“ಕಲಾವಿದರ ವೇತನ ಸೌಲಭ್ಯ ಭರಿಸಲು ಸಾಣೇಹಳ್ಳಿಯ ಶಿವಸಂಚಾರಕ್ಕೆ ಶಾಶ್ವತನಿಧಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡುವಂತೆ
ಚಿತ್ರದುರ್ಗ ಜಿಲ್ಲೆಯ ಶಾಸಕರು, ಸಚಿವರು ಒತ್ತಾಯಿಸಬೇಕು” ಎಂದು ರಾಷ್ಟ್ರೀಯ ನಾಟಕೋತ್ಸವ ಸಮಾರೋಪ ಸಮಾರಂಭದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು “ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಮ್ಮ ಬಗ್ಗೆ ಪ್ರೀತಿ, ವಿಶ್ವಾಸ ಇದೆ.
ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಬಗೆಹರಿಸಲು ಬೆಂಗಳೂರಿನಲ್ಲಿ ಇರಬೇಕಾದ ಅನಿವಾರ್ಯ ಇರುವುದರಿಂದ ಅವರು ಸಮಾರೋಪ ಸಮಾರಂಭಕ್ಕೆ ಬರಲು ಸಾಧ್ಯವಾಗಿಲ್ಲ” ಎಂದು ಹೇಳಿದರು.

“ಉಮಾಶ್ರೀ ಅವರು ಅಭಿಜಾತ ಕಲಾವಿದೆ. ಅವರಿಗೆ ಶಿವಕುಮಾರ ಪ್ರಶಸ್ತಿ ನೀಡಿದ್ದರಿಂದ ಕನ್ನಡ ನಾಡು ಸಂಭ್ರಮಿಸಿದೆ. ಸಾಣೇಹಳ್ಳಿಯಲ್ಲಿ ತಮ್ಮ ತಂಗಿಯ ಮಕ್ಕಳನ್ನು ನಮ್ಮಲ್ಲಿ ಓದಲು ಉಮಾಶ್ರೀ ಕಳಿಸಿದ್ದರು” ಎಂದು ಸ್ಮರಿಸಿದರು.

ಸಾಣೇಹಳ್ಳಿಯಲ್ಲಿ ಶಿವಸಂಚಾರದಿಂದ ಕೊಡುವ ಶಿವಕುಮಾರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಲಾವಿದೆ ಉಮಾಶ್ರೀ, “ಶಿವಸಂಚಾರದ ಕಲಾವಿದರಿಗೆ ಹೆಚ್ಚಿನ ಸಂಬಳ ನೀಡುವ ಸಲುವಾಗಿ 3 ಕೋಟಿ
ರೂಪಾಯಿಗಳಷ್ಟು ಸಂಗ್ರಹಿಸಿ ಠೇವಣಿ ಇಡುವ ಯೋಜನೆಗೆ ಶಾಸಕರ ನಿಧಿಯಿಂದ ರೂ. 5 ಲಕ್ಷ ನೀಡುವುದರ ಜೊತೆಗೆ ಈಚಿನ ನನ್ನ ಶರ್ಮಿಷ್ಠೆ ಎಂಬ ಏಕವ್ಯಕ್ತಿ ನಾಟಕದ 5 ಪ್ರದರ್ಶನದ ಮೂಲಕ ಸಂಗ್ರಹವಾಗುವ ಮೊತ್ತವನ್ನು ದೇಣಿಗೆಯಾಗಿ ನೀಡುತ್ತೇನೆ” ಎಂದು ಖ್ಯಾತ ರಂಗ ಕಲಾವಿದೆ ಉಮಾಶ್ರೀ ಭರವಸೆ ನೀಡಿದರು.

“ನನ್ನನ್ನು ಪ್ರೋತ್ಸಾಹಿಸುವ ಪ್ರೇಕ್ಷಕ ಪ್ರಭುಗಳಿಗೆ ಶಿವಕುಮಾರ ಪ್ರಶಸ್ತಿ ಅರ್ಪಿಸುವೆ. ಇದಕ್ಕೂ ಮೊದಲು ಕಲ್ಲಂತಿದ್ದ ನನ್ನನ್ನು ರಂಗಭೂಮಿಯಲ್ಲಿ ಶಿಲೆಯಾಗಿ ಮಾಡಿದ ಅನೇಕರನ್ನು ಸ್ಮರಿಸುತ್ತೇನೆ” ಎಂದರು.
ಶಿವಸಂಚಾರದ ಕಲಾವಿದರಿಗೆ ಹೆಚ್ಚಿನ ಸಂಬಳ ನೀಡುವ ಸಲುವಾಗಿ 3 ಕೋಟಿ ರೂಪಾಯಿಗಳಷ್ಟು ಸಂಗ್ರಹಿಸಿ ಠೇವಣಿ ಇಡುವ ಯೋಜನೆಗೆ ರೂ. 25 ಲಕ್ಷ ನೀಡುವ ವಾಗ್ದಾನವನ್ನು ಚಿತ್ರದುರ್ಗ ಜಿಲ್ಲೆಯ ಸಚಿವರು, ಶಾಸಕರು ಶುಕ್ರವಾರ ಭರವಸೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ “ವೈಯಕ್ತಿಕವಾಗಿ ರೂ. 5 ಲಕ್ಷ ಹಾಗೂ ಡಿಸಿಸಿ ಮೂಲಕ ರೂ. 5 ಲಕ್ಷವನ್ನು ನೀಡುವೆ. ಅಲ್ಲದೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ರೂ.5 ಲಕ್ಷ ನೀಡಲಿದ್ದಾರೆ” ಎಂದು ಭರವಸೆ ನೀಡಿದರು.

ಇದಕ್ಕೂ ಮೊದಲು ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ ತಲಾ ರೂ. 5 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು.
ಖ್ಯಾತ ರಂಗಕಲಾವಿದೆ, ಸಿನಿಮಾ ನಟಿ ಮಾಜಿ ಸಚಿವೆ ಉಮಾಶ್ರೀ ಅವರಿಗೆ ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಶಿವಕುಮಾರ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಾಟಕ, ನೃತ್ಯ ರೂಪಕ ಪ್ರದರ್ಶನ ನಡೆಯಿತು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಧರ್ಮಸ್ಥಳದ ಅಪರಾಧ ಪ್ರಕರಣಗಳ ಸಮಗ್ರ ತನಿಖೆಗೆ ಮಹಿಳಾ ಒಕ್ಕೂಟ ಸಹಿ ಸಂಗ್ರಹ
ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಲೇಖಕ ಸಿದ್ಧು ಯಾಪಲಪರವಿ, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಶಿವಣ್ಣ, ರಂಗಕರ್ಮಿ ಶ್ರೀನಿವಾಸ್ ಕಪ್ಪಣ್ಣ,ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ, ಹಿರೇಕೆರೂರು ಶಾಸಕ ಯು.ಬಿ.ಬಣಕಾರ
ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹನುಮಲಿ ಷಣ್ಮಖಪ್ಪ, ಕಲಾವಿದರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು.





