ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ವ್ಯಕ್ತಿಯೊಬ್ಬ ತನ್ನನ್ನು ಬಿಟ್ಟು ಹೋಗಿದ್ದ ಪತ್ನಿ, ಮಗಳು ಸೇರಿದಂತೆ ಐವರ ಮೇಲೆ ಆಸಿಡ್ ದಾಳಿ ನಡೆಸಿ, ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಚಿತ್ರದುರ್ಗ ನಗರದ ಮಾಳಪ್ಪನಹಟ್ಟಿಯಲ್ಲಿ ನಡೆದಿದೆ.
ಆರೋಪಿ ಮೊಹಮ್ಮದ್ ಸುಹೇಲ್(44) ನಡೆಸಿದ ಆಸಿಡ್ ದಾಳಿ ಹಲ್ಲೆಯಿಂದ ಪತ್ನಿ ತಾಸಿನಾಬಾನು, ಮಗಳು ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿ ಕಳೆದ 8 ತಿಂಗಳುಗಳಿಂದ ದೂರವಾಗಿ ವಾಸವಿದ್ದರು.
ನಗರದ ನಗ್ಮಾನಾಯ್ಕ ಎಂಬವರ ಮನೆಗೆ ಹಬ್ಬಕ್ಕೆಂದು ಆಕೆಯ ಸಹೋದರಿಯರಾದ ತಾಸಿನಾಬಾನು ಹಾಗೂ ನೇಹಾ ಅವರು ತಮ್ಮ ಮಕ್ಕಳೊಂದಿಗೆ ಬೆಂಗಳೂರಿನಿಂದ ಆಗಮಿಸಿದ್ದರು. ಈ ವಿಷಯ ತಿಳಿದು ಏಕಾಏಕಿ ಇವರ ಮನೆಗೆ ನುಗ್ಗಿದ ಸುಹೇಲ್, ಆಸಿಡ್ ದಾಳಿ ನಡೆಸಿದ್ದಾನೆ.
ಮೊದಲಿಗೆ, ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ, ಜಗಳ ಬಿಡಿಸಲು ಮುಂದಾದ ತಾಸಿನಾಬಾನು ಅವರ ಹಿರಿಯ
ಸಹೋದರಿ ನಗ್ಮಾನಾಯ್ಕ, ಕಿರಿಯ ಸಹೋದರಿ ನೇಹಾ ಹಾಗೂ ಆಕೆಯ 4 ವರ್ಷದ ಪುತ್ರಿ ಹಾಗೂ ತನ್ನ 11 ವರ್ಷದ ಮಗಳು ಸೇರಿ ಐವರ ಮೇಲೆ ಆಸಿಡ್ ಎರಚಿ ಪರಾರಿಯಾಗಿದ್ದಾನೆ.
ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಐವರಿಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ಪತ್ನಿಯು ಪತಿ ವಿರುದ್ಧ ಆಕ್ರೋಶ ಹೊರಹಾಕಿದ್ದು, “ಆತನೊಂದಿಗೆ ಜೀವನ ಸಾಗಿಸಲು ಹಲವು ಅವಕಾಶ ನೀಡಿದರೂ ಕೂಡ ಪ್ರಯೋಜನವಾಗಲಿಲ್ಲ. ಹೀಗಾಗಿ ಅವನ ಹಿಂಸೆ ತಾಳಲಾರದೇ ನಾನು ದೂರವಾಗಿದ್ದು, ಈಗ ಬೆಂಗಳೂರಿನಲ್ಲಿದ್ದೇನೆ. ಆತ ಚಿತ್ರದುರ್ಗದಲ್ಲಿದ್ದು, ಈ ದುಷ್ಕೃತ್ಯ ಎಸಗಿದ್ದಾನೆ. ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಅವಲತ್ತುಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕೋಟೆ ಠಾಣೆ ವ್ಯಾಪ್ತಿಯಲ್ಲಿ ಆಸಿಡ್ ದಾಳಿ ಪ್ರಕರಣ ನಡೆದಿದೆ. ನೆಹರೂ ನಗರದ ಆಟೋ ಚಾಲಕನಾದ ಆರೋಪಿ ಮೊಹಮ್ಮದ್ ಸುಹೇಲ್ ಕೌಟುಂಬಿಕ ಕಲಹದಿಂದಾಗಿ ತನ್ನ ಪತ್ನಿಯಿಂದ ದೂರವಾಗಿ ಎಂಟು ತಿಂಗಳಾಗಿದೆ. ಆತನ ಪತ್ನಿ ತಾಸಿನಾಬಾನು ತನ್ನ ಅಕ್ಕನ ಮನೆಗೆ ಬಂದಾಗ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಬಳಿಕ ತನ್ನ ಜತೆಗೆ ತಂದಿದ್ದ ಆಸಿಡ್ ಬಾಟಲ್ ಎಸೆದು ಪರಾರಿಯಾಗಿದ್ದಾನೆ. ಅಲ್ಲೇ ಇದ್ದ ಐವರ ಮೇಲೆ ಆಸಿಡ್ ಬಿದ್ದು ಸುಟ್ಟ ಗಾಯಗಳಾಗಿವೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ‘ಸಮಾಧಾನ ಮಹೋತ್ಸವ’ಕಾರ್ಯಕ್ರಮ ನಡೆಸಲು ಹೈಕೋರ್ಟ್ ಅನುಮತಿ : ಪ್ರಶಾಂತ್ ಜತ್ತನ್ನ
“ಚಿಕಿತ್ಸೆ ನೀಡಿದ ಬಳಿಕ ಎಲ್ಲರನ್ನೂ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಆರೋಪಿ ಬಂಧನಕ್ಕೆ ಪೊಲೀಸ್ ತಂಡಗಳನ್ನು ರಚಿಸಿದ್ದೇವೆ. ಆತ ಮಚ್ಚು ಕೂಡ ತೆಗೆದುಕೊಂಡು ಬಂದಿದ್ದ. ಅದರಿಂದಲೂ ಹಲ್ಲೆ ಮಾಡಿದ್ದಾನೆ. ಮೊದಲಿನಿಂದಲೂ ದಂಪತಿ ನಡುವೆ ಜಗಳವಾಗುತ್ತಿತ್ತು. ಎಂಟು ತಿಂಗಳ ಹಿಂದೆ ಇಬ್ಬರೂ ದೂರವಾಗಿದ್ದರು. ಆದರೂ ಕೂಡ ಆರೋಪಿ ದ್ವೇಷ ಹೊಂದಿದ್ದು, ಈಗ ಈ ಕೃತ್ಯ ನಡೆಸಿದ್ದಾನೆ. ಆತನನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ” ಎಂದರು.





