“ಆಶುಕವನಗಳಲ್ಲಿ ತತ್ ಕ್ಷಣಕ್ಕೆ ಹೊಳೆದದ್ದನ್ನು ಅಭಿವ್ಯಕ್ತಿಸುವ ಕಲೆ ವಿರಳವಾಗಿರುತ್ತವೆ. ಅಂತಹ ವಿರಳ ಪ್ರತಿಭೆಯು ಕವಿ ತಿಪ್ಪೇಸ್ವಾಮಿ ಬಿ.ಜಿ.ಯವರಾಗಿದ್ದು ಅವರ ಕಿರುಗವನಗಳು ಗಹನವಾದ ವಿಚಾರಗಳನ್ನು ಹೇಳುತ್ತಿವೆ. ಪ್ರೀತಿ ಪ್ರೇಮ, ವಿಜ್ಞಾನ, ಪ್ರಾಣಿ ಪಕ್ಷಿ, ಸಂಭ್ರಮ, ಯುಗಾದಿ, ಹೊಸವರ್ಷ, ಪಠ್ಯಪುಸ್ತಕ, ಶಾಲಾಕೊಠಡಿ, ಬಾಲ್ಯ, ಯೌವ್ವನ, ಕಟ್ಟಡ, ಸಿನಿಮಾ ಮುಂತಾದವುಗಳು ಕುರಿತು ಬರೆದಿದ್ದಾರೆ. ಸಾಹಿತ್ಯವು ನೈತಿಕ ಬದುಕಿನ ಸಾರ್ಥಕತೆಗೆ ಪೂರಕವಾಗಿರುತ್ತದೆ” ಎಂದು ವಿಮರ್ಶಕರು, ಪುಸ್ತಕ ಪಾಧಿಕಾರದ ಚಿತ್ರದುರ್ಗ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಹಾಗೂ ಉಪನ್ಯಾಸಕರು ಆದ ಡಾ.ಎಂ.ವೇದಾಂತ ಏಳಂಜಿ ಅವರು ಅಭಿಪ್ರಾಯಪಟ್ಟರು.
ಲಿಟ್ಲಲ್ ಹೇವನ್ ಸಭಾಂಗಣದಲ್ಲಿ ನಡೆದ ಆಶುಕವನ ಸಂಕಲನ ಪತಂಗ ಕೃತಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಹಲವು ಕವನಗಳನ್ನು ಗಂಭೀರವಾಗಿಯೂ ಕೆಲವೂ ಹಾಸ್ಯ ಭರಿತವಾಗಿ ವಿಡಂಬನಾತ್ಮಕವಾಗಿ ಬರೆದಿದ್ದು, ಕಿರುಗವನಗಳಲ್ಲಿ ಮೌಲಿಕ ಅರ್ಥವನ್ನು ಕಲ್ಪಿಸಿದ್ದಾರೆ. ಅನ್ಯಜ್ಞಾನ ಶಿಸ್ತಿನಲ್ಲಿ ಕಲಿತ ಯಾವುದೇ ಶಿಕ್ಷಕರು ಕನ್ನಡದಲ್ಲಿ ಕೆಲಸ ಮಾಡುವುದರಿಂದ ಅನ್ನದ ಭಾಷೆಯಾಗಿಸುವುದಕ್ಕೆ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಕವಿ ತಿಪ್ಪೇಸ್ವಾಮಿ ಅವರ ಕಾರ್ಯ ಶ್ಲಾಘನೀಯ” ಎಂದರು.
“ಬಹುತೇಕ ಪ್ರಾದೇಶಿಕತೆಗೆ ಒತ್ತುಕೊಟ್ಟು ಬರೆದಿರುವ ಲೇಖಕರು ಕನ್ನಡಕ್ಕೆ ಹೊಸ ಭರವಸೆಯಾಗಿದ್ದು, ಮತ್ತಷ್ಟು ಎಚ್ಚರದಿಂದ ಕೆಲಸ ಮಾಡಬೇಕು. ವಿಜ್ಞಾನ ಉತ್ತರ ಸಿರಿ ಪುಸ್ತಕವು ವಿದ್ಯಾರ್ಥಿಗಳಿಗೆ ಮತ್ತು ಹಿರಿಯರು ಉಪಯುಕ್ತವಾಗಿದ್ದು ವಿಜ್ಞಾನವನ್ನು ಸರಳವಾಗಿ ಅರ್ಥೈಸುವಂತೆ ರೂಪಿಸಿದ್ದಾರೆ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗಾಂಧೀವಾದಿ ಡಾ.ಎಚ್.ಕೆ.ಎಸ್.ಸ್ವಾಮಿ ಚರಕದ ಮಹತ್ವ ಹೇಳುತ್ತ “ಕನ್ನಡ ಉಳುವಿಕೆಗಾಗಿ ವಿಜ್ಞಾನದ ಶಿಕ್ಷಕರು ಕೆಲಸ ಮಾಡುವುದು ಜೀವಪೋಷಕವಾದದ್ದು. ಆಧುನಿಕ ಕಾಲದಲ್ಲಿ ಬೆಲೆ ಏರಿಕೆಗಳ ನಡುವೆ ಸಹಜ ಜೀವನ ಸಾಗಿಸಬಹುದು” ಎಂದು ವಿವರಿಸಿದರು.
ಪತಂಗ ಕೃತಿಕರ್ತೃ ತಿಪ್ಪೇಸ್ವಾಮಿ ಬಿ.ಜಿ. ಮಾತನಾಡಿ “ಮನಸ್ಸಿದ್ದರೆ ಮಾರ್ಗ ಎಂಬುದು ಜೀವನದ ಧ್ಯೇಯ ವಾಕ್ಯವಾಗಿದ್ದು, ಅದರಿಂದಲೇ ಆಶುಕವನ ಪುಸ್ತಕ ವಿಜ್ಞಾನ ಉತ್ತರ ಸಿರಿ ಕೃತಿ ರಚನೆಗೆ ಸಾಧ್ಯವಾಯಿತು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಲ್ಯಾಣಶೆಟ್ಟಿಯವರು ಎರಡು ಕೃತಿಗಳನ್ನು ಲೋಕಾರ್ಪಣೆಗೊಳಿಸಿ “ಲೇಖಕರ ಕವನಗಳು ಅರ್ಥಪೂರ್ಣವಾಗಿದ್ದು ಕನ್ನಡ ಭಾಷಾ ಬೆಳವಣಿಗೆಗೆ ಇಂತಹ ಸಾಹಿತಿಗಳು ಮತ್ತಷ್ಟು ಹೆಚ್ಚಿನ ಕೊಡುಗೆ ನೀಡುವ ಮೂಲಕ ಕನ್ನಡವನ್ನು ಕಟ್ಟಬೇಕು. ಕಿರುಗವನಗಳು ಅನೇಕ ವಿಷಯಗಳನ್ನು ತಿಳಿಸುವ ಜೊತೆಗೆ ನೈತಿಕ ಜೀವನ ನಡೆಸುವಲ್ಲಿ ಕವನಗಳ ಕೊಡುಗೆ ಅಪಾರ” ಎಂದು ವಿಶ್ಲೇಷಿಸಿದರು.
ಈ ಸುದ್ದಿ ಓದಿದ್ದೀರಾ ? ದಾವಣಗೆರೆ | ಮಹಿಳೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ವಿರೋಧಿಸಿ ಎಐಎಂಎಸ್ಎಸ್ ಸಹಿ ಸಂಗ್ರಹ
ಕಾರ್ಯಕ್ರಮದಲ್ಲಿ ಉಪನ್ಯಾಸಕ ಮಂಜುನಾಥ ವಿ.ಎಸ್. ಮಹಾಂತೇಶ ಎನ್.ಟಿ., ರಮೇಶ್ ಅಯ್ಯನಹಳ್ಳಿ. ಶಿಕ್ಷಣ ಸಂಯೋಜಕ ಮಾರುತಿಭಂಡಾರಿ, ಶಿವಕುಮಾರ್, ತಿಪ್ಪೇಸ್ವಾಮಿ ಆರ್. ಗಂಗಾಧರಪ್ಪ ಬಿ, ಮಂಜುಳಮ್ಮ ಪಿ ಎಂ, ಕೃಷ್ಣಪ್ಪ, ತಿಪ್ಪಮ್ಮ, ರೇಖಾ ಕೆ, ವಿಶೃತ್ ಕುಮಾರ ಜಿ ಟಿ, ಪ್ರವೀಣ ಬೆಳೆಗೆರೆ ಹಾಗೂ ಇತರರು ಹಾಜರಿದ್ದರು.





