಮಗಿಷ್ಟದ ಸರಕುಗಳನ್ನು ಖರೀದಿಸಿದರು.
ಎಲ್ಲ ಮಳಿಗೆಗಳ ವಿದ್ಯಾರ್ಥಿ ವ್ಯಾಪಾರಿಗಳು ಒಟ್ಟು ₹5915 ರೂಪಾಯಿ ಬಂಡವಾಳ ಹೂಡಿದ್ದರು. ಈ ಮೂಲ ಬಂಡವಾಳದ ಮೇಲೆ ಒಟ್ಟು ₹4100 ರೂಪಾಯಿ ಲಾಭ ದೊರಕಿತು. ಒಟ್ಟಾರೆ ₹10015 ರೂಪಾಯಿಗಳ ವಹಿವಾಟು ನಡೆಯಿತು. ಲಾಭದ ಮೇಲೆ ₹679 ರೂಪಾಯಿ ಸಂತೆ ಸುಂಕ ಸಂಗ್ರವಾಯಿತು. 59 ಮಳಿಗೆಗಳಲ್ಲಿ 41 ಮಳಿಗೆಗಳು ಲಾಭವನ್ನೂ, 11 ಮಳಿಗೆಗಳು ನಷ್ಟವನ್ನೂ, 5 ಮಳಿಗೆಗಳು ಲಾಭ-ನಷ್ಟದ ಸಮತೋಲನವನ್ನು ಅನುಭವಿಸಿದವು.
ಬೆಳಗ್ಗೆ 11 ಗಂಟೆಗೆ ಅಗತ್ಯ ಸಿದ್ಧತೆಗಳೊಂದಿಗೆ ಆರಂಭವಾದ ‘ಮಕ್ಕಳ ಸಂತೆ’ಯನ್ನು ಮೆಲ್ಲಹಳ್ಳಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಜಿ.ಪಿ. ಮಂಜುನಾಥ್ ಅವರು ಸೊಪ್ಪು ಖರೀದಿಸುವ ಮೂಲಕ ಉದ್ಘಾಟಿಸಿದರು. ಶಿಕ್ಷಕ ಮತ್ತು ಸಾಹಿತಿ ಟಿ. ಸತೀಶ್ ಜವರೇಗೌಡ ಅವರು ವಿದ್ಯಾರ್ಥಿಗಳಿಗೆ ಬಂಡವಾಳ, ಹೂಡಿಕೆ, ಅಸಲು, ಲಾಭ, ನಷ್ಟ, ತೂಕ, ವಂಚನೆ, ತೆರಿಗೆಯಂತಹ ಮಾರುಕಟ್ಟೆಯ ವಿದ್ಯಮಾನಗಳ ಮೂಲಕ ಗಣಿತದ ಮೂಲ ಕ್ರಿಯೆಗಳನ್ನು ಪರಿಚಯಿಸಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಸುವರ್ಣಾವತಿ ಜಲಾಶಯದಲ್ಲಿ ಜಲಸಾಹಸ ಕ್ರೀಡೋತ್ಸವಕ್ಕೆ ಚಾಲನೆ
ಮುಖ್ಯ ಶಿಕ್ಷಕಿ ಪಿ.ಎನ್. ವೀಣಾ ಮತ್ತು ಜಿಪಿಟಿ ಶಿಕ್ಷಕ ಹೆಚ್.ಎಸ್. ಸುನೀಲ್ ಕುಮಾರ್ ಮಕ್ಕಳ ಸಂತೆಯ ತೆರಿಗೆ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಹಾರೋಹಳ್ಳಿಯ ಮುಖ್ಯ ಶಿಕ್ಷಕ ಸಂತೋಷ್ ಬಿ. ಶೆಟ್ಟಿ, ಪ್ರೌಢಶಾಲಾ ಶಿಕ್ಷಕಿಯರಾದ ವಿಜಯಲಕ್ಷ್ಮಿ, ಮಹದೇಶ್ವರಿ ಸೇರಿದಂತೆ ಶಾಲೆಯ ಶಿಕ್ಷಕ- ಶಿಕ್ಷಕಿಯರು ಮಕ್ಕಳ ಸಂತೆಯಲ್ಲಿ ಇದ್ದರು.





