ಜಮೀನಿನಲ್ಲಿ ಮುಸುಕಿನ ಜೋಳಕ್ಕೆ ಗೊಬ್ಬರ ಹಾಕುತ್ತಿರುವ ಸಮಯ ಮಹಿಳೆ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಗಿಲಿಕೇನಹಳ್ಳಿಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ತನುಜಾ ಎನ್ನುವವರು ದಾಳಿಗೊಳಗಾದ ಮಹಿಳೆಯಾಗಿದ್ದು, ಚಿರತೆ ದಾಳಿಗೆ ಮಹಿಳೆಗೆ ಹೆಚ್ಚಿನ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗದ ಆಸ್ಪತ್ರೆಗೆ ಕಳುಹಿಸಲಾಗಿದೆ.
ಭಾನುವಾರ ಮುಂಜಾನೆ ಎಂದಿನಂತೆ ಹೊಲಕ್ಕೆ ಹೋಗಿದ್ದ ತನುಜಾ ಗಂಡ ತಿಪ್ಪೇಸ್ವಾಮಿ ಹಾಗೂ ಇತರೆ 10 ಜನರು ಮುಸುಕಿನ ಜೋಳಕ್ಕೆ ಗೊಬ್ಬರ ಹಾಕುತ್ತಿರುವಾಗ ತನುಜಾ ಮೇಲೆ ಇದ್ದಕ್ಕಿದ್ದಂತೆ ಒಂದು ಚಿರತೆ ಹಾಗೂ ಎರಡು ಮರಿಗಳು ದಾಳಿ ನಡೆಸಿವೆ. ಮಹಿಳೆ ಕೂಗಾಟ ಕೇಳಿ ಪಕ್ಕದಲ್ಲಿದ್ದವರು ಸಹಾಯಕ್ಕೆ ಓಡಿಬಂದ ಹಿನ್ನೆಲೆಯಲ್ಲಿ ಚಿರತೆ ಓಡಿಹೋಗಿವೆ. ಚಿರತೆ ದಾಳಿಗೊಳಗಾದ ಮಹಿಳೆ ತನುಜ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಚಿರತೆ ದಾಳಿ ನಡೆಸಿದ ಹಿನ್ನಲೆಯಲ್ಲಿ ತಲೆ, ಮೈ, ಕೈ, ಮುಖ ಸಂಪೂರ್ಣವಾಗಿ ರಕ್ತ ಸುರಿದು ಗಾಯಗೊಂಡಿದ್ದು ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗಿದೆ.

ಅರಣ್ಯ ಇಲಾಖೆ ವಿರುದ್ಧ ಸ್ಥಳೀಯ ಆಕ್ರೋಶ;
ಹೊಳಲ್ಕೆರೆ ತಾಲ್ಲೂಕು ಗಿಲಿಕೇನಹಳ್ಳಿ ಸೇರಿ ಸುತ್ತಮುತ್ತಲ ಗ್ರಾಮದಲ್ಲಿ ಚಿರತೆಗಳ ಕಾಟ ಹೆಚ್ಚಾಗಿದೆ ಎಂದು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿ ಸತೀಶ್ ಇವರಿಗೆ ಸಾಕಷ್ಟು ಬಾರಿ ಮಾಹಿತಿ ನೀಡಿ ಚಿರತೆಗಳನ್ನು ನಿಯಂತ್ರಿಸುವಂತೆ ಹಾಗೂ ಜನ ಹಾಗೂ ಜಾನುವಾರುಗಳ ಮೇಲೆ ದಾಳಿ ನಡೆಸದಂತೆ ಎಚ್ಚರಿಕೆಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಸಾಕಷ್ಟು ಮಾಹಿತಿ ನೀಡಿದರೂ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಚಿರತೆಗಳ ಹಾವಳಿ ಹೆಚ್ಚಾಗಿದೆ. ಚಿರತೆ ಹಾಗೂ ಕರಡಿಗಳು ಜೀವಹಾನಿ ಮಾಡುವ ಮೊದಲೇ ನಿಯಂತ್ರಣ ಮಾಡಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ದಾಳಿಗೆ ತುತ್ತಾಗಿರುವ ಮಹಿಳೆಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕುರಿಗಾಹಿಯಿಂದ ಧ್ವಜಾರೋಹಣ; ಚಿತ್ರದುರ್ಗದಲ್ಲಿ ವಿಶೇಷವಾಗಿ ಸ್ವಾತಂತ್ರ್ಯ ದಿನಾಚರಣೆ
ಹೊಳಲ್ಕೆರೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರು ಚೇತನ್, ಸೇರಿದಂತೆ ಇತರರು ಹೊಳಲ್ಕೆರೆ ತಾಲೂಕ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕಳುಹಿಸಿಕೊಡಲಾಗಿದೆ.





