ಕನ್ನಡದ ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಯಾಗಲಿ ಎಂಬ ಉದ್ದೇಶದಿಂದ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಎನ್ಜಿಓ ಬಡಾವಣೆಯಲ್ಲಿ ಸಾಂಸ್ಕೃತಿಕ ಭವನ ನಿರ್ಮಿಸಿ 12 ವರ್ಷಗಳೇ ಆಗಿವೆ. ಆದರೆ, ಭವನ ಇನ್ನೂ ಸಾರ್ವಜನಿಕರ ಬಳಕೆಗೆ ಹಸ್ತಾಂತರ ಗೊಳ್ಳದೆ ಉಳಿದಿದ್ದು, ಖಾಸಗಿಯವರ, ಗುತ್ತಿಗೆದಾರರ ಸಿಮೆಂಟ್ ಗೋದಾಮಾಗಿ ಪರಿವರ್ತನೆಯಾಗಿದೆ.
ಸಾಂಸ್ಕೃತಿಕ ಭವನವನ್ನು 2008ರಲ್ಲಿ ಭೂಮಿಪೂಜೆ ನೆರವೇರಿಸಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. 2011ರಲ್ಲಿ ಶಾಸಕರಾಗಿದ್ದ ಎಸ್.ವಿ.ರಾಮಚಂದ್ರ ಅವರು ಉದ್ಘಾಟನೆ ಮಾಡಿದ್ದರು. ಆದರೆ ಅಲ್ಲಿಂದ ಇಲ್ಲಿಯವರೆಗೂ ಅಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿಲ್ಲ. ಭವನವನ್ನು ಗುತ್ತಿಗೆದಾರೊಬ್ಬರು ತಮ್ಮ ಸೀಮೆಂಟ್ ಚೀಲ, ಪೈಪ್, ಕಬ್ಬಿಣ ಸೇರಿದಂತೆ ಕಟ್ಟಡಗಳಿಗೆ ಬೇಕಾದ ಸಾಮಾಗ್ರಿಗಳನ್ನು ದಾಸ್ತಾನು ಮಾಡಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
“ಸರ್ಕಾರದ ಆದೇಶದಲ್ಲಿ ಸರ್ಕಾರಿ ಸ್ವತ್ತನ್ನು ಸ್ವಂತಕ್ಕೆ ಬಳಸುವಂತಿಲ್ಲ. ಆದರೂ, ಗುತ್ತಿಗೆದಾರರಿಗೆ ಭವನದ ಬೀಗದ ಕೀ ಕೊಟ್ಟಿದ್ದು ಯಾರು? ಸಿಮೆಂಟ್ ದಾಸ್ತಾನು ಮಾಡಲು ಪರ್ಮಿಶನ್ ಕೊಟ್ಟಿದ್ದು ಯಾರು? ಅಧಿಕಾರಿಗಳು ತಕ್ಷಣವೇ ಭವನದಲ್ಲಿರುವ ಸಿಮೆಂಟ್ ಮತ್ತು ಇತರ ಸಾಮಗ್ರಿಗಳನ್ನು ಜಪ್ತಿಮಾಡಬೇಕು” ಎಂದು ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಒತ್ತಾಯಿಸಿದ್ದಾರೆ.

“ಭವನದ ಸಮೀಪವೇ ಶಾಲೆಯೂ ಇದ್ದು, ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಇದೇ ದಾರಿಯಲ್ಲಿ ಸಾಗುತ್ತಾರೆ. ಈ ದಾರಿಯಲ್ಲಿ ಸಿಮೆಂಟನ್ನು ಹೊತ್ತು ಬರುವ ಸಿಮೆಂಟ್ ಲಾರಿಗಳ ಓಡಾಟದಿಂದಾಗಿ ಮಕ್ಕಳು ಧೂಳು ಕುಡಿಯುವಂತಾಗಿದೆ. ಅಲ್ಲದೆ, ಭಾರದ ಲಾರಿಗಳ ಓಡಾಟದಿಂದ ರಸ್ತೆಯೂ ಹಾಳಾಗಿದೆ. ಆದ್ದರಿಂದ, ಸಾಂಸ್ಕೃತಿಕ ಭವನದಲ್ಲಿರುವ ಸಿಮೆಂಟ್ ಚೀಲಗಳನ್ನು ಜಪ್ತಿ ಮಾಡಬೇಕು. ರಸ್ತೆಯನ್ನು ಗುತ್ತಿಗೆದಾರರ ಹಣದಿಂದಲೇ ದುರಸ್ತಿ ಮಾಡಿಸಬೇಕು” ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಚಿತ್ರದುರ್ಗ | ‘ದೇವ್ರು ಕೊಟ್ರು ಪೂಜಾರಿ ಕೊಡ್ತಿಲ್ಲ’ ಎಂಬಂತೆ ನಿಂತಿದೆ ಹೊಸ ಸಂಚಾರಿ ಚಿಕಿತ್ಸಾ ವಾಹನ
ಸಾರ್ವಜನಿಕರ ಬಳಕೆಗೆ ದೊರೆಯದ ಭವನದ ಬಗ್ಗೆ ಕಸಾಪ ತಾಲೂಕು ಪದಾಧಿಕಾರಿಗಳು ಒಬ್ಬರನ್ನು ಈದಿನ.ಕಾಮ್ ಮಾಡಿತಾನಾಡಿಸಿದ್ದು, “ಸಾಂಸ್ಕೃತಿಕ ಭವನ ನಿರ್ಮಾಣವಾಗಿ ಅನೇಕ ವರ್ಷಗಳಾದರೂ ನಮ್ಮ ಸುಪರ್ಧಿಗೆ ಹಸ್ತಾಂತರಿಸಿಲ್ಲ. ಪಟ್ಟಣ ಪಂಚಾಯತಿ ಆಡಳಿತಕ್ಕೆ ಪತ್ರಬರೆದು ಗಮನಕ್ಕೆ ತರಲಾಗಿದೆ. ಅಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ದೂರವಾಗುತ್ತದೆ ಎನ್ನುವ ಕಾರಣಕ್ಕೆ ನಾವು ಆ ಭವನದಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಮಾಡಿಲ್ಲ” ಎಂದರು.
“ಈಗಲಾದರೂ ಸಂಬಂಧಪಟ್ಟ ಇಲಾಖೆ, ಪಟ್ಟಣ ಪಂಚಾಯತ್ ಆಡಳಿತ ವರ್ಗ ಅಥವಾ ಅಧಿಕಾರಿಗಳು ಎಚ್ಚೆತ್ತುಕೊಂಡು ಗುತ್ತಿಗೆದಾರರಿಂದ ಸಾಂಸ್ಕೃತಿಕ ಭವನವನ್ನು ತೆರವುಗೊಳಿಸಿ ಸಾಹಿತ್ಯ ಪರಿಷತ್ ಅಥವಾ ಸಾರ್ವಜನಿಕರ ಅನುಕೂಲಕ್ಕೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲವಾಗಲು ಕ್ರಮ ಕೈಗೊಳ್ಳಬೇಕು” ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.




