ಕೂಲಿ ಕೆಲಸಕ್ಕೆ ತೆರಳಿದ್ದ ರೈತ ಕಾರ್ಮಿಕನೊಬ್ಬ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದ ವೇಳೆ ಹಠಾತ್ತನೆ ಹೃದಯಾಘಾತ ಅಥವಾ ಹೃದಯ ಸ್ಥಂಭನಕ್ಕೆ ಒಳಗಾಗಿ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಂದವಾಡಿ ಗ್ರಾಮದಲ್ಲಿ ನಡೆದಿದೆ.
ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ವ್ಯಕ್ತಿಯನ್ನು 55 ವರ್ಷ ವಯಸ್ಸಿನ ಹನುಮಂತಪ್ಪ ತಂದೆ ಓಬಣ್ಣ ಎನ್ನಲಾಗಿದ್ದು, ಹಲವಾರು ವರ್ಷಗಳಿಂದ ಈತ ರೈತ ಕೂಲಿ ಕಾರ್ಮಿಕನಾಗಿದ್ದು, ರೈತರ ಜಮೀನುಗಳಲ್ಲಿ ಕೂಲಿ, ಮತ್ತು ರೈತರ ತೋಟಗಳಲ್ಲಿ ಅಡಿಕೆ, ತೆಂಗು ಸೇರಿದಂತೆ ವಿವಿಧ ಮರಗಳಿದ ಫಸಲನ್ನು ಕಟಾವು ಮಾಡುವ ಕಾರ್ಯನಿರ್ವಹಿಸುತ್ತಿದ್ದ ಎಂದು ಗ್ರಾಮದ ಮೂಲಗಳು ತಿಳಿಸಿವೆ.
ಎಂದಿನಂತೆ ಸಹಜವಾಗಿ ಇಂದು ಕೂಡ ತೋಟದ ಉತ್ಪನ್ನಗಳ ಕಟಾವಿಗೆ ಹೋಗಿ, ಮರಳಿ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಮರಳಿ ಬಂದಿದ್ದು, ಆಯಾಸಗೊಂಡು ನೀರನ್ನು ಕೇಳಿದ್ದಾನೆ. ಕುಟುಂಬದ ಸದಸ್ಯರು ಕೊಟ್ಟ ನೀರನ್ನು ಕುಡಿದು ಒಂದೆರಡು ನಿಮಿಷಗಳ ನಂತರ ಎದೆ ಹಿಡಿದುಕೊಂಡು ಅಸ್ವಸ್ಥಗೊಂಡಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಈದಿನ ಡಾಟ್ ಕಾಮ್ ನೊಂದಿಗೆ ಮಾತನಾಡಿದ ಗ್ರಾಮದ ಮುಖಂಡ ಜಿವಿ ದಿನೇಶ್, “ಮೃತ ವ್ಯಕ್ತಿ ಹನುಮಂತಪ್ಪ ರೈತರ ತೋಟಗಳಲ್ಲಿ ಪಸಲು ಕೊಯ್ಯುವ ಕೊನೆಕಾರಿಕೆ ಕೆಲಸ ಮಾಡುತ್ತಿದ್ದು, ಎಂದಿನಂತೆ ಇಂದು ಕೂಡ ಕೆಲಸಕ್ಕೆ ಹೋಗಿ ವಾಪಸ್ ಮನೆಗೆ ಬಂದ ಕೆಲವೇ ನಿಮಿಷಗಳಲ್ಲಿ ಆಯಾಸದಿಂದ ಎದೆ ಹಿಡಿದುಕೊಂಡು ಕುಸಿದು ಬಿದ್ದು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎಂದು ಕುಟುಂಬದ ಆಪ್ತರು ತಿಳಿಸಿದರು. ರಾಜ್ಯದಲ್ಲಿ ದಿನೇ ದಿನೇ ಹೃದಯಘಾತದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರ್ಕಾರ ಈ ಕೂಡಲೇ ಗಮನ ಹರಿಸಬೇಕಿದೆ. ಆರೋಗ್ಯ ಇಲಾಖೆ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಧಮ್ಮ ಕೇಂದ್ರದಲ್ಲಿ ಸಂವಿಧಾನ ಮತ್ತು ಅಲ್ಪಸಂಖ್ಯಾತ ಮಹಿಳೆಯರ ಹಕ್ಕುಗಳ ಕುರಿತು ಕಾರ್ಯಕ್ರಮ
ಇತ್ತೀಚೆಗೆ ತಾನೇ ಚಳ್ಳಕೆರೆ ತಾಲೂಕಿನ ಸೊಲ್ಲಾಪುರ ನಾಯಕನಹಟ್ಟಿ ಗ್ರಾಮದ 35ವರ್ಷ ವಯಸ್ಸಿನ ಯುವಕನೋರ್ವ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದರು.





