ಪೊಲೀಸರು ತಪಾಸಣೆ ನೆಪದಲ್ಲಿ ಕಿರುಕುಳ ನೀಡಿ ದಂಡ ಕಟ್ಟುವಂತೆ ಒತ್ತಾಯಿಸುತ್ತಿದ್ದಾರೆಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಆಟೋ ಚಾಲಕರೊಬ್ಬರು ಮನನೊಂದು ಚಿತ್ರದುರ್ಗ ನಗರದ ಮುಖ್ಯ ವೃತ್ತದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಆಟೋ ಚಾಲಕ ಮಾಳಪ್ಪನಹಟ್ಟಿಯ ತಿಪ್ಪೇಸ್ವಾಮಿ ಎಂದು ಗುರುತಿಸಲಾಗಿದೆ. ವಿನಾಕಾರಣ
ಪೊಲೀಸರು ದಂಡ ಕಟ್ಟುವಂತೆ ಒತ್ತಾಯಿಸಿದರರಂದು ಆರೋಪಿಸಿರುವ ಇವರು ನೋಡನೋಡುತ್ತಿದ್ದಂತೆಯೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹೊತ್ತಿಸಿಕೊಂಡಿದ್ದಾರೆ. ಬಳಿಕ ಅಲ್ಲೇ ಇದ್ದ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೂ ಕೂಡ ಆಟೋ ಚಾಲಕನ ದೇಹ ಶೇ.50 ರಿಂದ 60ರಷ್ಟು ಸುಟ್ಟಿದೆ ಎಂದು ಸ್ಥಳದಲ್ಲಿದ್ದವರೊಬ್ಬರು ಮಾಹಿತಿ ನೀಡಿದ್ದಾರೆ.
“ಪೊಲೀಸರು ತಪಾಸಣೆ ನೆಪದಲ್ಲಿ ಆಟೋ ಚಾಲಕರಿಗೆ ತೊಂದರೆ ನೀಡುತ್ತಿದ್ದಾರೆ ಮತ್ತು ಇಲ್ಲದ ಕಾರಣಗಳನ್ನು ಹೇಳಿ ದಂಡ ಕಟ್ಟುವಂತೆ ಒತ್ತಾಯಿಸುತ್ತಿದ್ದಾರೆ. ಆಟೋಗಳನ್ನು ನಿಲ್ಲಿಸಿಕೊಳ್ಳಲು ಬಿಡುತ್ತಿಲ್ಲ. ವಿನಾಕಾರಣ ಸಂಚಾರ ವ್ಯವಸ್ಥೆ ನೆಪದಲ್ಲಿ ತೊಂದರೆ ನೀಡುತ್ತಿದ್ದಾರೆ. ದುಡಿಮೆ, ಸಂಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ” ಎಂದು ಸ್ಥಳದಲ್ಲಿದ್ದ ಆಟೋ ಚಾಲಕರೊಬ್ಬರು ಅಳಲು ತೋಡಿಕೊಂಡರು.
ಈ ಸುದ್ದಿ ಓದಿದ್ದೀರಾ? ಕುಮಟಾ | ರೈಲ್ವೆ ಉದ್ಯೋಗ ಕೊಡಿಸುವ ನೆಪದಲ್ಲಿ ನಕಲಿ ದಾಖಲೆ ತೋರಿಸಿ ₹6.46 ಲಕ್ಷ ವಂಚನೆ; ಆರೋಪಿತ ನಾಪತ್ತೆ
“ಆಟೋಚಾಲಕ ಮನನೊಂದು ಬೆಂಕಿ ಹಚ್ಚಿಕೊಂಡ ಹಿನ್ನೆಲೆಯಲ್ಲಿ ಆಟೋ ಚಾಲಕರ ಸಂಘದ ಸದಸ್ಯರು ಮತ್ತು ಇತರೆ ಆಟೋ ಚಾಲಕರು ಪೊಲೀಸರು ವಿನಾಕಾರಣ ತೊಂದರೆ ನಡೆಯುತ್ತಿದ್ದಾರೆ” ಎಂದು ಪ್ರತಿಭಟನೆ ನಡೆಸಿದ್ದಾರೆ.
ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಸರ್ಕಾರಿ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.





