ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಉತ್ತಮ ಅವಕಾಶ ಕಲ್ಪಿಸಿದೆ. ಸರ್ಕಾರಿ ಶಾಲೆಗಳ ಉಳಿವಿಗೆ ಪಾಲಕರು ಕೈ ಜೋಡಿಸಬೇಕು ಎಂದು ಕೆಪಿಸಿಸಿ ಕ್ಷೇತ್ರ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ಮನವಿ ಮಾಡಿದರು.
ಜಗಳೂರು ಪಟ್ಟಣದ ಭುವನೇಶ್ವರಿ ವೃತ್ತ ಸಮೀಪದ ಅಂಗನವಾಡಿ ಕೇಂದ್ರದಲ್ಲಿ ಶಾಲಾ ಕಲಿಕಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ನೂತನ ಶಾಸಕ ಬಿ.ದೇವೇಂದ್ರಪ್ಪ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, “ಅಧಿಕಾರಿಗಳು ಮತ್ತು ಇಲಾಖೆ ಸಿಬ್ಬಂದಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು. ಏನೇ ಸಮಸ್ಯೆ ಇದ್ದರು ನೇರವಾಗಿ ನನ್ನನ್ನು ಭೇಟಿ ಮಾಡಿ” ಎಂದು ತಿಳಿಸಿದರು.
“ಶಾಲಾ ಮಕ್ಕಳ ಕೈಯಲ್ಲಿ ಇಡೀ ದೇಶದ ಭವಿಷ್ಯ ಅಡಗಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ, ಕರ್ನಾಟಕ ದರ್ಶನ, ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಅಗತ್ಯ ನೆರವು ಸೇರಿದಂತೆ ಶಿಕ್ಷಣಕ್ಕಾಗಿ ಹಲವಾರು ಅವಕಾಶಗಳನ್ನು ಸರ್ಕಾರ ಜಾರಿಗೊಳಿಸಿದೆ” ಎಂದರು.
“ಸರ್ಕಾರ ನೀಡುವ ಈ ಪ್ರತಿಯೊಂದು ಯೋಜನೆಯನ್ನು ಪೋಷಕರು ಹಾಗೂ ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳನ್ನ ಕನ್ನಡ ಶಾಲೆಗೆ ಸೇರಿಸಬೇಕು” ಎಂದು ತಿಳಿಸಿದರು.
“ಅಂಗನವಾಡಿಗಳಲ್ಲಿ ಕಾರ್ಯಕರ್ತೆಯರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಮಕ್ಕಳಿಗಾಗಿ ಇಲಾಖೆಯಿಂದ ನೀಡುವಂತಹ ಪೌಷ್ಟಿಕ ಆಹಾರ-ಮೊಟ್ಟೆ ಬಿಸಿಯೂಟ ಸಮರ್ಪಕವಾಗಿ ನೀಡಬೇಕು. ಮಗುವಿನ ಸರ್ವೋತ್ತಮ ಬೆಳವಣಿಗೆಗೆ ಮೊದಲ ಹಂತದ ಶಿಕ್ಷಣ ಬಹುಮುಖ್ಯವಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ ಬೀರೇಂದ್ರ ಕುಮಾರ್, ವಲಯ ಮೇಲ್ವಚಾರಕಿ ಶಾಂತಮ್ಮ ಪಟ್ಟಣ ಪಂಚಾಯಿತಿ ಸದಸ್ಯ ಷಕೀಲ್ ಅಹಮದ್ ಸೇರಿದಂತೆ ಇಲಾಖೆ ಸಿಬ್ಬಂದಿ ಭಾಗಿಯಾಗಿದ್ದರು.




