ಚಿತ್ರದುರ್ಗ ಜಿಲ್ಲೆಯ ಅದೆಷ್ಟೋ ಹಳ್ಳಿಗಳ ವಿದ್ಯಾರ್ಥಿಗಳು ಸರಿಯಾದ ಬಸ್ ವ್ಯವಸ್ಥೆ ಇಲ್ಲದ ಕಾರಣ ಪ್ರತೀ ನಿತ್ಯ ಪರದಾಡುವ ಸ್ಥಿತಿ ಇದೆ.
ಸಮಯಕ್ಕೆ ಸರಿಯಾಗಿ ಬಸ್ ಸಿಗದೆ, ವಿದ್ಯಾರ್ಥಿಗಳು ವಾರದಲ್ಲಿ ಎರಡು-ಮೂರು ದಿನ ಮೊದಲ ತರಗತಿ ತಪ್ಪಿಸಿಕೊಳ್ಳುವುದು ಸಾಮಾನ್ಯವಾಗಿದೆ. ಹೆದ್ದಾರಿಗಳಲ್ಲಿ ಜೀವ ಕೈಯಲ್ಲಿ ಹಿಡಿದು ನಿಲ್ಲುವ ಸ್ಥಿತಿ ಈ ಮಕ್ಕಳದ್ದು. ಮಳೆಗಾಲದಲ್ಲಿ ಈ ಸಂಕಷ್ಟ ಇನ್ನೂ ಹೆಚ್ಚುತ್ತದೆ.
ಗ್ರಾಮೀಣ ಭಾಗಗಳಿಂದ ನಿತ್ಯ ಸಾವಿರಾರು ವಿದ್ಯಾರ್ಥಿಗಳು ನಗರದ ಶಾಲಾ-ಕಾಲೇಜುಗಳಿಗೆ ಬರುತ್ತಾರೆ. ಗ್ರಾಮೀಣ ಸಾರಿಗೆ ಬಸ್ಗಳು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಸಾಗಬೇಕು. ಆದರೆ, ಚಿತ್ರದುರ್ಗ-ದಾವಣಗೆರೆ, ಚಿತ್ರದುರ್ಗ- ಹಿರಿಯೂರು, ಹಿರಿಯೂರು-ಚಳ್ಳಕೆರೆ, ಚಳ್ಳಕೆರೆ-ಮೊಳಕಾಲ್ಮೂರು ಭಾಗದಲ್ಲಿ ಸಂಚರಿಸುವ ಬಹುತೇಕ ಬಸ್ಗಳು ಹೆದ್ದಾರಿಯಲ್ಲೇ ಸಾಗುತ್ತಿವೆ.
ವಿಜಾಪುರ-ಗೊಲ್ಲರಹಟ್ಟಿ, ಹಿರೇಕಬ್ಬಿಗೆರೆ-ಗೊಲ್ಲರಹಟ್ಟಿ, ಕಬ್ಬಿಗೆರೆ, ಅಡವಿಗೊಲ್ಲರಹಳ್ಳಿ, ಜಾಲಿಕಟ್ಟೆ, ಈರಜ್ಜನಹಟ್ಟಿ, ಸಿರಿಗೆರೆ, ಸೊಲ್ಲಾಪುರ, ಹಿರಿಯೂರು, ಹುಳಿಯೂರು ಮಾರ್ಗದ ಗ್ರಾಮಗಳಲ್ಲಿ ಬೆಳಗ್ಗೆ 8ಕ್ಕೆ ಬಸ್ ವ್ಯವಸ್ಥೆ ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.
ನಿತ್ಯ ಮುಂಜಾನೆ ಶಾಲೆ-ಕಾಲೇಜಿಗೆ ಬರಲು ಸೂಕ್ತ ಬಸ್ ಸೌಲಭ್ಯ ಇಲ್ಲ. ಬರುವ ಕೆಲ ಬಸ್ಗಳನ್ನೂ ನಿಲುಗಡೆ ಮಾಡುವುದಿಲ್ಲ. ಕೆಲವರು ವಿದ್ಯಾರ್ಥಿಗಳನ್ನು ಬಸ್ಗೆ ಹತ್ತಿಸಿಕೊಳ್ಳುವುದಿಲ್ಲ. ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಕೆಎಸ್ಆರ್ಟಿಸಿ ಬಸ್ ಸಿಗದಿದ್ದರೆ, ಖಾಸಗಿ ಬಸ್ಗೆ ಹೆಚ್ಚಿನ ಹಣ ತೆತ್ತು ಹೋಗಬೇಕು. ಹೆಚ್ಚಿನ ಹಣ ಪಾವತಿಸಲಾಗದೆ ಅನೇಕ ವಿದ್ಯಾರ್ಥಿಗಳು ಮನೆಗೆ ವಾಪಸ್ ಹೋಗುತ್ತಿದ್ದಾರೆ. ಬಸ್ ಸಮಸ್ಯೆಯಿಂದ ವಿದ್ಯಾರ್ಥಿಗಳು ಮುಂಜಾನೆ 6 ಗಂಟೆಯಿಂದಲೇ ಬಸ್ಗಾಗಿ ಕಾಯುತ್ತಿದ್ದಾರೆ.
ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ ಹಾಗೂ ಪಾವಗಡ ಘಟಕಗಳಿವೆ. ಹೊಳಲ್ಕೆರೆ, ಮೊಳಕಾಲ್ಮೂರು ಹಾಗೂ ಹಿರಿಯೂರು ಘಟಕಗಳು ಕಾರ್ಯರಂಭದ ಹಂತದಲ್ಲಿವೆ. ಆದಷ್ಟು ಬೇಗ ನಮ್ಮ ಊರುಗಳಿಗೆ ಸಮಪರ್ಕ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ವಿದ್ಯಾರ್ಥಿಗಳು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.





