ನಾಯಕನಹಟ್ಟಿಯ ಕಾಯಕಯೋಗಿ ಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯ ಅಧೀನದಲ್ಲಿರುವ ಗುರುತಿಪ್ಪೇರುದ್ರಸ್ವಾಮಿ ಸಂಸ್ಕೃತ, ವೇದ ಪಾಠಶಾಲೆಯಲ್ಲಿ ವೀರೇಶ್ ಹಿರೇಮಠ ಎಂಬ ಶಿಕ್ಷಕ, ಮಕ್ಕಳ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ನಡೆದಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೂಲಕ ತಡವಾಗಿ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಕ ವೀರೇಶನನ್ನು ಅಮಾನತು ಮಾಡಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಶಿಕ್ಷಕನ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ವೀರೇಶ್ ಹಿರೇಮಠ ಅವರನ್ನು ಗುಲಬರ್ಗಾದಲ್ಲಿ ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಶಾಲೆಯಿಂದ ವಜಾಗೊಳಿಸಬೇಕು ಎಂದು ಸ್ಥಳೀಯರು ಕಛೇರಿ ಮುಂದೆ ಒತ್ತಾಯಿಸಿದ್ದರು.

“ಇಲ್ಲಿನ ವೇದ ಶಾಲೆಯ ಶಿಕ್ಷಕ ವೀರೇಶ್ ಎನ್ನುವವರು ಮಗುವಿನ ಮೇಲೆ ಮೃಗೀಯವಾಗಿ ವರ್ತಿಸಿ ಕಾಲಿನಿಂದಲೂ ಹಲ್ಲೆ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ. ವಿಡಿಯೋದಲ್ಲಿ ಕಾಲಿನಿಂದ ಪುಟ್ಟ ವಿದ್ಯಾರ್ಥಿಯ ಮೇಲೆ ಮನಸ್ಸೋ ಇಚ್ಚೆ ಹಲ್ಲೆ ಮಾಡಿರುವ ದೃಶ್ಯ ಕಂಡು ಬಂದಿದೆ. ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಸುಕ್ಷೇತ್ರ ಒಂದು ಪುಣ್ಯಸ್ಥಳವಾಗಿದ್ದು, ಅಂತಹ ಪುಣ್ಯ ಸ್ಥಳದಲ್ಲಿ ಇಂತಹ ಹೀನಸಂಸ್ಕೃತಿಯ, ಮೃಗದಂತೆ ವರ್ತಿಸುವ ಶಿಕ್ಷಕರಿಗೆ ಅವಕಾಶ ನೀಡಬಾರದು. ಕೂಡಲೇ ಶಿಕ್ಷಕನ ಮೇಲೆ ಕ್ರಮ ಜರುಗಿಸಬೇಕು. ಈ ರೀತಿ ಮಕ್ಕಳನ್ನು ಹಿಂಸಿಸಿದರೆ ಈ ಶಾಲೆಗೆ ಯಾರು ಸೇರಿಸುವುದಿಲ್ಲ. ಇವರ ಮೇಲೆ ಸ್ವಯಂ ದೂರು ದಾಖಲಿಸಿ ಕ್ರಮ ತೆಗೆದುಕೊಳ್ಳಿ” ಎಂದು ಚಳ್ಳಕೆರೆಯ ತಿಮ್ಮರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಬಾಲಕರ ಮೇಲೆ ಇದೇ ರೀತಿ ಹಲ್ಲೆ ಆಗಿದ್ದು, ಅಂದು ಘಟನೆಯ ನಂತರ ಆಡಳಿತ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಆದರೂ ಅವರು ಈ ಬಗ್ಗೆ ಕ್ರಮ ವಹಿಸಿಲ್ಲ. ಈಗ ಈ ಶಿಕ್ಷಕ ಮತ್ತೆ ಮನಸ್ಸು ಇಚ್ಛೆ ಬಾಲಕನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಮೊದಲು ದೂರು ನೀಡಿದ್ದರೂ, ಕ್ರಮ ಕೈಗೊಳ್ಳದ ಆಡಳಿತ ಮಂಡಳಿಯ ಅಧಿಕಾರಿಗಳ ಮೇಲೆ ಕಿಡಿಕಾರಿರುವ ಸಾರ್ವಜನಿಕರು, ಇದು ಶಿಕ್ಷಕನ ಮತ್ತು ಆಡಳಿತ ಮಂಡಳಿಯ ತಪ್ಪು ಕೂಡ ಇದೆ. ಅವರ ಮೇಲೂ ಕೂಡ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಮುಂದೆ ಒತ್ತಾಯಿಸಿದ್ದರು.
ನಾಯಕನಹಟ್ಟಿ ವೇದ ಶಾಲೆಯಲ್ಲಿ ಶಿಕ್ಷಕ ವಿಕೃತಿಯಿಂದ ಬಾಲಕನ ಮೇಲೆ ಕ್ರೌರ್ಯ ತೋರಿದ್ದಾನೆ. ಈ ವೀಡಿಯೋ ವೈರಲ್ ಆಗುತ್ತಲೇ ಶಿಕ್ಷಕ ವೀರೇಶ್ ಹಿರೇಮಠ ನಾಪತ್ತೆಯಾಗಿದ್ದ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾರ್ಯನಿರ್ವಹಣಾಧಿಕಾರಿ ಗಂಗಾಧರಪ್ಪ, “ಪುಟ್ಟ ವಿದ್ಯಾರ್ಥಿಯ ಮೇಲೆ ಅಮಾನುಷ ಹಲ್ಲೆ ನಡೆಸಿದ ಶಿಕ್ಷಕ ವೀರೇಶ್ ಮೇಲೆ ಆಡಳಿತ ಮಂಡಳಿ ವತಿಯಿಂದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಅಲ್ಲದೇ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಅಮಾನತು ಮಾಡಲಾಗಿದೆ. ಇದು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಕಾರಣ ಜಿಲ್ಲಾಧಿಕಾರಿಗಳಿಗೆ ಈ ಕುರಿತು ಕ್ರಮ ಕೈಗೊಳ್ಳಲು ಮನವಿ ನೀಡಲಾಗುವುದು. ಘಟನೆ ಕುರಿತಂತೆ ಶಿಕ್ಷಕನನ್ನು ವಜಾ ಮಾಡಲಾಗಿದೆ” ಎಂದು ತಿಳಿಸಿದರು.

ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ನಾಯಕನಹಟ್ಟಿ ಘಟಕದ ವತಿಯಿಂದ ಶಿಕ್ಷಕನ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಆಡಳಿತ ಮಂಡಳಿಗೆ ಕರವೇ ಅಧ್ಯಕ್ಷ ಪ್ರಕಾಶ್ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವಾಲ್ಮೀಕಿ ಸಮಾಜದ ಬಗ್ಗೆ ಅವಹೇಳನ: ಗುರುಪೀಠದ ಪ್ರಸನ್ನಾನಂದಪುರಿ ಶ್ರೀ ಆಕ್ರೋಶ
ಕರವೇ ಅಧ್ಯಕ್ಷ ಪ್ರಕಾಶ್ ಮಾತನಾಡಿ ಪುಟ್ಟ ವಿದ್ಯಾರ್ಥಿಯ ಮೇಲೆ ಮನಸ್ಸೋಇಚ್ಚೆ ಹಲ್ಲೆ, ಕಾಲಿನಿಂದ ಹೊಡೆದಿರುವ ಶಿಕ್ಷಕ ವೀರೇಶ್ ಮೇಲೆ ಮಕ್ಕಳ ರಕ್ಷಣಾ ಕಾಯ್ದೆ ಕಾನೂನಿನಡಿಯಲ್ಲಿ ಕ್ರಮ ಕೈಗೊಂಡು, ಉಗ್ರ ಶಿಕ್ಷೆ ನೀಡಬೇಕು. ಅಮಾನತುಗೊಳಿಸಿ ಮುಂದೆ ಸಂಸ್ಥೆಯಲ್ಲಿ ಮತ್ತೆ ಅವಕಾಶ ನೀಡಬಾರದು. ಶಾಲೆಯಲ್ಲಿ ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.





