“ವೇದಾವತಿ ನದಿ ದಂಡೆಯ ಹಿರಿಯೂರು ನಗರದ ಒಳಚರಂಡಿ ಯೋಜನೆಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 100 ಕೋಟಿ ರೂಪಾಯಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆ, ಕಾಮಗಾರಿ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ತಿಳಿಸಿದ್ದಾರೆ.
“ಹಿರಿಯೂರು ನಗರದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಒಟ್ಟು 206 ಕೋಟಿ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಪರಿಶೀಲನೆ ನಡೆಸಿರುವ ಆರ್ಥಿಕ ಇಲಾಖೆ ಮೊದಲ ಹಂತದ ಕಾಮಗಾರಿಗೆ 100 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ” ಎಂದು ಸಚಿವ ಡಿ ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನ ವಿಕಾಸ ಸೌಧದಲ್ಲಿ ಸಚಿವರಾದ ಡಿ.ಸುಧಾಕರ್ ಅವರ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ.

“ಸರ್ಕಾರ ನೀಡಲಿರುವ 100 ಕೋಟಿ ರೂ.ಗಳಲ್ಲಿ ಮೊದಲ ಹಂತದ ಕಾಮಗಾರಿ ಕೈಗೊಳ್ಳಲಿದ್ದು, ಇದನ್ನು ಹಿರಿಯೂರು ಕೇಂದ್ರಭಾಗ ಅಥವಾ ವೇದಾವತಿ ನದಿಯ ಬಲ ಭಾಗ, ಹಳೇ ಟೌನ್ ಪ್ರದೇಶಗಳಲ್ಲಿ ಕಾಮಗಾರಿ ಕೈಗೊಳ್ಳಲು ಸೂಚನೆ ನೀಡಲಾಗಿದೆ. 2026 ಜನವರಿಯೊಳಗೆ ಟೆಂಡರ್ ಅಂತಿಮಗೊಳಿಸಿ ಕಾಮಗಾರಿ ಪ್ರಾರಂಭಿಸಲು ಅಧಿಕಾರಿಗಳು ಸೂಚಿಸಲಾಗಿದೆ ಎಂದು ತಿಳಿಸಿದರು.
“ಒಳಚರಂಡಿ ಯೋಜನೆಯಡಿ ಮಲಿನಯುಕ್ತ ನೀರು ಶುದ್ಧೀಕರಿಸುವ ಘಟಕಗಳನ್ನು ನಿರ್ಮಿಸುತ್ತಿದ್ದು, ಮಲಿನ ನೀರನ್ನು ಶುದ್ಧೀಕರಿಸಿದ ನಂತರ ಕೆರೆಗೆ ಹರಿಸುವ ಅಥವಾ ಕೈಗಾರಿಕೆಗಳಿಗೆ ಬಳಸಿಕೊಳ್ಳುವ ಕುರಿತು ಎಂದು ಅಧಿಕಾರಿಗಳು ಯೋಜನೆ ರೂಪಿಸಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಕುರಿತು ಸಭೆಯಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸೆಲ್ವಮಣಿ ಮಾತನಾಡಿ, “ಯೋಜನೆಯಲ್ಲಿ ಹಿರಿಯೂರು ನಗರದ ದಕ್ಷಿಣ ಭಾಗದ 25 ವಾರ್ಡ್ಗಳಲ್ಲಿ ಒಳಚರಂಡಿ ಯೋಜನೆ ಕಾಮಗಾರಿ ನಡೆಯಲಿದೆ.ರಾಷ್ಟ್ರೀಯ ಹೆದ್ದಾರಿ-4 ರ ಬೈಪಾಸ್ ವೇದಾವತಿ ನದಿಯ ಸೇತುವೆ ಬಳಿ ದಕ್ಷಿಣ ದಂಡೆಯಲ್ಲಿ ವೆಟ್ವೆಲ್ ಹಾಗೂ ಸಂಬಂಧಿಸಿದ ಘಟಕಗಳನ್ನು ಎದುರು ನಿರ್ಮಿಸಲಾಗುವುದು” ಎಂದು ವಿವರಿಸಿದರು.
“ವೆಟ್ವೆಲ್ಗಳಿಂದ ಮಲಿನ ನೀರು ಶುದ್ಧೀಕರಣ ಘಟಕದವರೆಗೂ ಡಿ.ಐ. ಏರು ಕೊಳವೆ ಮಾರ್ಗವನ್ನು 2.40 ಕಿ.ಮಿ. ಅಳವಡಿಸಿ, ಹೊಸ ಬೈಪಾಸ್ ರಸ್ತೆಯ ಸಮೀಪ 5.00 ಎಂ.ಎಲ್.ಡಿ. ಸಾಮಥ್ರ್ಯದ ಎಸ್.ಬಿ.ಆರ್. ತಂತ್ರಜ್ಞಾನದ ಮಲಿನ ನೀರು ಶುದ್ಧೀಕರಣ ಘಟಕ ನಿರ್ಮಾಣ, 02 ವೆಟ್ವೆಲ್ಗಳಲ್ಲಿ ಮಲಿನ ನೀರು ಶುದ್ಧೀಕರಣ ಘಟಕಕ್ಕೆ ಪಂಪ್ ಮಾಡಲು ಯಂತ್ರೋಪಕರಣಗಳ ಅಳವಡಿಕೆ, ಮಲಿನ ನೀರು ಶುದ್ಧೀಕರಣ ಘಟಕ ಹಾಗೂ 02 ಸಂಖ್ಯೆಯ ವೆಟ್ವೆಲ್ಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವ 11 ಕೆ.ವಿ. ವಿದ್ಯುತ್ ಮಾರ್ಗ ಅಳವಡಿಕೆ ಹಾಗೂ ಈ ಮಲಿನ ನೀರು ಶುದ್ಧೀಕರಣ ಘಟಕವನ್ನು ನಿರಂತರವಾಗಿ ನಿಗಾವಹಿಸಲು ವಿನೂತನ ತಂತ್ರಜ್ಞಾನ ಬಳಕೆ ಮಾಡಲು ಯೋಜಿಸಲಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಚಳ್ಳಕೆರೆ ನಗರಸಭೆ ಬಜೆಟ್ ಪೂರ್ವಭಾವಿ ಸಭೆ: ಸಾರ್ವಜನಿಕರಿಗೆ ಆಹ್ವಾನ
ಸಭೆಯಲ್ಲಿ ಮುಖ್ಯ ಇಂಜಿನಿಯರ್ ಪ್ರವೀಣ್ಲಿಂಗಯ್ಯ, ಕಾರ್ಯಪಾಲಕ ಇಂಜಿನಿಯರ್ ಮಲ್ಲೇಶ್ನಾಯ್ಕ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಓಬಾನಾಯ್ಕ್, ಹಿರಿಯೂರು ನಗರಸಭೆ ಆಯುಕ್ತ ವಾಸೀಂ ಸೇರಿದಂತೆ ಇತರರು ಹಾಜರಿದ್ದರು.





