“ಡಿಸೆಂಬರ್ 9, 2025 ರಂದು ಮಂಗಳವಾರ ಸಂಕಷ್ಟದಲ್ಲಿರುವ ರಾಜ್ಯದ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿತ್ರದುರ್ಗ ಜಿಲ್ಲಾ ಘಟಕ ಬೆಳಗಾವಿ ಸುವರ್ಣಸೌಧ ಚಲೋ ನಡೆಸಲಿದೆ” ಎಂದು ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ರೈತ ಸಂಘದ (ವಾಸುದೇವ ಮೇಟಿ ಬಣ) ಮುಖಂಡರು ತಿಳಿಸಿದರು.
ಚಿತ್ರದುರ್ಗದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು “ಖರೀದಿ ಕೇಂದ್ರ, ಬೆಳೆ ಹಾನಿ ಪರಿಹಾರ, ಬೆಳೆ ನಷ್ಟ ಪರಿಹಾರ, ಸಾಗುವಳಿ ಭೂಮಿ ಮಂಜೂರು, ವಿವಾದಿತ ಕೃಷಿ ಕಾಯ್ದೆ ರದ್ದು ಸೇರಿದಂತೆ ಹಲವು ರೈತರ ಸಮಸ್ಯೆ ಬಗೆಹರಿಸಲು ಸರ್ಕಾರ ಆಸಕ್ತಿ ತೋರುತ್ತಿಲ್ಲ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಹಲವಾರು ರೈತರ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಒತ್ತಾಯಿಸಿದರು.
“ರೈತರ ಬೇಡಿಕೆಗಳಾದ ಬೆಳೆ ಪರಿಹಾರವನ್ನು ಎಲ್ಲಾ ರೀತಿಯ ಬೆಳೆಗಳಿಗೂ ಎಕರೆಗೆ ರೂ.40,000/- ಹಣವನ್ನು ನೀಡಬೇಕು. ವಿಮೆ ಕಂತು ಕಟ್ಟಿರುವ ಎಲ್ಲಾ ರೀತಿಯ ಬೆಳೆವಿಮೆ ಹಣವನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು. ಮೆಕ್ಕೆಜೋಳದ ಖರೀದಿ ಕೇಂದ್ರಗಳನ್ನು ಜಿಲ್ಲಾ ಮತ್ತು ತಾಲ್ಲೂಕು, ಹೋಬಳಿ ಮಟ್ಟಗಳಲ್ಲಿ ತೆರೆಯಬೇಕು. ಒಬ್ಬ ರೈತನಿಂದ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿ ಮಾಡಬೇಕು. ಗೋಮಾಳ ಅರಣ್ಯ ಭೂಮಿ, ಬಗುರ್ಹುಕುಂ, ಸೇಂದಿವನ, ಹುಲ್ಲುಬನ್ನಿ ಖರಾಬ್, ಸಾಗುವಳಿ ಮಾಡಿರುವಂತಹ ರೈತರಿಗೆ ಶೀಘ್ರವಾಗಿ ಹಕ್ಕುಪತ್ರಗಳನ್ನು ನೀಡಬೇಕು” ಎಂದು ಒತ್ತಾಯಿಸಿದರು.
“ರೈತರ ಸಂಪೂರ್ಣ ಬೆಳೆ ಸಾಲ ಮನ್ನಾಗೊಳಿಸಿ, ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ಭದ್ರಾಮೇಲ್ದಂಡೆ ಯೋಜನೆಯಿಂದ ವಂಚಿತವಾಗಿರುವ ಕೆರೆಗಳಿಗೂ ನೀರನ್ನು ಹರಿಸಬೇಕು. ಅನುದಾನವನ್ನು ನೀಡಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಚುರುಕುಗೊಳಿಸಿ, ಶೀಘ್ರವಾಗಿ ಬರದನಾಡು ಚಿತ್ರದುರ್ಗ ಜಿಲ್ಲೆಯನ್ನು ಹಸಿರು ಜಿಲ್ಲೆಯನ್ನಾಗಿ ಮಾಡಬೇಕು. ರೈತರ ಬೆಳೆಗಳಿಗೆ ಸರ್ಕಾರ ಕಾನೂನಾತ್ಮಕ ಬೆಂಬಲ ಬೆಲೆ ನಿಗಧಿಪಡಿಸಬೇಕು. ಮೂರು ಕೃಷಿ ಕಾಯ್ದೆಗಳನ್ನು ಸರ್ಕಾರವು ಕೂಡಲೇ ಹಿಂಪಡೆಯಲು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ಹೊಳಲ್ಕೆರೆ ತಾಲ್ಲೂಕಿನಲ್ಲಿ 5 ಸಾವಿರ ಎಕರೆ ಭೂಮಿ ಅಮೃತಕಾವಲ್ ಇದ್ದು, ಜಾನುವಾರ ಗಣತಿ ಮಾಡಿಸಿ, ಉಳಿದ ಭೂಮಿಯನ್ನು ರೈತರಿಗೆ ನೀಡಬೇಕು. ಹೊಳಲ್ಕೆರೆ ತಾಲ್ಲೂಕಿನಲ್ಲಿ ಬಗರ್ಹುಕುಂ ಸಮಿತಿಯನ್ನು ರಚನೆ ಮಾಡುವುದು ಸೇರಿದಂತೆ ಹಲವು ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿ ಸುವರ್ಣಸೌಧ ಚಲೋ ನಡೆಸಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಖರೀದಿ ಕೇಂದ್ರ ತೆರೆದು ಬೆಳೆ ಪರಿಹಾರ ಬಿಡುಗಡೆಗೆ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹ
ಸುದ್ದಿಗೋಷ್ಠಿಯಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಶ್ರೀಮತಿ ಲೋಲಾಕ್ಷಮ್ಮ, ಚಿತ್ರದುರ್ಗ ತಾಲ್ಲೂಕು ಮಹಿಳಾ ಅಧ್ಯಕ್ಷೆ ಶ್ರೀಮತಿ ಪವಿತ್ರ, ಹೊಸದುರ್ಗ ತಾಲೂಕು ಅಧ್ಯಕ್ಷ ವೆಂಕಟೇಶ್, ಚಳ್ಳಕೆರೆ ತಾಲ್ಲೂಕು ಮಹಿಳಾ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮೀ, ಚಿತ್ರದುರ್ಗ ತಾಲೂಕು ಅಧ್ಯಕ್ಷೆ ಶಿವಮೂರ್ತಿ, ಹೊಳಲ್ಕೆರೆ ತಾಲ್ಲೂಕು ಮಹಿಳಾ ಅಧ್ಯಕ್ಷೆ ಹೆಚ್.ಎನ್.ಅಂಜು, ಹಿರಿಯೂರು ತಾಲೂಕು ಅಧ್ಯಕ್ಷ ರಂಗಸ್ವಾಮಿ, ಹಿರಿಯೂರು ತಾಲೂಕು ಮಹಿಳಾ ಅಧ್ಯಕ್ಷೆ ಶ್ರೀಮತಿ ಶಕುಂತಲ, ಮೊಳಕಾಲ್ಕೂರು ತಾಲೂಕು ಅಧ್ಯಕ್ಷ ಅರುಣ್ ಕುಮಾರ್.ಪಿ.ಸಿ, ಚಳ್ಳಕೆರೆ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್ ಹಾಗೂ ಮಂಜುಳ ಕೊಳಹಾಳ್, ಶಶಿಕಲಾ ಭರಮಸಾಗರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.





