ತಳಕು ಬಸ್ ನಿಲ್ದಾಣದಲ್ಲಿ ಕೈ ಚಳಕ ತೋರಿರುವ ಕಳ್ಳರು ಒಂದೇ ರಾತ್ರಿಯಲ್ಲಿ ಮೂರು ಪೆಟ್ಟಿಗೆ ಅಂಗಡಿಗಳಲ್ಲಿ ಡಬ್ಬ ಮುರಿದು ಸರಣಿ ಕಳ್ಳತನ ಮಾಡಿದ್ದಾರೆ. ಇದರಿಂದಾಗಿ ತಳಕು ಸೇರಿದಂತೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಳ್ಳಿಗಳಲ್ಲಿ, ನಗರ ಭಾಗದಲ್ಲಿ ಸಾರ್ವಜನಿಕರಿಗೆ ಹಾಗೂ ರಸ್ತೆ ಬದಿಯ ಅಂಗಡಿಗಳ ಮಾಲೀಕರಿಗೆ ಆತಂಕ ಶುರುವಾಗಿದೆ.
ಇದೀಗ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದ ನಿಲ್ದಾಣದಲ್ಲಿ ಒಂದೇ ದಿನ ರಾತ್ರಿ ಕಳ್ಳರು ಕಿರಾಣಿ ಅಂಗಡಿ, ಡಬ್ಬದ ಅಂಗಡಿ, ನಂದಿನಿ ಮಿಲ್ಕ್ ಪಾರ್ಲರ್, ಬೇಕರಿ ಸೇರಿದಂತೆ ಅಂಗಡಿಗಳಲ್ಲಿ ಕಳ್ಳತನ ಮಾಡಿದ್ದು ನಾಗರೀಕರಿಗೆ ಆತಂಕ ಹುಟ್ಟಿಸಿದೆ.

ತಳಕಿನ ಬಸ್ ನಿಲ್ದಾಣದಲ್ಲಿ ರಸ್ತೆ ಬದಿ ಇರುವ ಭಾಗ್ಯಮ್ಮ ಎನ್ನುವವರ ಬೇಕರಿಯಲ್ಲಿ 3,000 ಮೌಲ್ಯದ ಗುಟ್ಕಾ ಸಿಗರೇಟ್ ಹಾಗೂ 2,000 ನಗದು, ಗಂಗಮ್ಮ ಎನ್ನುವವರ ಬೇಕರಿಯಲ್ಲಿ ಸುಮಾರು 9,000 ಗುಟ್ಕಾ ಸಿಗರೇಟ್ ಇನ್ನಿತರ ವಸ್ತುಗಳು ಹಾಗೂ 3,000 ನಗದು, ಸೈಯದ್ ಮೂಸಂ ಎನ್ನುವವರ ಕಿರಾಣಿ ಅಂಗಡಿಯಲ್ಲಿ 40,000 ಮೌಲ್ಯದ ಗುಟ್ಕಾ ಸಿಗರೇಟ್, ಅಡುಗೆ ಎಣ್ಣೆ, ದಿನಬಳಕೆ ವಸ್ತುಗಳನ್ನು ಕಳವು ಮಾಡಿದ್ದು ಅಂಗಡಿಗಳ ತಗಡು ಮುರಿದು ಕಳ್ಳರು ಒಳಹೊಕ್ಕಿದ್ದಾರೆ ಎಂದು ತಿಳಿದು ಬಂದಿದೆ.

ಚಳ್ಳಕೆರೆ ತಾಲೂಕಿನ ನಗರ ಸೇರಿದಂತೆ ಹಳ್ಳಿಗಳ ಮತ್ತು ರಸ್ತೆ ಭಾಗದ ಅಂಗಡಿಗಳು ಮತ್ತು ಮನೆಗಳಲ್ಲಿ ಪದೇ ಪದೇ ಕಳ್ಳತನ ಮತ್ತು ದರೋಡೆ ಪ್ರಕರಣಗಳು ವರದಿಯಾಗುತ್ತಿದ್ದು, ಇವು ಸಾರ್ವಜನಿಕರ ಮತ್ತು ಪೊಲೀಸರ ನಿದ್ದೆಗೆಡಿಸಿವೆ. ಇವುಗಳಲ್ಲಿ ಕೆಲವೇ ಬೆರಳೆಣಿಕೆಯಷ್ಟು ಪ್ರಕರಣಗಳಲ್ಲಿ ಮಾತ್ರವೇ ಆರೋಪಿಗಳ ಪತ್ತೆಯಾಗಿದ್ದು, ಬಹಳಷ್ಟು ಪ್ರಕರಣಗಳಲ್ಲಿ ಆರೋಪಿಗಳ ಸುಳಿವು ಸಿಗದೇ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಚಳ್ಳಕೆರೆ ನಗರ, ಹೆದ್ದಾರಿ ಮತ್ತು ಗ್ರಾಮಾಂತರ ಭಾಗಗಳಲ್ಲಿ ಸುರಕ್ಷತೆಗಾಗಿ ಸಾರ್ವಜನಿಕರಿಂದ ಆಗ್ರಹ ಕೇಳಿ ಬಂದಿದೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸಿಐಟಿಯು ನಾಯಕಿ ವರಲಕ್ಷ್ಮಿಗೆ ಪ್ರತಿಷ್ಠಿತ ನುಲೇನೂರು ಶಂಕರಪ್ಪ ಹಸಿರು ಪುರಸ್ಕಾರ. ಚಿತ್ರದುರ್ಗ | ಸಿಐಟಿಯು ನಾಯಕಿ ವರಲಕ್ಷ್ಮಿಗೆ ಪ್ರತಿಷ್ಠಿತ ನುಲೇನೂರು ಶಂಕರಪ್ಪ ಹಸಿರು ಪುರಸ್ಕಾರ
ಸ್ಥಳಕ್ಕೆ ತಳಕು ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.





