ದಲಿತ ಕಾಲೋನಿಯ ಜನತೆ ಹಲವಾರು ವರ್ಷಗಳಿಂದ ಸಿಸಿ ರಸ್ತೆ, ಕುಡಿಯುವ ನೀರು, ಚರಂಡಿ ಸೇರಿದಂತೆ ಹಲವಾರು ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದು, ಹಲವು ಬಾರಿ ಮನವಿ ಮಾಡಿದರೂ ಮೂಲಸೌಕರ್ಯ ಕಲ್ಪಿಸದ ಗ್ರಾಮ ಪಂಚಾಯತಿ ವಿರುದ್ಧ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಮದ್ದೂರು ಗ್ರಾಮದ ದಲಿತರು ಗ್ರಾಮ ಪಂಚಾಯತ್ ಆವರಣದಲ್ಲಿ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಇದೇವೇಳೆ ದಸಂಸ ಮುಖಂಡ ನವೀನ್ ಮದ್ದೇರು ಮಾತನಾಡಿ, “ಹೊಳಲ್ಕೆರೆ ತಾಲೂಕು ಮದ್ದೂರು ಗ್ರಾಮದ ದಲಿತ ಕಾಲೋನಿಯ ಜನರು ದನಗಳಿಗೆ ನೀರಿನ ತೊಟ್ಟಿ, ಕುಡಿಯುವ ನೀರು, ವಿದ್ಯುತ್, ಚರಂಡಿ ವ್ಯವಸ್ಥೆ, ಸಿಸಿ ರಸ್ತೆ, ಸ್ಮಶಾನಕ್ಕೆ ರಸ್ತೆ, ಸ್ಮಶಾನ ಅಭಿವೃದ್ಧಿ ಇಲ್ಲದೆ ಜೀವನ ಸಾಗಿಸುತ್ತಿದ್ದು, ಹಲವಾರು ಬಾರಿ ಗ್ರಾಮ ಪಂಚಾಯಿತಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದರೂ ನಿರ್ಲಕ್ಷಿಸಿದ್ದಾರೆ. ದಲಿತ ಕಾಲೋನಿಯ ಜನರನ್ನು ನಿರ್ಲಕ್ಷದಿಂದ ಗುಲಾಮರಂತೆ ಕಾಣುತ್ತಿರುವುದು ವಿಪರ್ಯಾಸ” ಎಂದು ಆರೋಪಿಸಿದರು.

“ಈ ಕೂಡಲೇ ದಲಿತ ಕಾಲೋನಿಗೆ ಅಗತ್ಯ ಮೂಲಸೌಕರ್ಯಗಳಾದ ಶುದ್ಧ ಕುಡಿಯುವ ನೀರಿನ ಘಟಕ, ಸಿಸಿ ರಸ್ತೆ, ಸ್ಮಶಾನ ಅಭಿವೃದ್ಧಿ, ಚರಂಡಿ ವ್ಯವಸ್ಥೆ, ಸಮರ್ಪಕ ವಿದ್ಯುತ್ ವ್ಯವಸ್ಥೆ, ಸಿ ಸಿ ಕ್ಯಾಮೆರಾ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಅಹೋರಾತ್ರಿ ಧರಣಿಯನ್ನು ನಡೆಸಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಆಸ್ಪತ್ರೆ ಸ್ನಾನದ ಕೋಣೆಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ: ರಕ್ಷಿಸಿ ಆರೈಕೆ ನೀಡಿದ ಸಿಬ್ಬಂದಿ
ಪ್ರತಿಭಟನೆಯಲ್ಲಿ ಗ್ರಾಮದ ನಾಗವೇಣಿ ಸುಚಿತ್ರ ಕವಿತಾ ವೇದಾವತಿ, ಚಂದನ್ ಅರ್ಪಿತಾ ಪದ್ಮಾ ಪ್ರೇಮ ಗಿರಿಜಾ ನೇತ್ರಮ್ಮ ಧನುಷ್,ಪಾಪು ಹನುಮಂತ, ಮೂರ್ತಪ್ಪ, ಮನು, ಶಿವು, ರಘು, ಮಾರುತೇಶ್, ರಂಗಸ್ವಾಮಿ, ನಾಗರಾಜ ಸೇರಿದಂತೆ ಅನೇಕರು ಹಾಜರಿದ್ದರು.





