ಅಕ್ರಮ ಸಕ್ರಮ ಯೋಜನೆಯನ್ನು ಮತ್ತೆ ಮೊದಲಿನಂತೆ ಜಾರಿಗೊಳಿಸಬೇಕು ಹಾಗೂ ರೈತರ ಪಂಪ್ ಸೆಟ್ಗಳಿಗೆ ಮತ್ತು ವಿದ್ಯುತ್ ಮಾರ್ಗದಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲೂಕಿನ ಘಟಕಗಳ ಮುಖಂಡರು, ಕಾರ್ಯಕರ್ತರು ಹಾಗೂ ರೈತರು ಪ್ರತಿಭಟನಾ ಜಾಥಾ ಮೂಲಕ ಬೆಸ್ಕಾಂ ಕಚೇರಿ ಮುಂಭಾಗ ನೂರಾರು ರೈತರು ಬೃಹತ್ ತಮಟೆ ಚಳುವಳಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಮುಖಂಡರು “ರೈತರ ಪಂಪ್ ಸೆಟ್ ಗಳಿಗೆ ಸರಬರಾಜು ಮಾಡುತ್ತಿರುವ ಬೆಸ್ಕಾಂನ 11 ಕೆವಿ ಎಲ್ ಟಿ ಮತ್ತು ಎಚ್ಟಿ ವಿದ್ಯುತ್ ಲೈನ್ ಗಳ ಅಡಿಯಲ್ಲಿ ಮರ, ಗಿಡ-ಬಳ್ಳಿ ಬೆಳೆದು ಹತ್ತಾರು ವರ್ಷಗಳಿಂದಲೂ ಸ್ವಚ್ಛಗೊಳಿಸದೆ ಕಾಡು ಸೃಷ್ಟಿಯಾಗಿದೆ. ಇದರಿಂದಾಗಿ ವಿದ್ಯುತ್ ಸಂಪರ್ಕ ಏರುಪೇರಾಗಿ ರೈತರ ವಿದ್ಯುತ್ ಪರಿವರ್ತಕ ಮತ್ತು ಕೃಷಿ ಪಂಪ್ ಸಟ್ ಗಳು ಸುಟ್ಟು ಹಾಳಾಗುತ್ತಿವೆ. ಇದರಿಂದಾಗಿ ರೈತರ ಸಾವಿರಾರು ಕೋಟಿ ಮೌಲ್ಯದ ಬೆಳೆಗಳು ಚಳ್ಳಕೆರೆ, ಮೊಳಕಾಲ್ಮೂರು ತಾಲೂಕಿನಲ್ಲಿ ನಷ್ಟವಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಬೀದಿ ದೀಪಗಳ ಸಾವಿರಾರು ಸಂಖ್ಯೆಯಲ್ಲಿ ಹಗಲು ಹೊತ್ತಿನಲ್ಲಿ ಬೆಳಗುತ್ತಿದ್ದರೂ ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಗಮನಹರಿಸದೇ, ಕಚೇರಿಯಲ್ಲಿ ನಿದ್ರೆಗೆ ಜಾರಿದ್ದಾರೆ. ಇವರಿಂದ ರಾಷ್ಟ್ರೀಯ ಸಂಪತ್ತು ನಷ್ಟವಾಗುತ್ತಿದ್ದು, ವಿದ್ಯುತ್ ಉಳಿಸಿ ರೈತರ ಕೃಷಿಗೆ ನಿರಂತರ ವಿದ್ಯುತ್ ಪೂರೈಸಬೇಕೆಂದು ಒತ್ತಾಯಿಸಿ ರೈತರ ಬೃಹತ್ ತಮಟೆ ಚಳುವಳಿಯನ್ನು ಹಮ್ಮಿಕೊಂಡಿದ್ದೇವೆ” ಎಂದು ಆಗ್ರಹಿಸಿದರು.
“ರೈತರ ಬೇಡಿಕೆಗಳಾದ ಅಕ್ರಮ ಸಕ್ರಮ ಯೋಜನೆಯಲ್ಲಿ ರೈತರ ವಿದ್ಯುತ್ ಪಂಪ್ಸೆಟ್ಗಳಿಗೆ ಸಾಮಗ್ರಿ ಅಳವಡಿಕೆಯಲ್ಲಿ ಗೋಲ್ಮಾಲ್ ನಡೆದಿದ್ದು, ತನಿಖೆ ಮಾಡಬೇಕು. ಎಲ್ಲ ರೈತರಿಗೂ 63ಕೆವಿ ವಿದ್ಯುತ್ ಪರಿವರ್ತಕ ಅಳವಡಿಸಬೇಕು. ಎಲ್ಲ ರೈತರಿಗೂ 24 ಗಂಟೆ ನಿರಂತರ ವಿದ್ಯುತ್ ನೀಡಬೇಕು. ಹಿರೇಹಳ್ಳಿ, ಘಟಪರ್ತಿ ಗ್ರಾಮಗಳಲ್ಲಿ ಪವರ್ ಸ್ಟೇಷನ್ ನನ್ನು ಪ್ರಾರಂಭಿಸಬೇಕು. ತಳಕು ಗ್ರಾಮದಲ್ಲಿ ಎಬಿಸಿ ಕೇಬಲ್ ಕಾಮಗಾರಿ ಅಪೂರ್ಣಗೊಂಡಿದ್ದು, ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಬಂಜಗೆರೆ ಗ್ರಾಮದಲ್ಲಿ ನಿರಂತರ ಜ್ಯೋತಿ ವಿದ್ಯುತ್ ಮಾರ್ಗದ ರೈಲ್ವೇ ಅಂಡರ್ ಪಾಸ್ ಕೇಬಲ್ ಸುಟ್ಟಿದ್ದು, ಈವರೆಗೂ ಕೇಬಲ್ ಅಳವಡಿಸದೆ ನಿರ್ಲಕ್ಷ ವಹಿಸಿದ್ದು, ಶೀಘ್ರವೇ ಅದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ, ತಮಟೆ ಚಳುವಳಿ ಹಮ್ಮಿಕೊಂಡಿದ್ದೇವೆ. ಸಂಬಂಧಪಟ್ಟ ಬೆಸ್ಕಾಂ ಅಧಿಕಾರಿಗಳು ಶೀಘ್ರವೇ ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಆರಂಭಿಸಲಾಗುವುದು” ಎಂದು ಎಚ್ಚರಿಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಳೆದುಕೊಂಡ ಆಭರಣ ಕೆಲವೇ ಗಂಟೆಗಳಲ್ಲಿ ಪತ್ತೆ: ಪೊಲೀಸರ ಕರ್ತವ್ಯಕ್ಕೆ ಶ್ಲಾಘನೆ
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬೇಡ ರೆಡ್ಡಿಹಳ್ಳಿ ಬಸವ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ರೆಡ್ಡಿ, ಜಿಲ್ಲಾಧ್ಯಕ್ಷ ಮರ್ಲಹಳ್ಳಿ ರವಿಕುಮಾರ್, ತಿಪ್ಪೇಸ್ವಾಮಿ, ಟಿ ಗಂಗಾಧರ್, ಎಸ್ ಟಿ ಚಂದ್ರಣ್ಣ, ರುದ್ರಮ್ಮನಹಳ್ಳಿ ತಿಪ್ಪೇಸ್ವಾಮಿ, ಕಾಕಿ ಬೋರಯ್ಯನಹಟ್ಟಿ ತಿಪ್ಪೇಸ್ವಾಮಿ, ಸೂರಮ್ಮನಹಳ್ಳಿ ರಾಜಣ್ಣ, ಹೇಮಣ್ಣ, ಡಿ ಚಂದ್ರಶೇಖರ ನಾಯ್ಕ, ಮೊಗನಹಳ್ಳಿ ತಿಪ್ಪೇಸ್ವಾಮಿ, ನಿಂಗಣ್ಣ ಪಿಟಿ ಹಟ್ಟಿ, ಈರಣ್ಣ, ಹಿರೇಮಾನ್ ನಾಯ್ಕ, ಡಿಆರ್ ಅಶೋಕ್,
ಐನಳ್ಳಿ ವೀರೇಶ್, ಹಿರೇಹಳ್ಳಿ ನಾಗೇಂದ್ರಪ್ಪ, ಎಂ ಸುರೇಶ್, ಜವಳಿ ಶೇಖರ್, ಮಲ್ಲಸಮುದ್ರ ಚಿತ್ತಯ್ಯ, ಅಂಜನಪ್ಪ, ತಿಮ್ಮಾರೆಡ್ಡಿ, ಹೊಸೂರು ಮಧು, ತಿಮ್ಮಪ್ಪನಹಳ್ಳಿ ಮೈಲಾರಿ, ಕಪಿಲೆ ವೀರಣ್ಣ, ಗೊರಪ್ಪನವರ ಮಹೇಶ್, ವೆಂಕಟೇಶ್ ನಾಯ್ಕ್, ಶಿವಾರೆಡ್ಡಿ, ದಡ್ಡೆಯ್ಯ, ರಾಯಪುರ ಬಸವರಾಜು, ಹಿರೇಹಳ್ಳಿ ಬಸವರಾಜ್, ದಸಂಸ ಮುಖಂಡರಾದ ಹಿರೇಹಳ್ಳಿ ರಾಜಣ್ಣ, ವಕೀಲ ರುದ್ರಮನಿ, ರಾಮಸ್ವಾಮಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.





