ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಸೋಮವಾರ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ವಿಶೇಷ ಚೇತನರಿಗೆ ಮೋಟಾರ್ ಚಾಲಿತ ತ್ರಿ-ಚಕ್ರವಾಹನಗಳ ವಿತರಣೆ ಮಾಡಿದರು.
ಕಾರ್ಮಿಕ ಅಧಿಕಾರಿ ಅನಿಲ್ ಬಿ ಬಗಟಿ ಮಾಹಿತಿ ನೀಡಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಸಾರಿಗೆ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದಾವಣಗೆರೆ ಕಾರ್ಖಾನೆಗಳ ಮತ್ತು ಬಾಯ್ಲರ್ಗಳ ಇಲಾಖೆ ಇವರುಗಳ ಸಹಯೋಗದಲ್ಲಿ ಸಿಎಸ್ಆರ್ ನಿಧಿಯಲ್ಲಿ ವಿಶೇಷ ಚೇತನರಿಗೆ ಮೋಟಾರ್ ಚಾಲಿತ ತ್ರಿ-ಚಕ್ರವಾಹನಗಳ ವಿತರಿಸಲಾಗಿದೆ ಎಂದು ಹೇಳಿದರು.
ಚಳ್ಳಕೆರೆ ಹೆಗ್ಗೆರೆ ಎಂ/ಎಸ್ ಪ್ರಕಾಶ್ ಸ್ಪಾಂಜ್ ಐರನ್ ಅಂಡ್ ಪವರ್ ಪ್ರೈ.ಲಿ ಅವರು 03 ತ್ರಿ-ಚಕ್ರ ವಾಹನಗಳು, ಚಿತ್ರದುರ್ಗ ಮೋರೇಶ್ವರ ಆಗ್ರೋ ಫೀಡ್ಸ್ ಪ್ರೈ.ಲಿ, ಅರವಿಂದ್ ಲಿಮಿಟೆಡ್, ಹಿರಿಯೂರು ಸ್ನೇಹ ಫಾಮ್ರ್ಸ್ ಪ್ರೈ.ಲಿ ಕೈಗಾರಿಕೆಗಳು ತಲಾ 1 ತ್ರಿ-ಚಕ್ರ ವಾಹನಗಳು ಸೇರಿದಂತೆ ಒಟ್ಟು 6 ತ್ರಿ-ಚಕ್ರ ವಾಹನಗಳನ್ನು ವಿಶೇಷ ಚೇತನರಿಗೆ ಕೊಡುಗೆ ನೀಡಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಳ್ಳಕೆರೆ ಶಾಸಕರು ಹಾಗೂ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಟಿ.ರಘುಮೂರ್ತಿ, ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ ಸಿಇಒ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಕಾರ್ಮಿಕ ನಿರೀಕ್ಷಕ ಭೀಮೇಶ್, ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಪಿ.ಸತೀಶ್ ಕುಮಾರ್ ಇದ್ದರು.





