ಪತಿ ವಿವಾಹೇತರ ಸಂಬಂಧಿ ಹೊಂದಿರುವ ವಿಚಾರವಾಗಿ ನಡೆದ ಕೌಟುಂಬಿಕ ಕಲಹದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಘಟ್ಭರ್ತಿ ಗ್ರಾಮದಲ್ಲಿ ನಡೆದಿದೆ. ಆಕೆಯನ್ನು ಆಕೆಯ ಪತಿಯೇ ಭೀಕರವಾಗಿ ಹೊಡೆದು ಕೊಂದಿದ್ದು, ಆತ್ಮಹತ್ಯೆಯೆಂದು ಬಿಂಬಿಸಲು ಯತ್ನಿಸಿದ್ದಾರೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟ್ಭರ್ತಿ ಗ್ರಾಮದಲ್ಲಿ ಭಾಗ್ಯ ಎಂಬವರು ಸಾವನ್ನಪ್ಪಿದ್ದಾರೆ. ಅವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಆಕೆಯ ಪತಿ ತಿರುಮಲ್ಲೇಶ ಮತ್ತು ಆತನ ಕುಟುಂಬಸ್ಥರು ಹೇಳಿದ್ದಾರೆ. ಆದರೆ, ಭಾಗ್ಯ ಅವರ ಮೃತದೇಹದ ಮೇಲೆ ಗಂಭೀರ ಗಾಯಗಳು ಕಂಡುಬಂದಿದ್ದು, ಆಕೆಯನ್ನು ತಿರುಮಲ್ಲೇಶನೇ ಅಮಾನುಷವಾಗಿ ಥಳಿಸಿ, ಕೊಲೆ ಮಾಡಿದ್ದಾನೆಂದು ಭಾಗ್ಯ ಅವರ ಸಹೋದರ ಆರೋಪ ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯ ಭರಮ ಸಮುದ್ರ ಗ್ರಾಮದವರಾದ ಭಾಗ್ಯ ಅವರು 2016ರಲ್ಲಿ ತಿರುಮಲ್ಲೇಶನನ್ನು ವಿವಾಹವಾಗಿದ್ದರು. ಆದರೆ, ಮದುವೆಗೂ ಮುನ್ನವೇ ಆತನಿಗೆ ವಿವಾಹೇತರ ಸಂಬಂಧವಿತ್ತು. ಅದು, ವಿವಾಹವಾದ ಕೆಲ ವರ್ಷಗಳ ಬಳಿಕ ಭಾಗ್ಯ ಅವರಿಗೆ ಗೊತ್ತಾಗಿದೆ. ಈ ವಿಚಾರವಾಗಿ ಆಗ್ಗಾಗ್ಗೆ ದಂಪತಿಗಳ ನಡುವೆ ಜಗಳವಾಗುತ್ತಿತ್ತು. ದಂಪತಿಗಳ ನಡುವಿನ ಕಲಹವು ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ತಿರುಮಲ್ಲೇಶನನ್ನು ಪೊಲೀಸ್ ಠಾಣೆಗೆ ಕರೆಸಿದ್ದ ಪೊಲೀಸರು, ಆತನಿಂದ ಮುಚ್ಚಳಿಕೆ ಪತ್ರವನ್ನೂ ಬರೆಸಿಕೊಂಡಿದ್ದರು ಎಂದು ತಿಳಿದುಬಂದಿದೆ.
ಆದಾಗ್ಯೂ, ತಿರುಮಲ್ಲೇಶ ತನ್ನ ವಿವಾಹೇತರ ಸಂಬಂಧವನ್ನು ಮುಂದುವರೆಸಿದ್ದ. ಭಾಗ್ಯ ಅವರೊಂದಿಗೆ ಆಗ್ಗಾಗ್ಗೆ ಗಲಾಟೆ ಮಾಡುತ್ತಿದ್ದ ತಿರುಮಲ್ಲೇಶ, ಅಮಾನುಷವಾಗಿ ಹಲ್ಲೆ ಮಾಡುತ್ತಿದ್ದನೆಂದು ಭಾಗ್ಯ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.
ಶನಿವಾರವೂ ಭಾಗ್ಯ ಮೇಲೆ ಗಂಭೀರ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆಂದು ಆರೋಪಿದ್ದು, ತಳುಕು ಪೊಲೀಸ್ ಠಾಣೆಯಲ್ಲಿ ತಿರುಮಲ್ಲೇಶ್ ವಿರುದ್ಧ ದೂರು ದಾಖಲಿಸಿದ್ದಾರೆ.
ಪ್ರಕರಣದ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಭಾಗ್ಯ ಅವರ ಸಹೋದರ ಅಜ್ಜಯ್ಯ, “ಭಾಗ್ಯ ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವರನ್ನು ಕೊಲೆ ಮಾಡಲಾಗಿದೆ. ಭಾಗ್ಯ ಅವರ ಬೆನ್ನು ಮತ್ತು ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯಗಳಾಗಿವೆ. ತಿರುಮಲ್ಲೇಶನೇ ಹೊಡೆದು ಕೊಂದಿದ್ದಾನೆ. ಬಳಿಕ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವದಂತಿ ಹಬ್ಬಿಸಿದ್ದಾರೆ. ಆದರೆ, ಆಕೆ ನೇಣು ಬಿಗಿದುಕೊಂಡಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ. ಯಾರೊಬ್ಬರೂ ಅದನ್ನು ನೋಡಿಲ್ಲ. ‘ಭಾಗ್ಯ ಸೀರೆಯನ್ನು ಕುತ್ತಿಗೆಗೆ ಸುತ್ತಿಕೊಂಡು ಸಾವನ್ನಪ್ಪಿದ್ದಾರೆ. ಗಂಟು ಹಾಕಿಕೊಂಡಿರಲಿಲ್ಲ’ವೆಂದು ತಿರುಮಲ್ಲೇಶನ ಸಹೋದರ ಷಣ್ಮುಖ ಹೇಳಿಕೆ ನೀಡಿದ್ದಾರೆ. ಸೀರೆ ಸುತ್ತಿಕೊಂಡರೆ, ಕುತ್ತಿಗೆಗೆ ಗಂಭೀರ ಗಾಯವಾಗುವುದಿಲ್ಲ. ಆದರೆ, ಭಾಗ್ಯ ಅವರ ಕುತ್ತಿಗೆಯಲ್ಲಿ ಗಂಭೀರ ಗಾಯವಾಗಿರುವುದನ್ನು ಗಮನಿಸಿದರೆ, ಅದು ನೇಣು ಬಿಗಿದುಕೊಂಡಿರುವುದಲ್ಲ, ಕೊಲೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ” ಎಂದು ಹೇಳಿದ್ದಾರೆ.
“ಮರಣೋತ್ತರ ಪರೀಕ್ಷೆಯ ವೇಳೆ, ಭಾಗ್ಯ ಅವರ ದೇಹದಾದ್ಯಂತ ಭೀಕರವಾಗಿ ಹೊಡೆದಿರುವ ಗಾಯಗಳು ಕಂಡುಬಂದಿವೆ. ಇದು ಕೊಲೆ ಎಂಬುದನ್ನು ಗಾಯಗಳೇ ಸಾಕ್ಷಿಗಳಾಗಿವೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ, ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳುತ್ತಿದ್ದಾರೆ” ಎಂದು ಅಜ್ಜಯ್ಯ ತಿಳಿಸಿದ್ದಾರೆ.




