ಕಾರವಾರ: ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯ ಅಂಗವಾಗಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಆಯೋಜಿಸಿರುವ ‘ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್ -2026’ ರ ಪಶ್ಚಿಮ ಕರಾವಳಿ ತಂಡವು ಕಾರವಾರವನ್ನು ಪ್ರವೇಶಿಸಿತು.
ಮಾಜಾಳಿ ಚೆಕ್ ಪೋಸ್ಟ್ನಲ್ಲಿ ರ್ಯಾಲಿಯನ್ನು ಅತ್ಯಂತ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ಜನವರಿ 28ರಂದು ಗುಜರಾತ್ನ ಲಖ್ಪತ್ ಕೋಟೆಯಿಂದ ಆರಂಭವಾಗಿರುವ ಈ ಸೈಕ್ಲೋಥಾನ್ ತಂಡದಲ್ಲಿ 50 ಮಹಿಳಾ ಸಿಬ್ಬಂದಿ ಸೇರಿದಂತೆ ಒಟ್ಟು 120 ಸಿಐಎಸ್ಎಫ್ ಸಿಬ್ಬಂದಿ ಭಾಗವಹಿಸಿದ್ದಾರೆ.
ಮಡಗಾಂವ್ ಹಾಗೂ ಕಾಣಕೋಣ ಮಾರ್ಗವಾಗಿ ಕಾರವಾರಕ್ಕೆ ಆಗಮಿಸಿದ ಈ ತಂಡಕ್ಕೆ ಸಿಐಎಸ್ಎಫ್ ಕೈಗಾ ಘಟಕದ ಅಧಿಕಾರಿಗಳು, ಪೊಲೀಸ್ ಇಲಾಖೆ, ಎನ್ಸಿಸಿ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಜಾನಪದ ಕಲಾತಂಡಗಳು ಮೆರವಣಿಗೆಯ ಮೂಲಕ ಸ್ವಾಗತ ಕೋರಿದರು.

ಸೈಕ್ಲೋಥಾನ್ ತಂಡವು ಗೋಟ್ನೆಭಾಗ್ ಕ್ರಾಸ್ಗೆ ತಲುಪಿದಾಗ ಸ್ಥಳೀಯ ಮೀನುಗಾರ ಮಹಿಳೆಯರು ಸಿಬ್ಬಂದಿಗೆ ತಿಲಕವಿಟ್ಟು, ಪುಷ್ಪವೃಷ್ಟಿ ಮಾಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಈ ತಂಡವು ಮಾಜಾಳಿ ಚೆಕ್ ಪೋಸ್ಟ್ನಿಂದ ವಿವಿಧ ಗ್ರಾಮಗಳ ಮೂಲಕ ಸಂಚರಿಸಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ತಲುಪಿತು. ಅಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ರ್ಯಾಲಿಯ ಕುರಿತು ಮಾತನಾಡಿದ ಸಿಐಎಸ್ಎಫ್ ಕಾನ್ಸ್ಟೇಬಲ್ ರಾಹುಲ್, “ನಮ್ಮ ರ್ಯಾಲಿಯು ಗುಜರಾತ್ನಿಂದ ಕೇರಳದ ಕೊಚ್ಚಿಯವರೆಗೆ ಸಾಗಲಿದೆ. ‘ಸುರಕ್ಷಿತ ಸಮೃದ್ಧ ಭಾರತ’ ಎಂಬುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಕರಾವಳಿ ತೀರವು ಸುರಕ್ಷಿತವಾಗಿದ್ದಾಗ ಮಾತ್ರ ದೇಶ ಸಮೃದ್ಧವಾಗಿರಲು ಸಾಧ್ಯ.
ಈ ಸುದ್ದಿ ಓದಿದ್ದೀರಾ ? ಯಲ್ಲಾಪುರ | ಗ್ರಾಮದೇವಿ ಜಾತ್ರೆ: ಭಕ್ತರ ಪಾಲಿಗೆ ‘ಆಪತ್ಬಾಂಧವ’ರಾದ ಪೊಲೀಸರು; ಜನಸ್ನೇಹಿ ಕಾರ್ಯಕ್ಕೆ ಸಾರ್ವಜನಿಕ ಪ್ರಶಂಸೆ
ಸಮುದ್ರದ ಹತ್ತಿರವಿರುವ ಮೀನುಗಾರರು ದೇಶದ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರೊಂದಿಗೆ ಬೆರೆತು, ದೇಶದ ರಕ್ಷಣೆಗೆ ಅವರ ಸಹಕಾರ ಪಡೆಯುವುದು ಈ ಸೈಕ್ಲೋಥಾನ್ನ ಆಶಯವಾಗಿದೆ,” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೈಗಾ ಘಟಕದ ಸೀನಿಯರ್ ಕಮಾಂಡೆಂಟ್ ಅಜಯ್ ಕುಮಾರ್ ಝಾ, ಬೆಂಗಳೂರು ಸ್ಯಾಟಲೈಟ್ ಕೇಂದ್ರದ ಸೀನಿಯರ್ ಕಮಾಂಡೆಂಟ್ ಆರ್.ಪಿ. ಸಿಂಗ್, ಡೆಪ್ಯುಟಿ ಕಮಾಂಡೆಂಟ್ ಬಿರೇಂದ್ರ ಕುಮಾರ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ನಾಯಕ್ ಹಾಗೂ ಡಿವೈಎಸ್ಪಿ ಗಿರೀಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸೈಕ್ಲೋಥಾನ್ ತಂಡವು ಫೆಬ್ರವರಿ 17ರಂದು ಧ್ವಜಾರೋಹಣ ಕಾರ್ಯಕ್ರಮದ ನಂತರ ಮುರುಡೇಶ್ವರದ ಕಡೆಗೆ ತನ್ನ ಪಯಣವನ್ನು ಮುಂದುವರಿಸಲಿದೆ.





