ನಟ ದರ್ಶನ್ ಮತ್ತು ಆತನ ಗ್ಯಾಂಗ್ನಿಂದ ಹತ್ಯೆಯಾದ ರೇಣುಕಾಸ್ವಾಮಿ ಸಾವಿಗೆ ನ್ಯಾಯ ದೊರೆಯಬೇಕು. ಆತನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಚಿತ್ರದುರ್ಗದಲ್ಲಿ ನಾನಾ ಸಂಘಟನೆಗಳು ಮತ್ತು ಜನರು ಪ್ರತಿಭಟನೆ ನಡೆಸಿದ್ದಾರೆ.
ನಗರದ ಗಾಂಧಿವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮೌನಾಚರಣೆ ನಡೆಸಿದ ಪ್ರತಿಭಟನಾಕಾರರು ಓಬವ್ವ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಕೊಲೆ ಆರೋಪಿ, ನಟ ದರ್ಶನ್ ಫೋಟೋಗಳಿಗೆ ಚಪ್ಪಲಿಯಲ್ಲಿ ಹೊಡೆದು, ಫೋಟೋಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕ್ಷುಲ್ಲಕ ಕಾರಣಕ್ಕಾಗಿ ರೇಣುಕಾಸ್ವಾಮಿಯನ್ನು ಅಜ್ಞಾತ ಪ್ರದೇಶದಲ್ಲಿ ಒಂದು ದಿನವಿಡೀ ಚಿತ್ರಹಿಂಸೆ ಕೊಟ್ಟು ಪ್ರಾಣ ತೆಗೆದಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಸ್ಟಾರ್ ಪಟ್ಟಕ್ಕೆ ಏರಿದವರು ಕಾನೂನು ಕೈಗೆ ತೆಗೆದುಕೊಳ್ಳಬಹುದು, ದುಡ್ಡಿದೆ, ಏನು ಬೇಕಾದರು ಮಾಡಬಹುದು ಎನ್ನುವ ದುರಾಹಂಕಾರವನ್ನು ಹಿಮ್ಮೆಟ್ಟಿಸಬೇಕು” ಎಂದು ಕಿಡಿಕಾರಿದರು.
“ಪೊಲೀಸರು, ಗೃಹ ಮಂತ್ರಿಗಳು ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ಮಾಡಿದರೆ ನಮ್ಮ ಹೋರಾಟ ತೀವ್ರವಾಗುತ್ತದೆ. ರೇಣುಕಾಸ್ವಾಮಿ ಸಾವಿಗೆ ಸರ್ಕಾರ ನ್ಯಾಯ ಕೊಡಿಸಬೇಕು. ದರ್ಶನ್ ಅಭಿಮಾನಿಗಳು ಸಂಘವನ್ನ ವಿಸರ್ಜನೆ ಮಾಡಬೇಕು” ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್ ನವೀನ್ ಆಗ್ರಹಿಸಿದರು.

“ದರ್ಶನ್ ಸಿನಿಮಾಗಳಲ್ಲಿ ಮಾತ್ರ ಆದರ್ಶ ವ್ಯಕ್ತಿ. ಆದರೆ, ನಿಜ ಜೀವನದಲ್ಲಿ ಭಿನ್ನವಾದ ವ್ಯಕ್ತಿ. ರೇಣುಕಾಸ್ವಾಮಿ ತಂದೆ ತಾಯಿ ವಯಸ್ಸಾದವರು. ಆತನ ಪತ್ನಿ ಗರ್ಭಿಣಿ. ಅವರ ನೋವು ಹೃದಯ ಹಿಂಡುವಂತಿದೆ. ರಾಜ್ಯದಲ್ಲಿ ಇಂತಹ ಅನೇಕ ಘಟನೆಗಳು ನಡೆದಿದ್ದು, ಕಾನೂನು ಸುವ್ಯವಸ್ಥೆ ನಿರ್ವಹಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ” ಎಂದು ಮಾಜಿ ಶಾಸಕ ಜಿ.ಎಚ್ ತಿಪ್ಪಾರೆಡ್ಡಿ ದೂರಿದರು.
‘ಎ1 ಆಗಿದ್ದ ದರ್ಶನ್ನನ್ನು ಎ2 ಆರೋಪಿಯನ್ನಾಗಿ ಮಾಡಲಾಗಿದೆ. ಗೃಹ ಮಂತ್ರಿಗಳು ಆರೋಪಿ ನಟ ದರ್ಶನ್ ಪಾತ್ರದ ಬಗ್ಗೆ ತಿಳಿದುಕೊಳ್ಳಬೇಕು. ಭಾರತದ ಕಾನೂನಿನ ಅನ್ವಯ ಕಠಿಣ ಶಿಕ್ಷೆ ಆಗಲೇಬೇಕು. ಮೇಲ್ನೋಟಕ್ಕೆ ನೇರವಾಗಿ ಸಿಕ್ಕಿ ಬಿದ್ದಿದ್ದಾರೆ. ಅವರಿಗೆ ಜೀವಾವಧಿ ಶಿಕ್ಷೆ ಕೊಡುವ ಮೂಲಕ ಮೃತನ ಕುಟುಂಬಕ್ಕೆ ನ್ಯಾಯ ಕೊಡಬೇಕು. ಈ ಪ್ರಕರಣ ಹಗುರವಾಗಿ ತೆಗೆದುಕೊಂಡರೆ ಇಡೀ ರಾಜ್ಯದಲ್ಲಿ ಪ್ರತಿಭಟನೆ ಪ್ರಾರಂಭ ಆಗುತ್ತವೆ” ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಸವನಾಗೀದೇವ ಸ್ವಾಮೀಜಿ, ಕರವೇ ಜಿಲ್ಲಾಧ್ಯಕ್ಷ ರಮೇಶ್, ವಕೀಲರಾದ ಕೆ.ಎನ್.ವಿಶ್ವನಾಥಯ್ಯ, ಬಜರಂಗದಳ ರಾಜ್ಯ ಸಂಯೋಜಕ ಪ್ರಭಂಜನ್, ನಗರಸಭೆ ಮಾಜಿ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಮುಖಂಡರಾದ ಕೆ.ಎಂ.ವೀರೇಶ್, ಉಮೇಶ್, ಗುರು, ಪಟೇಲ್ ಶಿವಕುಮಾರ್, ಕೆಇಬಿ ಷಣ್ಮುಖಪ್ಪ, ಮಹಡಿ ಶಿವಮೂರ್ತಿ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.




