ಸರಕಾರದ ವಿವಿಧ ಇಲಾಖೆಗಳಲ್ಲಿ ದುಡಿಯುತ್ತಿರುವ ನೌಕರರನ್ನು ಖಾಯಂಗೊಳಿಸದೆ ಹೊರಗುತ್ತಿಗೆಯಾಗಿ ಯಾವುದೇ ಉದ್ಯೋಗ ಭದ್ರತೆ ಇಲ್ಲದೆ ದುಡಿಸಿಕೊಳ್ಳುತ್ತಿರುವ ಕ್ರಮಕ್ಕೆ ಸಿಐಟಿಯು ತೀವ್ರ ವಿರೋಧ ವ್ಯಕ್ತಪಡಿಸಿದೆ.
ಹೊರಗುತ್ತಿಗೆ ನೌಕರರ ಇಎಸ್ಐ, ಪಿಎಫ್ ಹಾಗೂ ಕನಿಷ್ಠ ವೇತನಗಳ ಜವಾಬ್ದಾರಿಯನ್ನು ಖಾಸಗಿ ಏಜೆನ್ಸಿಗಳಿಗೆ ಒಪ್ಪಿಸಿರುವ ಪರಿಣಾಮ, ಖಾಸಗಿ ಏಜೆನ್ಸಿಗಳು ಕಾರ್ಮಿಕರನ್ನು ವಿಪರೀತವಾಗಿ ಶೋಷಣೆ ಮಾಡುತ್ತಿವೆ. ಇದರಿಂದ ನೌಕರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಸಿಐಟಿಯು ಆರೋಪಿಸಿದೆ.
ಈ ಬಗ್ಗೆ ಹಲವು ಕಾರ್ಮಿಕ ಸಂಘಟನೆಗಳು ಹಾಗೂ ಕಾರ್ಮಿಕರು ಸರ್ಕಾರಕ್ಕೆ ಮರುಮರು ಮನವಿ ಸಲ್ಲಿಸಿ, ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಶೋಷಣೆಯಿಂದ ಮುಕ್ತಗೊಳಿಸಿ ಸರಕಾರಿ ನೌಕರರಾಗಿ ಖಾಯಂಗೊಳಿಸಬೇಕೆಂದು ಆಗ್ರಹಿಸುತ್ತಲೇ ಬಂದಿದ್ದಾರೆ. ಆದರೆ ಸರ್ಕಾರ ಇದುವರೆಗೆ ಸ್ಪಂದಿಸಿಲ್ಲ. ಬದಲಾಗಿ ಗುತ್ತಿಗೆ ಪದ್ಧತಿಯನ್ನು ಮುಂದುವರಿಸಲು ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ (ನಿಯಮಿತ) ಸ್ಥಾಪಿಸುವ ಮೂಲಕ ‘ಗುಲಾಮಗಿರಿ ಪದ್ಧತಿ’ಯನ್ನೇ ಖಾಯಂಗೊಳಿಸಲು ಮುಂದಾಗಿದೆ. ಇದು ಕಾರ್ಮಿಕರನ್ನು ಭದ್ರತೆಯಿಲ್ಲದ ಉದ್ಯೋಗಗಳಲ್ಲಿಯೇ ಉಳಿಸುವ ತೀರ್ಮಾನವಾಗಿದೆ ಎಂದು ಸಿಐಟಿಯು ಖಂಡಿಸಿದೆ.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೌರ ಕಾರ್ಮಿಕರನ್ನು ನೇರ ಪಾವತಿ ಪದ್ಧತಿಯಲ್ಲಿ ನೇಮಿಸಿಕೊಂಡಿರುವ ಮಾದರಿಯಂತೆ, ಇತರೆ ಸರಕಾರಿ ಇಲಾಖೆಗಳಲ್ಲಿಯೂ ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರನ್ನು ನೇರ ಪಾವತಿ ಅಡಿಯಲ್ಲಿ ನೇಮಿಸಿಕೊಂಡು, ಹಂತ ಹಂತವಾಗಿ ಖಾಯಂಗೊಳಿಸುವತ್ತ ಸರ್ಕಾರ ಮುಂದಾಗಬೇಕು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಒತ್ತಾಯಿಸಿದ್ದಾರೆ.






