ಹೊಳಲ್ಕೆರೆ ತಾಲೂಕಿನ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಕೆರೆ ಹಾಗೂ ಚೆಕ್ ಡ್ಯಾಮ್ಗಳಲ್ಲಿ ಕಳಪೆ ಕಾಮಗಾರಿ ಆಗಿದ್ದು, ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆಗ್ರಹಿಸಿ ರೈತ ರೇವಣ್ಣ ಉಪವಾಸ ಸತ್ಯಾಗ್ರಹ ನಡೆಸಿದರು.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ನಗರದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಕಚೇರಿ ಎದುರು ತಾಳಿಕಟ್ಟೆ ಗ್ರಾಮದ ರೈತ ರೇವಣ್ಣ ಉಪವಾಸ ಸತ್ಯಾಗ್ರಹ ನಡೆಸಿದರು.
“ಶಾಸಕರು, ಕೆರೆ ಮತ್ತು ಚೆಕ್ ಡ್ಯಾಮ್ಗಳ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿ ಇಲಾಖೆಯ ಎಇಇ ಮತ್ತು ಜೆ.ಇ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ವಹಿಸಬೇಕು” ಎಂದು ಆಗ್ರಹಿಸಿದರು.
“ಹೊಳಲ್ಕೆರೆ ತಾಲೂಕು, ರಾಮಗಿರಿ ಹೋಬಳಿ, ತಾಳಿಕಟ್ಟೆ ಮತ್ತು ಟಿ ವಡೇರಹಳ್ಳಿ ಗ್ರಾಮದ ಮ್ಯಾಸನ ಕಟ್ಟೆ ಅಭಿವೃದ್ಧಿ ಕಾಮಗಾರಿ ಅಪೂರ್ಣಗೊಂಡಿದ್ದು, ಈ ಕಾಮಗಾರಿಯ ಅಳತೆ ಪುಸ್ತಕ ಬರೆದು ಹಣ ಪಾವತಿ ಪಡೆಯುವ ಉದ್ದೇಶದಿಂದ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಹೊಳಲ್ಕೆರೆ ತಾಲೂಕಿನ ಎಲ್ಲ ಗ್ರಾಮಗಳ ಕೆರೆಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಎಸ್ಟಿಮೇಟ್ನಲ್ಲಿ ಅಳವಡಿಸಿದ ಸಾಮಗ್ರಿಗಳು ಗ್ರಾನೈಟ್ ಕಲ್ಲು, ಕಾಡುಗಲ್ಲು, ಗ್ರಾವಲ್, ಸಿಮೆಂಟ್ ಜೆಲ್ಲಿಕಲ್ಲು, ಕಬ್ಬಿಣ ಕಳಪೆಯಾಗಿವೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಶಾಲೆಗೆ ಬಾರದ ಮಕ್ಕಳು ಬಾಲ್ಯವಿವಾಹ ಮತ್ತು ಬಾಲಕಾರ್ಮಿಕರಾಗುವ ಸಾಧ್ಯತೆ ಹೆಚ್ಚು: ಜಿಲ್ಲಾಧಿಕಾರಿ ಕಳವಳ
“ಇಲಾಖೆಯಿಂದ ಎಲ್ಲ ಸಾಮಗ್ರಿಗಳನ್ನು ಗುಣಮಟ್ಟ ಪರೀಕ್ಷೆ ಮಾಡಿ, ತನಿಖೆ ಮಾಡಬೇಕು, ಹೊಳಲ್ಕೆರೆ ತಾಲೂಕಿನಾದ್ಯಂತ ಕಾಮಗಾರಿಗಳಿಗೆ ನಿಗದಿಪಡಿಸಿದ ಹಣಕ್ಕೆ ತಕ್ಕಂತೆ ಕೆಲಸ ಆಗಿದೆಯೋ ಇಲ್ಲವೋ ಎಂಬುದರ ಬಗ್ಗೆ ಶಾಸಕರು ಗಮನ ಹರಿಸಬೇಕು” ಎಂದು ಮನವಿ ಮಾಡಿದರು.





