ಸುಪ್ರೀಂ ಕೋರ್ಟ್ ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ವಕೀಲನೊಬ್ಬ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿಯವರ ಮೇಲೆ ಶೂ ಎಸೆದ ಪ್ರಕರಣವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ ಕೃಷ್ಣಪ್ಪ) ತೀವ್ರವಾಗಿ ಖಂಡಿಸಿ ಪ್ರತಿಭಟಿಸುತ್ತದೆ. ಇದು ಕೇವಲ ಮುಖ್ಯ ನ್ಯಾಯಮೂರ್ತಿಯವರ ಮೇಲೆ ನಡೆದ ದಾಳಿಯಲ್ಲ. ಇದು ಭಾರತದ ಸಂವಿಧಾನದ ಮೇಲೆ ನಡೆದ ದಾಳಿಯಾಗಿದೆ. ಬಿ.ಆರ್ ಗವಾಯಿ ಯವರ ಮೇಲೆ ಶೂ ಎಸೆದ ವಕೀಲನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ದಸಂಸ ಚಿತ್ರದುರ್ಗ ಜಿಲ್ಲಾ ಹಾಗೂ ಹೊಳಲ್ಕೆರೆ ತಾಲೂಕು ಘಟಕದ ಮುಖಂಡರು ಹೊಳಲ್ಕೆರೆ ತಹಶೀಲ್ದಾರ್ ರವರಿಗೆ ಮನವಿ ನೀಡಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, “ದಲಿತನೊಬ್ಬ ಮುಖ್ಯ ನ್ಯಾಯಾಧೀಶರ ಪೀಠದಲ್ಲಿ ಕೂತು ನ್ಯಾಯ ಕೊಡುವುದನ್ನು ಸನಾತನವಾದಿಗಳು ಯಾವತ್ತೂ ಒಪ್ಪಿಕೊಳ್ಳುವುದಿಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾ. ಬಿ.ಆರ್ ಗವಾಯಿಯವರು ತಾವು ಅಂಬೇಡ್ಕರ್ ವಾದಿಗಳು ಆರ್.ಎಸ್.ಎಸ್ ನಂತಹ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇದರ ಬೆನ್ನಲ್ಲೆ ಸೋಮವಾರ ವಿಚಾರಣೆಯಲ್ಲಿ ವಕೀಲನೊಬ್ಬ ಶೂ ಎಸೆದಿದ್ದಾನೆ”ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸನಾತನ ಧರ್ಮಕ್ಕೆ ಅಪಮಾನ ಮಾಡಿದರೆ ಸಹಿಸುವುದಿಲ್ಲವೆಂದು ಉದ್ದಟತನದಿಂದ ವಕೀಲ ಮಾತನಾಡಿರುವುದು ಸನಾತನವಾದಿಗಳ ಮುಖವಾಡ ಕಳಚಿದಂತಾಗಿದೆ. ಸಿಜೆಐ ಗವಾಯಿಯವರು ಉತ್ತರ ಪ್ರದೇಶದ ಸರ್ಕಾರದ ಬುಲ್ಲೋಜರ್ ಕಾರ್ಯಾಚರಣೆಗೆ ತಡೆ ನೀಡಿದ್ದಲ್ಲದೇ, ಯಾವುದೇ ಪ್ರಕರಣವಿದ್ದರೂ ಸಂವಿಧಾನದಡಿಯಲ್ಲೇ ಆದೇಶ ನೀಡುತ್ತಿರುವುದು ಸನಾತನವಾದಿಗಳಿಗೆ ಬಿಸಿತುಪ್ಪವಾಗಿದೆ. ಆದ್ದರಿಂದ ಬಿ.ಆರ್ ಗವಾಯಿ ಯವರ ಮೇಲೆ ಶೂ ಎಸೆದ ವಕೀಲನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಚಿತ್ರದುರ್ಗದ ಜಿಲ್ಲಾ ಹಾಗೂ ತಾಲೂಕು ದಸಂಸ ಮುಖಂಡರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆತ: ಕಾನೂನಿನ ಶಿಷ್ಟತೆ ಕಾಪಾಡುವವರಿಂದಲೇ ಸಂವಿಧಾನದ ಕಗ್ಗೊಲೆ
ಈ ವೇಳೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಮತ್ತು ತಾಲೂಕು ಮುಖಂಡರಾದ ಕೆಂಗುಂಟೆ ಜಯ್ಯಣ್ಣ, ಸುಂದರ್ ಮೂರ್ತಿ, ನವೀನ್ ಮದ್ದೇರು, ಶ್ರೀನಿವಾಸ್, ರಾಮಚಂದ್ರಪ್ಪ, ನಾಗರಾಜಪ್ಪ, ಪ್ರಭಾಕರ್ ಹಾಗೂ ಇತರ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.





