“ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ, ವ್ಯಾಪಕವಾಗಿ ಹಣವನ್ನು ದೋಚಲಾಗುತ್ತಿದೆ ಎನ್ನುವ ಕಾರಣ ನೀಡಿ ಯೋಜನೆಯ ಹೆಸರು ಮತ್ತು ಸ್ವರೂಪವನ್ನು ಬದಲಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಕೇಂದ್ರ ಸರ್ಕಾರದಿಂದ ಅನುದಾನ ಪಡೆಯುವಲ್ಲಿ, ಯೋಜನೆಗಳಲ್ಲಿ ನಿರಂತರವಾಗಿ ಅನ್ಯಾಯಕ್ಕೊಳಗಾಗುತ್ತಿರುವ ಕರ್ನಾಟಕಕ್ಕೆ ಈ ತಿದ್ದುಪಡಿಯು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮತ್ತಷ್ಟು ಹಿನ್ನೆಡೆಯನ್ನು ಮಾಡುತ್ತದೆ. ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ತಿದ್ದುಪಡಿ ಮಾಡಿ ವಿಜಿ ರಾಮ್ ಜಿ ಮಸೂದೆ ಜಾರಿಗೆ ತರುವುದನ್ನು ತಕ್ಷಣವೇ ನಿಲ್ಲಿಸಬೇಕು” ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆ ಆರ್ ಎಸ್) ಪಕ್ಷದ ಚಿತ್ರದುರ್ಗ ಘಟಕ ಆಗ್ರಹಿಸಿದೆ.
ಚಿತ್ರದುರ್ಗದಲ್ಲಿ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಮಹೇಶ್ ನಗರಂಗೆರೆ, “ಸಂಪೂರ್ಣ ಕೇಂದ್ರ ಪ್ರಾಯೋಜಿತ ಯೋಜನೆಗೆ ಕೇಂದ್ರ ಸರ್ಕಾರ ತನ್ನ ಅನುದಾನ ಕಡಿತ ಮಾಡಿ ರಾಜ್ಯಗಳ ಮೇಲೆ ಹೊರೆ ಹಾಕುವುದರಿಂದ ಭ್ರಷ್ಟಾಚಾರ ಕಡಿಮೆಯಾಗುವುದಿಲ್ಲ. ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಇದರಲ್ಲಿ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳೂ ಸೇರಿ ವಿರೋಧ ಪಕ್ಷಗಳ ಭಾಗವಹಿಸುವಿಕೆ ಬಹಿರಂಗ ಸತ್ಯವಾಗಿದೆ” ಎಂದು ಆರೋಪಿಸಿದರು.

“ದೇಶದ ಬಹುತೇಕ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವುದು ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು, ಅಂದರೆ, ತನ್ನದೇ ಪಕ್ಷದವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದಿದ್ದರೂ, ಭ್ರಷ್ಟಾಚಾರ ತನಿಖೆಗೆ ತನಿಖಾ ಸಂಸ್ಥೆಗಳನ್ನು ಬಳಸುವ ಬದಲು, ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಬಳಸಲಾಗುತ್ತಿದೆ” ಎಂದು ಅವರು ಟೀಕಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ನರೇಗಾ ಬದಲಿಗೆ ವಿಜಿ ರಾಮ್ ಜಿ ಮಸೂದೆಗೆ ಗ್ರಾಮಿಣ ಕೂಲಿಕಾರರ ಸಂಘಟನೆ ವಿರೋಧ
“ಉದ್ಯೋಗ ಖಾತ್ರಿ ಮತ್ತು ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ನೀಡಬೇಕಾದ ತನ್ನ ಪಾಲಿನ ಅನುದಾನದ ಬಿಡುಗಡೆಯಲ್ಲಿ ನಿರಂತರವಾಗಿ ವಿಳಂಬ ಮಾಡಿ, ರಾಜ್ಯಗಳನ್ನು ಆರ್ಥಿಕ ಸಂಕಷ್ಟಕ್ಕೆ ದೂಡಲಾಗುತ್ತಿದೆ. ಯೋಜನೆಗಳಲ್ಲಿ ತನ್ನ ಪಾಲು ಸಣ್ಣದಿದ್ದರೂ ಕೂಡಾ ಕೂಡ ಹೆಸರು ಮಾತ್ರ ಒಕ್ಕೂಟ ಸರ್ಕಾರದ್ದೇ ಇರಬೇಕು ಮತ್ತು ಆ ಮೂಲಕ ಪ್ರಚಾರ ಪಡೆದುಕೊಳ್ಳುವ ಕುತಂತ್ರವೂ ಇದರಲ್ಲಿ ಮತ್ತೊಮ್ಮೆ ಕಂಡುಬರುತ್ತಿದೆ. , ಈ ಯೋಜನೆಯಲ್ಲಿ ನಡೆಯುತ್ತಿರುವ ಮಹಾ ಭ್ರಷ್ಟಾರವನ್ನು ತಡೆಯಲು ವ್ಯಾಪಕ ಅವಕಾಶಗಳಿದ್ದು, ಅವನ್ನು ಬಳಸಿಕೊಂಡು ಸಾರ್ವಜನಿಕ ಹಣ ಸಧ್ಬಳಕೆಯಾಗುವ ನಿಟ್ಟಿನಲ್ಲಿ ಕ್ರಮ ವಹಿಸಬೇಕೆಂದು ಕೂಡ ಆಗ್ರಹಿಸುತ್ತದೆ. ಯೋಜನೆ ತಿದ್ದುಪಡಿ ಮಾಡಿ ‘ವಿಜಿ ರಾಮ್ ಜಿ’ ಮಸೂದೆ ಜಾರಿಗೆ ತರುವುದನ್ನು ತಕ್ಷಣವೇ ನಿಲ್ಲಿಸಬೇಕು, ಭ್ರಷ್ಟಾಚಾರ ತಡೆಗೆ ಕಠಿಣ ಕ್ರಮ ಕೈಗೊಂಡು ಸಾರ್ವಜನಿಕ ಹಣದ ಸದ್ಭಳಕೆಗೆ ಮುಂದಾಗಬೇಕು” ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆಗ್ರಹಿಸಿದೆ.





