“ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಾಗಿನೆಲೆ ಗುರುಪೀಠದ ಕೆಲ್ಲೋಡು ಶಾಖಾಮಠದಲ್ಲಿ ಕನಕ ಜಯಂತಿ ಅಂಗವಾಗಿ ಎಂಟನೇ ವರ್ಷದ ಲಕ್ಷ ದೀಪೋತ್ಸವ, ರಾಜ್ಯಮಟ್ಟದ ಭಾರಿ ಟಗರಿನ ಕಾಳಗ, ಕೃಷಿ ಮೇಳ ಮತ್ತು ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯ ಕನಕ ಕಪ್ -2025 ಹಮ್ಮಿಕೊಳ್ಳಲಾಗಿದೆ” ಎಂದು ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಶ್ರೀ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹಳ್ಳಿಗಳಲ್ಲಿ ಪ್ರವಾಸ ಕೈಗೊಂಡಿರುವ ವೇಳೆ ಮಾಹಿತಿ ನೀಡಿರುವ ಅವರು “ನವಂಬರ್ 5 ರಿಂದ 8ರವರೆಗೆ ನಾಲ್ಕು ದಿನಗಳ ಕಾಲ ಶ್ರೀ ಮಠದ ಆವರಣದಲ್ಲಿ ಲಕ್ಷ ದೀಪೋತ್ಸವ ಟಗರಿನ ಕಾಳಗ ಕೃಷಿ ಮೇಳ ಮತ್ತು ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಕನಕ ಕಪ್ ಹೆಸರಿನಲ್ಲಿ ನಡೆಸಲಾಗುವುದು” ಎಂದು ತಿಳಿಸಿದ್ದಾರೆ.
“ಇದರ ಅಂಗವಾಗಿ ಬೆಂಗಳೂರು ವಿಭಾಗಮಟ್ಟದ ಚಿತ್ರದುರ್ಗ, ಕೋಲಾರ, ತುಮಕೂರು, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗಳ ಬಹುತೇಕ ನೂರಾರು ಹಳ್ಳಿಗಳಲ್ಲಿ ಪ್ರವಾಸ ಕೈಗೊಂಡು ಭಕ್ತರಲ್ಲಿ ಲಕ್ಷ ದೀಪೋತ್ಸವ ಕನಕ ಜಯಂತಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕವಾಗಿ ಕನಕದಾಸರ ಜಾತ್ಯತೀತ ನಿಲುವುಗಳನ್ನು ವೈಚಾರಿಕ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಸಂಘಟಿತರಾಗಲು ಕರೆ ನೀಡಲಾಗುತ್ತಿದೆ” ಎಂದು ತಿಳಿಸಿದರು.
“ಮುಂಬರುವ ದಿನಗಳಲ್ಲಿ ಏಷ್ಯಾ ಖಂಡದಲ್ಲಿ ಅತಿ ಎತ್ತರದ 36 ಅಡಿ ಏಕಶಿಲೆ ಕನಕ ಪ್ರತಿಬಿಂಬ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ರಾಜ್ಯದ ಬಹುತೇಕ ಸಚಿವರು, ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಪಾಲ್ಗೊಳ್ಳುವರು” ಎಂದು ಶ್ರೀಗಳು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ನಾಯಕನಹಟ್ಟಿ ವೇದಶಾಲೆ ಮಕ್ಕಳ ಮೇಲೆ ಹಲ್ಲೆ: ಶಿಕ್ಷಕನ ಬಂಧನ, ಅಮಾನತು
ಶಾಖಾಮಠದ ಕನಕ ಜಯಂತಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಅಂಗವಾಗಿ ಕಳೆದ ಅಕ್ಟೋಬರ್ ಎಂಟರಿಂದ ಶ್ರೀಗಳು ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಪ್ರವಾಸ ಕೈಗೊಂಡಿದ್ದು, ಬೆಳಗ್ಗೆ ಚನ್ನಗಿರಿ ತಾಲೂಕಿನ ಹಳ್ಳಿಗಳು, ದಾವಣಗೆರೆ ತಾಲೂಕಿನ ಅಣಬೇರು, ಬಾಡ, ಮಳಲ್ಕೆರೆ ಲೋಕಿಕೆರೆ, ಮತ್ತಿ, ಹೂವಿನ ಮಡು, ತ್ಯಾವಣಗಿ, ಬೆಳಗೆರೆ ಸಂಘಹಳ್ಳಿ, ಕುರುಬರಹಳ್ಳಿ, ಕುಂಬಳೂರು ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ಪ್ರವಾಸ ಕೈಗೊಂಡಿದ್ದರು.





