“ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶದ ವಿವಿಧ ಭಾಗಗಳಲ್ಲಿ ಪೆಟ್ಟಿಗೆ ಅಂಗಡಿ, ಗೂಡಂಗಡಿ ಮುಂಗಟ್ಟುಗಳಲ್ಲಿ ಅಕ್ರಮವಾಗಿ ಮದ್ಯ ವ್ಯಾಪಾರ ನಡೆಯುತ್ತಿದ್ದು, ಕೂಡಲೇ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ) ಬಣದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಮುಖಂಡರು ಅಬಕಾರಿ ಇಲಾಖೆಯ ನಿರೀಕ್ಷಕರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಮುಖಂಡರು “ಚಳ್ಳಕೆರೆ ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಚಿಕ್ಕ ದಿನಸಿ ಮಾರಾಟದ ಚಿಲ್ಲರೆ ಅಂಗಡಿಗಳು, ಗೂಡಂಗಡಿಗಳಲ್ಲಿ ಅನಧಿಕೃತವಾಗಿ ಮದ್ಯ ವ್ಯಾಪಾರವು ಅನಧಿಕೃತವಾಗಿ ನಿರ್ಭೀತಿಯಿಂದ ರಾಜಾರೋಷವಾಗಿ ನಡೆಯುತ್ತಿದ್ದು ಚಳ್ಳಕೆರೆ ನಗರದ ಮಧ್ಯದ ಅಂಗಡಿಗಳ ಮುಖಾಂತರ ಸರಬರಾಜು ಆಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ಮನೆ ಮನೆಗೆ ನೀರು, ತಂಪು ಪಾನೀಯಗಳು ಹೇಗೆ ಸರಬರಾಜು ಆಗುತ್ತದೆಯೋ, ಹಾಗೆ ಮದ್ಯದ ಬಾಟಲಿಗಳು ಸಹ ಮದ್ಯದ ಅಂಗಡಿಗಳಿಂದ ಗ್ರಾಮೀಣ ಪ್ರದೇಶದ ಚಿಲ್ಲರೆ ದಿನಸಿ ಅಂಗಡಿ, ಗೂಡಂಗಡಿಗಳಿಗೆ ಸರಬರಾಜಾಗುತ್ತಿದೆ. ಸ್ಥಳೀಯವಾಗಿ ಪಂಚಾಯಿತಿಯ ಅಧಿಕಾರಿಗಳು ಕೂಡ ಪ್ರಾಮಾಣಿಕವಾಗಿ ಗಮನಹರಿಸಿ ಅಕ್ರಮ ಮದ್ಯದ ಮಾರಾಟವನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತಿಲ್ಲ. ಅಲ್ಲದೆ ರಸ್ತೆ ಬದಿಯ ಢಾಬಾ ಹೋಟೆಲ್ಗಳಲ್ಲಿ ಕೂಡ ಅಕ್ರಮ ಮದ್ಯ ಸರಬರಾಜು ಆಗುತ್ತಿದೆ” ಎಂದು ಕಿಡಿಕಾರಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಒಳಮೀಸಲಾತಿ ಆದೇಶ ಕಾನೂನಾಗಲು ಸುಗ್ರೀವಾಜ್ಞೆ ಜಾರಿಗೊಳಿಸಿ: ಮಾಜಿ ಸಚಿವ ಆಂಜನೇಯ
“ಈ ಅಕ್ರಮ ಮದ್ಯ ಮಾರಾಟದಿಂದಾಗಿ ಅನೇಕ ಯುವಕರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿತದ ವ್ಯಸನಕ್ಕೆ ಒಳಗಾಗುತ್ತಿದ್ದು, ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ) ಬಣ ಒತ್ತಾಯಿಸುತ್ತದೆ. ಅನಧಿಕೃತ ಮದ್ಯದ ಮಾರಾಟವನ್ನು ಶೀಘ್ರ ಕ್ರಮ ಕೈಗೊಂಡು ನಿಲ್ಲಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಬಕಾರಿ ಇಲಾಖೆ ವಿರುದ್ದ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಾರಕ ಆಯುಧದೊಂದಿಗೆ ಓಡಾಟ: ಆತಂಕ ಭಯ ಹುಟ್ಟಿಸಿದ ವ್ಯಕ್ತಿ ಬಂಧಿಸಿದ ಪೊಲೀಸರು
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷರಾದ ಪಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಚಂದ್ರಣ್ಣ, ಗೌರವಾಧ್ಯಕ್ಷ ಭೋಜರಾಜು, ಕಾರ್ಮಿಕ ಘಟಕದ ಅಧ್ಯಕ್ಷ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಮುರಳಿ, ಗಿರೀಶ್ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.





