“ಗ್ರಾಮ ಪಂಚಾಯಿತಿಯ ಕಾಮಗಾರಿಯಲ್ಲಿ ಕುಡಿಯುವ ನೀರು, ಬೀದಿದೀಪ ಕಾಮಗಾರಿಯಲ್ಲಿ ವಸ್ತುಗಳನ್ನು ಸರಬರಾಜು ಮಾಡಿದ ಬೇಡರೆಡ್ಡಿಹಳ್ಳಿಯ ಅಂಗಡಿಯವರ ಕುಟುಂಬ ಸಂಕಷ್ಟದಲ್ಲಿದ್ದು, ಅವರಿಗೆ ಬರಬೇಕಾದ ಬಾಕಿಯನ್ನು ಕೂಡಲೇ ಪಾವತಿಸಬೇಕು. ಹಾಗೂ ಗ್ರಾಮ ಪಂಚಾಯಿತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು ಇದಕ್ಕೆ ಸತ್ಯಶೋಧನಾ ಸಮಿತಿ ರಚಿಸಿ ತನಿಖೆ ಕೈಗೊಳ್ಳಬೇಕು” ಎಂದು ಒತ್ತಾಯಿಸಿ ಚಿತ್ರದುರ್ಗ ಜಿಲ್ಲೆಯ ಕರ್ನಾಟಕ ರಾಜ್ಯ ರೈತ ಸಂಘ ಮೊಳಕಾಲ್ಮುರು, ಚಳ್ಳಕೆರೆ ಘಟಕ ಚಳ್ಳಕೆರೆ ತಾಲೂಕು ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ತಾಲೂಕಿನ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿತು.

ಈ ವೇಳೆ ಮಾತನಾಡಿದ ರೈತ ಮುಖಂಡರು “ಬೇಡರೆಡ್ಡಿ ಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕುಡಿಯುವ ನೀರು ಮತ್ತು ಬೀದಿ ದೀಪಗಳ ನಿರ್ವಹಣೆ ಕಾಮಗಾರಿಗಾಗಿ ವಸ್ತುಗಳನ್ನು ಸರಬರಾಜು ಮಾಡಿದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ತಳುಕಿನ ವೆಂಕಟೇಶ್ವರ ಟ್ರೇಡರ್ ಅಂಗಡಿಗೆ ಬಾಕಿ ಏಳು ಲಕ್ಷದ ನಲವತ್ತು ಸಾವಿರಗಳಷ್ಟು ಉಳಿದಿರುತ್ತದೆ. ಅದನ್ನು ಕೊಡುವಂತೆ ಬಾಕಿಗಾಗಿ ಮಾಲೀಕರ ಕುಟುಂಬವು ಮಹಿಳೆಯರು ಮಕ್ಕಳು ಸೇರಿ ಸಂಕಷ್ಟದಲ್ಲಿದ್ದು ಕೂಡಲೇ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಗ್ರಾಮ ಪಂಚಾಯಿತಿಯ ಮುಂದೆ ವಿಷದ ಬಾಟಲಿಯೊಂದಿಗೆ ಪ್ರತಿಭಟನೆ ನಡೆಸಿದರೂ, ಇವರಿಗೆ ಬಿಲ್ ಪಾವತಿ ಮಾಡಿರುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಗ್ರಾಮ ಪಂಚಾಯಿತಿಗೆ ವಸ್ತು ಸರಬರಾಜು ಮಾಡಿ ಬಿಲ್ ಪಾವತಿಯಾಗದೆ ಸಂಕಷ್ಟದಲ್ಲಿರುವ ಕುಟುಂಬದವರಿಗೆ ಗೌರವದಿಂದ ಬಾಳಲು ಸಾಧ್ಯವಾಗದೆ ವಿಷದ ಬಾಟಲಿ ಇಟ್ಟು ಪ್ರತಿಭಟನೆ ನಡೆಸುತ್ತಾ, ನಾಲ್ಕು ದಿನ ಕಳೆದರೂ ತಾಲೂಕಿನ ಯಾವುದೇ ಪಂಚಾಯತ್ ಹಿರಿಯ ಅಧಿಕಾರಿಗಳು, ತಹಶೀಲ್ದಾರರು, ಪೊಲೀಸ್ ಇಲಾಖೆಯ ಅಧಿಕಾರಿಗಳಾಗಲಿ ಭೇಟಿ ನೀಡದೆ ನಿರ್ಲಕ್ಷ ವಹಿಸಿದ್ದಾರೆ. ಸಾಮಾನ್ಯ ಜನರನ್ನು ರಕ್ಷಿಸಬೇಕಾದ ಅಧಿಕಾರಿಗಳು ಈ ರೀತಿ ನಿರ್ಲಕ್ಷ್ಮ ವಹಿಸಿರುವುದು ಅಲ್ಲದೇ ಸತ್ಯಶೋಧನಾ ಸಮಿತಿಗೆ ಒತ್ತಾಯಿಸಿ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟರೂ, ತಾಲೂಕು ಆಡಳಿತ ಸ್ಥಳಕ್ಕೆ ಭೇಟಿ ನೀಡದೇ ಬೇಡರೆಡ್ಡಿ ಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅಕ್ರಮ ಮತ್ತು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದಂತಾಗಿದೆ” ಎಂದು ಆರೋಪಿಸಿದರು.

“ಈ ಹಿನ್ನೆಲೆಯಲ್ಲಿ ಜನರ ಪ್ರಾಣ ಗೌರವಗಳನ್ನು ರಕ್ಷಿಸುವಲ್ಲಿ ವಿಫಲರಾದ ತಾಲೂಕಿನ ಆಡಳಿತದ ವಿರುದ್ಧ ರಾಜ್ಯ ರೈತ ಸಂಘ ಸಂಕಷ್ಟದಲ್ಲಿರುವ ಜನಸಾಮಾನ್ಯರ ರೈತರ ನೆರವಿಗೆ ಧಾವಿಸಲು ಸದಾ ಸಿದ್ಧವಿದೆ. ಅಕ್ರಮದ ದಾಖಲೆಗಳನ್ನು ನೀಡಿದರೂ, ಕ್ರಮ ಕೈಗೊಳ್ಳದೆ ತಾಲೂಕು ಆಡಳಿತ ನಿಷ್ಕ್ರಿಯವಾಗಿದೆ. ಈ ಬಗ್ಗೆ ಎಚ್ಚರಿಸಲು, ಕಷ್ಟದಲ್ಲಿರುವ ಜನರ ರಕ್ಷಣೆಯ ಹೊಣೆ ಆಡಳಿತ, ಅಧಿಕಾರಿಗಳದ್ದು ಎಂದು ಒತ್ತಾಯಿಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ್ದು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಒತ್ತುವರಿ ತೆರವು, ಹದ್ದುಬಸ್ತುಗೊಳಿಸಿ ಗೋಮಾಳ ಭೂಮಿ, ಸ್ಮಶಾನ ಉಳಿಸಲು ದಂಡಾಧಿಕಾರಿಗೆ ಮನವಿ
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವ ರೆಡ್ಡಿ, ಮುಖಂಡರಾದ ಮರ್ಲ್ಲಹಳ್ಳಿ ರವಿಕುಮಾರ್, ಚಂದ್ರಶೇಖರ ನಾಯ್ಕ, ಎಂ ಬಿ ಪ್ರಶಾಂತ್ ರೆಡ್ಡಿ, ತಿಪ್ಪೇಸ್ವಾಮಿ, ಸೋಮ ನಾಯ್ಕ, ಸೋಮನಾಥ ,
ಎಂ ಬಿ ತಿಪ್ಪೇಸ್ವಾಮಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.





