ಜನಸಾಮಾನ್ಯರಿಗೆ ಪಾರದರ್ಶಕ ಆಡಳಿತ ನೀಡಬೇಕಾದ ಗ್ರಾಮ ಪಂಚಾಯಿತಿಗಳು, ಮಾಹಿತಿ ಹಕ್ಕು ಕಾಯ್ದೆ-2005ನ್ನು ಗಾಳಿಗೆ ತೂರುತ್ತಿವೆಯೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಚಿತ್ರದುರ್ಗ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳು ಅರ್ಜಿದಾರರನ್ನು ‘ಕಪ್ಪು ಪಟ್ಟಿಗೆ’ (Blacklist) ಸೇರಿಸಲಾಗಿದೆ ಎಂಬ ವಿಚಿತ್ರ ಕಾರಣ ನೀಡಿ ಮಾಹಿತಿ ನಿರಾಕರಿಸುತ್ತಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಅರ್ಜಿದಾರರಾದ ಸಿ.ಪಿ. ತಿಪ್ಪೇಸ್ವಾಮಿ ದೊಡ್ಡಸಿದ್ದವ್ವನಹಳ್ಳಿ, ಆಲಗಟ್ಟ ಮತ್ತು ಗೋನೂರು ಗ್ರಾಮ ಪಂಚಾಯಿತಿಗಳಲ್ಲಿ ವಿಕಲಚೇತನರ ಕಲ್ಯಾಣಕ್ಕಾಗಿ ಮೀಸಲಿಟ್ಟ ಶೇ. 5ರಷ್ಟು ಅನುದಾನದ ಬಳಕೆ ಮತ್ತು ಸೌಲಭ್ಯ ಪಡೆದವರ ಪಟ್ಟಿಯನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಮೂರೂ ಪಂಚಾಯಿತಿಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಕರ್ನಾಟಕ ಮಾಹಿತಿ ಆಯೋಗವು ಅರ್ಜಿದಾರರನ್ನು ಕಪ್ಪು ಪಟ್ಟಿಗೆ ಸೇರಿಸಿದೆ ಎಂದು ಹೇಳಿ ಮಾಹಿತಿಯನ್ನು ನೀಡಲು ನಿರಾಕರಿಸಿದ್ದಾರೆ.
ಗಮನಾರ್ಹ ಸಂಗತಿಯೆಂದರೆ, ಸ್ವತಃ ಕರ್ನಾಟಕ ಮಾಹಿತಿ ಆಯೋಗವು ಬೇರೊಂದು ಸ್ಪಷ್ಟೀಕರಣದಲ್ಲಿ (ಸಂಖ್ಯೆ: ಕಮಾಆ/605/2025), “ಮಾಹಿತಿ ಹಕ್ಕು ಕಾಯ್ದೆ 2005ರ ಯಾವುದೇ ಕಲಂ ಅಥವಾ ಸೆಕ್ಷನ್ನಲ್ಲಿ ಅರ್ಜಿದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಅಥವಾ ದಂಡ ವಿಧಿಸಲು ಮುಖ್ಯ ಮಾಹಿತಿ ಆಯುಕ್ತರಿಗೆ ಅವಕಾಶವಿರುವುದಿಲ್ಲ” ಎಂದು ಸ್ಪಷ್ಟಪಡಿಸಿದೆ. ಹೀಗಿದ್ದರೂ, ಪಂಚಾಯಿತಿ ಅಧಿಕಾರಿಗಳು ಹಳೆಯ ಅಥವಾ ಅನ್ವಯವಾಗದ ಆದೇಶಗಳನ್ನು ಮುಂದಿಟ್ಟುಕೊಂಡು ಮಾಹಿತಿ ನೀಡದೆ ನುಣುಚಿಕೊಳ್ಳುತ್ತಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.



RtI ಕಾಯ್ದೆಯಲ್ಲಿ ‘ಕಪ್ಪು ಪಟ್ಟಿ’ ಎಂಬ ಪದವೇ ಇಲ್ಲದಿದ್ದರೂ ಅಧಿಕಾರಿಗಳು ಅದನ್ನು ಬಳಸುತ್ತಿದ್ದಾರೆ. ಇದರಿಂದಾಗಿ ಅನುದಾನದಲ್ಲಿ ಗೋಲ್ಮಾಲ್ ಶಂಕೆ ವ್ಯಕ್ತವಾಗುತ್ತಿದೆ. ವಿಕಲಚೇತನರ ನಿಧಿಯ ಬಳಕೆಯ ಬಗ್ಗೆ ಮಾಹಿತಿ ಕೇಳಿದಾಗ ಮಾತ್ರ ಇಂತಹ ಉತ್ತರಗಳು ಬರುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಬದಲು, ಅರ್ಜಿದಾರರನ್ನೇ ತಪ್ಪಿತಸ್ಥರನ್ನಾಗಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ.
ಇದನ್ನೂ ಓದಿ: ಚಿತ್ರದುರ್ಗ | ಚುನಾವಣೆ ನಡೆಸದೆ ಆಡಳಿತಾಧಿಕಾರಿ ನೇಮಕ: ಪರಿಶಿಷ್ಟ ಹಿಂದುಳಿದವರಿಗೆ ಅಧಿಕಾರ ನಿರಾಕರಣೆ


”ಮಾಹಿತಿ ನಿರಾಕರಿಸುವ ಅಧಿಕಾರ ಇವರಿಗೆ ಕೊಟ್ಟವರು ಯಾರು? ವಿಕಲಚೇತನರ ಹಣ ಎಲ್ಲಿ ಹೋಯಿತು ಎಂದು ಕೇಳುವುದು ತಪ್ಪೇ?” ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಮೇಲಧಿಕಾರಿಗಳು ಈ ಕೂಡಲೇ ಮಧ್ಯಪ್ರವೇಶಿಸಿ, ಮಾಹಿತಿ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರಬೇಕು ಮತ್ತು ಸುಳ್ಳು ಕಾರಣ ನೀಡಿ ಅರ್ಜಿ ವಿಲೇವಾರಿ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.





