ಮೈಸೂರು ಜಿಲ್ಲೆ, ಕೃಷ್ಣರಾಜನಗರದ ಕಾಳೇನಹಳ್ಳಿಯಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ವಕೀಲರ ಸಂಘ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತಿ, ಆರಕ್ಷಕ ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಶಿಕ್ಷಕರ ಮಹಾಸಭೆ ಹಾಗೂ ಮಕ್ಕಳ ಅರಿವಿನ ಕಾರ್ಯಕ್ರಮ ನಡೆಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಬಿ.ಸಿ. ಅರವಿಂದ್ರ ಮಾತನಾಡಿ, ‘ವಿಶ್ವದಾದ್ಯಂತ ಮಕ್ಕಳಲ್ಲಿ ಜಾಗೃತಿ ಮತ್ತು ಮಕ್ಕಳ ಕಲ್ಯಾಣವನ್ನು ಸುಧಾರಿಸಲು ಹಾಗೂ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ’ ಆಚರಿಸಲಾಗುತ್ತದೆ.
ಇಂದಿನ ಮಕ್ಕಳು ಭವಿಷ್ಯದ ಪ್ರಜೆಗಳಾಗಿದ್ದು, ದೇಶದ ಭವಿಷ್ಯ ರೂಪಿಸುವ ರೂವಾರಿಗಳಾಗಿದ್ದಾರೆ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಮಕ್ಕಳ ಹಕ್ಕು ಹಾಗೂ ಶಿಕ್ಷಣದ ಮಹತ್ವ ತಿಳಿಯಪಡಿವುದು ಅತ್ಯಗತ್ಯ. ಮಕ್ಕಳು ಓದಿನಲ್ಲಷ್ಟೇ ಅಲ್ಲದೇ ಸಮಾಜದಲ್ಲಿ ಉತ್ತಮರಾಗಲು, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಲು ಶಿಕ್ಷಣ ಬಹು ಮುಖ್ಯವಾದದ್ದು.

“ಮಕ್ಕಳಲ್ಲಿ ನಾಯಕತ್ವದ ಗುಣ, ಎಲ್ಲರನ್ನು ತಮ್ಮವರೆಂದು ತಮ್ಮೊಟ್ಟಿಗೆ ಕೊಂಡೊಯ್ಯುವ ಗುಣ ವೃದ್ಧಿಸಬೇಕಿರುವುದು ಶಿಕ್ಷಣದಲ್ಲಿ. ಶಿಕ್ಷಕರ ಪಾತ್ರ ವಿದ್ಯಾರ್ಥಿ ದೆಸೆಯಲ್ಲಿ ಅತಿ ಮಹತ್ವದ ಪಾತ್ರ ನಿರ್ವಹಿಸಲಿದೆ. ವಿದ್ಯಾರ್ಥಿಗಳ ಅಂಕುಡೊಂಕು ತಿದ್ದಿ, ತಮ್ಮ ಜವಾಬ್ದಾರಿ, ಹಕ್ಕುಗಳನ್ನು ತಿಳಿಸುವುದರ ಮೂಲಕ ಉತ್ತಮ ಪ್ರಜೆಯಾಗಿ ರೂಪಿಸಲು ಸಾಧ್ಯ. ಇದರೊಟ್ಟಿಗೆ ಮಕ್ಕಳ ಹಕ್ಕಿನ ಅರಿವು ಬಹು ಮುಖ್ಯವಾದದ್ದು. ಸಂವಿಧಾನ ದತ್ತವಾದ ಹಕ್ಕನ್ನು ಮಕ್ಕಳು ಅನುಭವಿಸುವಂತೆ ಮಾಡಬೇಕಾದ್ದು ಎಲ್ಲರ ಹೊಣೆಗಾರಿಕೆಯಾಗಿದೆ” ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್. ಚಂದನ್ ಮಾತನಾಡಿ, “ಭಾರತೀಯ ಪ್ರೌಢತೆ ಅಧಿನಿಯಮ 1875ರ ಅನ್ವಯ 18 ವರ್ಷ ವಯೋಮಾನದೊಳಗಿನವರು ಮಕ್ಕಳಾಗಿದ್ದು, ಎಲ್ಲರಿಗೂ ಸಮಾನವಾಗಿ ಜೀವಿಸುವ ಹಕ್ಕಿದೆ. ತಾರತಮ್ಯ ನಿಷೇದಿತ. 6 ವರ್ಷದಿಂದ 14 ವರ್ಷದೊಳಗಿನ ಮಕ್ಕಳು ಶಿಕ್ಷಣ ಪಡೆಯುವುದು ಮೂಲಭೂತ ಹಕ್ಕಾಗಿದೆ. ಮಕ್ಕಳನ್ನು ಶಿಕ್ಷಣದಿಂದ ವಂಚಿಸಿ ಬಾಲ ಕಾರ್ಮಿಕರಾಗಿ ದುಡಿಸಿಕೊಳ್ಳುವುದು ಅಪರಾಧ. ಪ್ರಾಥಮಿಕ ಶಿಕ್ಷಣ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಇದರ ಜೊತೆಗೆ ಅವಶ್ಯಕತೆಗಳನ್ನು ಪೂರೈಸುವುದರ ಜೊತೆಗೆ ಮಾನವ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಕರ್ವವ್ಯವೇ” ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಅಸ್ರಿನ ಮಾತನಾಡಿ, “ಮಗುವಿನ ಹಿತದೃಷ್ಟಿ ಬಹು ಮುಖ್ಯವಾದದ್ದು. ಮಗುವಿನ ಅಭಿಪ್ರಾಯ ಗೌರವಿಸಬೇಕು. ಸಮಾನತೆಯ ಜೊತೆಗೆ ಸಾಮಾಜಿಕ ನ್ಯಾಯ ಮಕ್ಕಳ ಹಕ್ಕುಗಳ ಭಾಗವಾಗಿವೆ. ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ರೂಪಿಸಲು ಉತ್ತಮ ಶಿಕ್ಷಣ ಕೊಡಿಸುವುದು ಪೋಷಕರು ಹಾಗೂ ಸರ್ಕಾರದ ಹೊಣೆಗಾರಿಕೆ. ಇದರಲ್ಲಿ ಯಾವುದೇ ಲೋಪ ಆಗದಂತೆ ಆಡಳಿತ ವ್ಯವಸ್ಥೆ ನಡೆದುಕೊಳ್ಳಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಪದ್ಮಶ್ರೀ ಪುರಸ್ಕೃತ, ಪರಿಸರವಾದಿ ಸಾಲುಮರದ ತಿಮ್ಮಕ್ಕ ನಿಧನ

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಜಿ. ಸುರೇಂದ್ರಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಕೃಷ್ಣಪ್ಪ, ಪೊಲೀಸ್ ನಿರೀಕ್ಷಕರಾದ ಎಸ್. ಶಿವಪ್ರಕಾಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಣ್ಣಯ್ಯ, ನಿವೃತ್ತ ಉಪ ನಿರ್ದೇಶಕ ಎಸ್.ಟಿ. ಜವರೇಗೌಡ, ಕ್ಷೇತ್ರ ಸಮನ್ವಯಾಧಿಕಾರಿ ವೆಂಕಟೇಶ್, ವಕೀಲ ದಿನೇಶ್, ಎಸ್.ಡಿ.ಎಂ.ಸಿ ಅಧ್ಯಕ್ಷ ಜಗದೀಶ್, ಸದಸ್ಯ ಚೆಲುವರಾಜು, ಮುಖ್ಯ ಶಿಕ್ಷಕಿ ಎಸ್, ರುಕ್ಮಿಣಿ ಸೇರಿದಂತೆ ಶಿಕ್ಷಣ ವೃಂದ, ಸಿಬ್ಬಂದಿ ವರ್ಗ, ಪೋಷಕರು ಇದ್ದರು.





