“ಗ್ರಾಮೀಣ ಭಾಗದ ಬಹುತೇಕ ಜನರು ನರೇಗಾ ಯೋಜನೆಯಿಂದಾಗಿ ಉದ್ಯೋಗವನ್ನು ಕಂಡುಕೊಂಡಿದ್ದಾರೆ. ಹೆಸರು ಬದಲಿಸಿ ಈ ರೀತಿ ಹೊಸ ಕಾನೂನು ನೀತಿ ನಿಯಮಗಳನ್ನು ತರುವ ಮೂಲಕ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುವವರ ಸಂಖ್ಯೆಯನ್ನು ಕಡಿಮೆಗೊಳಿಸಲಾಗುತ್ತಿದೆ. ಜೊತೆಗೆ ಕೇಂದ್ರ ಸರ್ಕಾರ ಕೂಡ ಸರಿಯಾಗಿ 100 ದಿನದ ಅವಧಿಯ ಕೆಲಸ ಮತ್ತು ದುಡಿದ ಕಾರ್ಮಿಕರಿಗೆ ಕೂಲಿಯನ್ನು ಕೂಡ ಪಾವತಿಸುವಲ್ಲಿ ವಿಫಲವಾಗಿದೆ. ಕೇಂದ್ರ ಸರ್ಕಾರ ನರೇಗಾ ಬದಲಿಗೆ ಹೊಸದಾಗಿ ಮಂಡಿಸಿರುವ ವಿಜಿ ರಾಮ್ ಜಿ ಮಸೂದೆಯನ್ನು ಗ್ರಾಮೀಣ ಕೂಲಿಕಾರರ ಸಂಘಟನೆ (ಗ್ರಾಕೂಸ್) ಸಾರಾಸಗಟಾಗಿ ವಿರೋಧಿಸುತ್ತದೆ” ಎಂದು ಚಿತ್ರದುರ್ಗ ಜಿಲ್ಲಾ ಸಂಚಾಲಕ ಮಲ್ಲೇಶ್ ತಿಳಿಸಿದರು.
ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬದಲಿಗೆ ಹೊಸದಾಗಿ ಜಾರಿಗೆ ತಂದಿರುವ ವಿಜಿ ರಾಮ್ ಜಿ ಮಸೂದೆಯನ್ನು ವಿರೋಧಿಸಿ ಚಿತ್ರದುರ್ಗದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು “ಈಗ ನರೇಗಾ ಯೋಜನೆಯನ್ನು ನಿಲ್ಲಿಸಿ ಹೊಸ ಸ್ಕೀಮ್ ನಡಿಯಲ್ಲಿ ಉದ್ಯೋಗ ಖಾತ್ರಿಯನ್ನು ಹೊಸ ಹೆಸರಿನಲ್ಲಿ ತರುವ ಮೂಲಕ 125 ಮಾನವ ದಿನಗಳ ಅವಧಿಯ ಕೆಲಸವನ್ನು ನೀಡುತ್ತೇವೆ ಎಂದು ಹೊಸ ತಂತ್ರಗಾರಿಕೆಯನ್ನು ಮಾಡುತ್ತಿದ್ದಾರೆ. ಈ ಹಿಂದೆ ಯೋಜನೆಯಲ್ಲಿ ರಾಜ್ಯ ಸರ್ಕಾರದ ಪಾಲು ಶೇ. ಹತ್ತು ಇದ್ದು ಶೇ. 90 ಭಾಗ ಕೇಂದ್ರ ಸರ್ಕಾರ ನೀಡುತ್ತಿತ್ತು. ಅದನ್ನು ಬದಲಿಸಿ 40:60ರ ಅನುಪಾತದಲ್ಲಿ ಹೊಸ ಮಸೂದೆಯನ್ನು ಮಂಡಿಸಿದ್ದಾರೆ. ಇದು ರಾಜ್ಯ ಸರ್ಕಾರಗಳಿಗೆ ಹೊರೆಯಾಗಲಿದ್ದು. ಬಹುತೇಕ ಈ ಯೋಜನೆಯ ವಿಫಲತೆಗೆ ಕಾರಣವಾಗಲಿದೆ. ಮುಂದಿನ ದಿನಗಳಲ್ಲಿ ಹಳ್ಳಿಯ ಜನ ಮತ್ತೆ ಕೂಲಿ ಅನ್ನ ನೀರು, ಉದ್ಯೋಗಕ್ಕಾಗಿ ನಗರ ಪ್ರದೇಶ, ದೂರದ ಊರುಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಸಂಚಾಲಕಿ ಮಂಜಮ್ಮ ಮಾತನಾಡಿ, “ಕರೋನಾದ ಸಂಕಷ್ಟ ಕಾಲದಲ್ಲಿ ಗ್ರಾಮೀಣ ಬದುಕಿನ ಜನತೆಗೆ ದುಡಿಮೆಯನ್ನು ನೀಡಿದ್ದು, ನರೇಗಾ ಉದ್ಯೋಗ ಖಾತ್ರಿ ಯೋಜನೆ. ಹೊಸ ಯೋಜನೆಯನ್ನು ರೂಪಿಸುವ ಮೂಲಕ ಮಹಾತ್ಮ ಗಾಂಧಿ ಹೆಸರನ್ನು ಕೈಬಿಟ್ಟಿದ್ದಾರೆ. ಅಲ್ಲದೆ ಎನ್ಎಂಎಂಎಸ್, ಕೆವೈಸಿ ಇತರ ನಿಯಮಗಳನ್ನು ಹೇರಿ ತಾಂತ್ರಿಕ ಕಾರಣದಿಂದ ದಿನೇ ದಿನೇ ಕೆಲಸ ಕೊಡುವಲ್ಲಿ ವಿಳಂಬವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕಾನೂನುಗಳನ್ನು ಜನರ ಪರವಾಗಿರಿಸದೆ ಬಂಡವಾಳಶಾಹಿಗಳ, ರಾಜಕೀಯ ಮುಖಂಡರ ಪರವಾಗಿಸಿ ಸಾಮಾನ್ಯ ಜನರನ್ನು ವಂಚಿಸಲಾಗುತ್ತಿದೆ. ಹೆಸರನ್ನು ಬದಲಿಸಲು ಅಧಿಕಾರ ನೀಡಿದವರಾರು, ಹಾಗೂ ಈ ಹೆಸರಲ್ಲಿ ಏನು ನ್ಯೂನತೆ ಇದೆ ಎಂದು ಸಾರ್ವಜನಿಕರಿಗೆ ತಿಳಿಸಬೇಕು” ಎಂದು ಆಗ್ರಹಿಸಿದರು.
ಪರಶುರಾಂಪುರ ಸಂಚಾಲಕಿ ಸಂಧ್ಯಾ ಮಾತನಾಡಿ, “ಈ ಮುಂಚೆ 50 ದಿನಗಳ ಕೆಲಸವನ್ನು ಸಹಾ ಒದಗಿಸದ ಸರ್ಕಾರ ಇನ್ನು ಮುಂದೆ 125 ದಿನಗಳ ಕೆಲಸವನ್ನು ನೀಡಲಿದ್ದೇವೆ ಎಂದು ಸುಳ್ಳು ಭರವಸೆ ನೀಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಭಾರತ ಸಂವಿಧಾನವು ಬುದ್ದ ಬಸವ ಅಂಬೇಡ್ಕರರ ಪರಿವರ್ತನೆ ಆಶಯದ ಫಲ
ಚಿತ್ರದುರ್ಗ ತಾಲೂಕು ಸಂಚಾಲಕಿ ತೇಜೇಶ್ವರಿ ಮಾತನಾಡಿ, “ಗ್ರಾಮೀಣ ಜನತೆಯು ತಮಗೆ ಕೆಲಸ ಬೇಕಾದಾಗ ಗ್ರಾಮ ಪಂಚಾಯತಿಗಳಿಗೆ ಹೋಗಿ ಕೆಲಸ ಬೇಕೆಂದು ಅರ್ಜಿ ಸಲ್ಲಿಸಿ ಒತ್ತಾಯಿಸಿ ಕೆಲಸ ಪಡೆಯುತ್ತಿದ್ದರು. ಆದರೆ ಹೊಸ ಕಾಯ್ದೆಯಲ್ಲಿ ಗ್ರಾಮ ಪಂಚಾಯಿತಿಯವರೇ ಸ್ವತಹ ಕೆಲಸವಿದ್ದಾಗ ಬಂದು ತಿಳಿಸುವ ಯೋಜನೆ ಇದೆ. ಇದರಿಂದಾಗಿ ಜನಗಳಿಗೆ ಅವಶ್ಯಕತೆ ಇರುವಾಗ ಉದ್ಯೋಗ ಖಾತ್ರಿಯ ಲಾಭ ಮತ್ತು ಕೆಲಸ ಸಿಗುವುದಿಲ್ಲ. ಗ್ರಾಮ ಸಭೆಗಳಲ್ಲಿ ಉದ್ಯೋಗಕ್ಕೆ ಮತ್ತು ಯೋಜನೆಗಳಿಗೆ ನಾವು ಒತ್ತಾಯಿಸುತ್ತಿದ್ದೆವು. ಈ ಮುಂಚಿನ ನರೇಗಾ ಕಾಯ್ದೆಯನ್ನು ಕೂಡ ಮತ್ತೆ ಜಾರಿಗೊಳಿಸಬೇಕು” ಎಂದು ಒತ್ತಾಯಿಸಿದರು.





