ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಸಾಮಾಜಿಕ ಪರಿವರ್ತನಾ ಚಳುವಳಿಯ ಮಹಾಚೇತನ ಸಾವಿತ್ರಿ ಭಾಪುಲೆ ಜನ್ಮದಿನಾಚರಣೆಯನ್ನು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಸಮಾಜ ಪರಿವರ್ತನಾ ವೇದಿಕೆ ಆಯೋಜಿಸಿತ್ತು. ಹಾಗೂ ಇದೇ ವೇಳೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮವಾದ ಸಾಧನೆಗೈದ ಮಹಿಳಾ ಶಿಕ್ಷಕಿಯರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಮಾಡಲಾಗಿತ್ತು.
ಸಾವಿತ್ರಿ ಭಾಪುಲೆ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಡಯಟ್ ಕಾಲೇಜಿನ ಉಪನ್ಯಾಸಕರಾದ ರಾಮಚಂದ್ರಪ್ಪ ಮಾತನಾಡಿ “ಮಾತೆ ಸಾವಿತ್ರಿ ಭಾಪುಲೆಯವರು ಆಧುನಿಕ ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ. ಅವರು ಹಚ್ಚಿದ ಶಿಕ್ಷಣವೆಂಬ ಜ್ಞಾನದ ಬೆಳಕು. ಇಂದು ಕೋಟ್ಯಂತರ ಹೆಣ್ಣುಮಕ್ಕಳ ಬದುಕನ್ನು ಬೆಳಗುತ್ತಿರುವ ದೀಪವಾಗಿದೆ. ಭಾರತದ ಪ್ರತಿಹೆಣ್ಣು ಮಕ್ಕಳು ಸಾವಿತ್ರಿಯವರ ತ್ಯಾಗದ ಋಣದಲ್ಲಿ ಬದುಕುತ್ತಿದ್ದಾರೆ. ಮಾನ, ಸನ್ಮಾನ, ಘನತೆ, ಗೌರವಗಳು ಪ್ರತಿ ಹೆಣ್ಣುಮಕ್ಕಳಿಗೆ ಸಿಗಲು ಅವರ ತ್ಯಾಗದ ಹೋರಾಟವೇ ಕಾರಣ” ಎಂದು ಅಭಿಪ್ರಾಯಪಟ್ಟರು.

“ಅಂದಿನ ಕಾಲಘಟ್ಟದಲ್ಲಿ ಹೆಣ್ಣನ್ನು ಕೇವಲ ಅಡುಗೆ ಮನೆಗೆ ಸೀಮಿತ ಮಾಡಿದ್ದ ಸಮಾಜ ತುಂಬಾ ಕೇವಲವಾಗಿ ನೋಡುತ್ತಿತ್ತು.. ಅಂತಹ ಸಂದರ್ಭದಲ್ಲಿ ಹೆಣ್ಣು ಅಬಲೆಯಲ್ಲ, ಅವಳು ಸಬಲೆ, ಹೆಣ್ಣಿನ ಅಭಿರುದ್ದಿಯೇ ದೇಶದ ಅಭಿರುದ್ದಿ ಎಂದು ಹೆಣ್ಣಿನ ಶಿಕ್ಷಣಕ್ಕೆ ಮಹತ್ವ ಕೊಟ್ಟರು. ಮೊಟ್ಟಮೊದಲು ಮಹಿಳೆಯರಿಗಾಗಿ ಪ್ರತ್ಯೇಕ ಶಾಲೆಗಳನ್ನು ಸ್ಥಾಪಿಸಿದರು. ತನ್ನನ್ನು ನಿಂದಿಸಿದವರಿಗೆ, ಕಲ್ಲೆಸೆದವರಿಗೆ, ಮರಳಿ ಅಕ್ಷರದ ಹೂವನ್ನು ಎಸೆದು ಲೋಕದೊಳಗೆ ಜ್ಞಾನದ ಘಮಲನ್ನು ಹೆಚ್ಚಿಸಿದ ಕೀರ್ತಿ ಭಾಪುಲೆಯವರಿಗೆ ಸಲ್ಲುತ್ತದೆ” ಎಂದು ತಿಳಿಸಿದರು.

“ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ,”ಹೆಣ್ಣು ಸಮಾಜದ ಕಣ್ಣು, ತೊಟ್ಟಿಲನ್ನು ತೂಗುವ ಕೈಗಳು ದೇಶದ ಆಡಳಿತವನ್ನು ತೂಗಬೇಕು, ಎನ್ನುವ ಮಹತ್ವದ ಉದ್ದೇಶವನ್ನು ಹೊಂದಿದ್ದರು.. ಅದರಂತೆ ಹೆಣ್ಣುಮಕ್ಕಳ ಸರ್ವೋತೋಮುಖ ಅಭಿವೃದ್ದಿಗೆ ಶ್ರಮಿಸಿದರು” ಎಂದು ಸ್ಮರಿಸಿದರು.
“1882 ಬ್ರಿಟಿಷ್ ಹಂಟರ್ ಆಯೋಗದ ಮುಂದೆ ಹೆಣ್ಣುಮಕ್ಕಳಿಗೆ ಪ್ರತ್ಯೇಕ ವಸತಿ ಶಾಲೆಗಳು ಸ್ಥಾಪಿಸಬೇಕು, ಪ್ರತ್ಯೇಕ ಹೆಣ್ಣುಮಕ್ಕಳ ಶಾಲೆಗಳು, ಹಾಗೂ ರಾತ್ರಿ ಶಾಲೆಗಳು ಹಾಗೂ ವಿದ್ಯಾರ್ಥಿ ವೇತನ ನೀಡಬೇಕು. ಬಾಲ್ಯವಿವಾಹ ನಿಷೇದಿಸಬೇಕು. ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು. ಶಿಕ್ಷಣವನ್ನು ಸಾರ್ವತ್ರೀಕರಣ ಗೊಳಿಸಬೇಕು ಎಂದು ಸಾವಿತ್ರಿ ಭಾಪುಲೆ ಒತ್ತಾಯಿಸಿದರು” ಎಂದು ತಿಳಿಸಿದರು.

“ಅದರಂತೆ ಸುಮಾರು 48 ಕ್ಕೂ ಹೆಚ್ಚು ಶಾಲೆಗಳನ್ನು ಸ್ಥಾಪಿಸಿ ಮಹಿಳಾ ಹಕ್ಕುಗಳ ಬಗ್ಗೆ ಹೋರಾಡಿದ ಧೀಮಂತ ಮಹಿಳಾ ಸುಧಾರಕಿಯಾಗಿದ್ದಾರೆ. ಆದ್ದರಿಂದ ಪ್ರತಿ ಶಿಕ್ಷಕರು ಸಾವಿತ್ರಿ ಭಾಪುಲೆಯವರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು” ಎಂದು ಎಚ್ಚರಿಸಿದರು.

ಸಾಹಿತಿ ಮೋದುರು ತೇಜರವರು ಮಾತನಾಡಿ “ಸಾವಿತ್ರಿ ಭಾಪುಲೆಯವರು ಮಹಿಳಾ ಶಿಕ್ಷಣ ಲೋಕದ ಮಹತ್ವದ ಕೊಂಡಿಯಾಗಿದ್ದಾರೆ. ಇವರ ಉದಾತ್ತ ಚಿಂತನೆಗಳ ಫಲವೇ ಈ ದೇಶದ ಸಂವಿಧಾನವಾಗಿದೆ. ಮಹಿಳೆಯರು ಹೆಚ್ಚು ಹೆಚ್ಚು ಸಾವತ್ರಿಯವರ ಬಗ್ಗೆ ಅಧ್ಯಯನ ಶೀಲರಾಗಬೇಕು. ಅವರ ಚಿಂತನೆಯಲ್ಲಿ ಸಾಗಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕೆಆರ್ ಎಸ್ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ: ಕಾನೂನು ಕ್ರಮಕ್ಕೆ ಒತ್ತಾಯ
ಈ ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕರಾದ ಎಚ್. ರಂಗಪ್ಪ, ಆಯೋಜಕರಾದ ಎಸ್. ಪರಮೇಶ್, ಶಿಕ್ಷಣ ಇಲಾಖೆಯ ಮಂಜುನಾಥ್, ಸಮಾಜ ಪರಿವರ್ತನಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ನಾಗಸಮುದ್ರ ಮರಿಸ್ವಾಮಿ, ಗೌರವ ಅಧ್ಯಕ್ಷ ಭಂಗಿ ನಾಗರಾಜ್, ಶಿವಣ್ಣ ತಿಮ್ಮಲಾಪುರ, ತಾಲ್ಲೂಕು ಅಧ್ಯಕ್ಷ ವಡೆರಹಳ್ಳಿ ಬಸವರಾಜ್, ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ಯರಿಸ್ವಾಮಿ,ಸಾಹಿತಿ ಲೋಕೇಶ್ ಪಲ್ಲವಿ, ಮಾನವ ಬಂಧುತ್ವ ವೇದಿಕೆಯ ಅಧ್ಯಕ್ಷ ತಿಪ್ಪೇಶ್ ಪ್ರಾಥಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷೆ ಮಮತ,ಮಹಿಳಾ, ಮತ್ತು ಮಕ್ಕಳ ಇಲಾಖೆಯ ಲೀಲಾಭಾಯಿ,ಪ್ರಶಸ್ತಿಗೆ ಆಯ್ಕೆಯಾದ ಮಹಿಳಾ ಶಿಕ್ಷಕಿಯರು ಭಾಗಿಯಾಗಿದ್ದರು





