ರಾಜ್ಯದ ಕರಾವಳಿ ಪ್ರದೇಶದಲ್ಲಿನ 106 ದ್ವೀಪಗಳನ್ನು ಪರಿಸರ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸಲು ಉದೇಶಿಸಲಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಂಕಾಳ ವೈದ್ಯ ಅವರು ತಿಳಿಸಿದ್ದಾರೆ.
ಅವರು ವಿಧಾನ ಪರಿಷತ್ ನಲ್ಲಿ ಸದಸ್ಯ ರಮೇಶ್ ಬಾಬು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿನ 7 ದ್ವೀಪಗಳನ್ನು ಪರಿಸರ ಪ್ರವಾಸೋದ್ಯಮವನ್ನು (Eco-Tourism) ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (PPP Model) ಅಭಿವೃದ್ಧಿಪಡಿಸಲು ವ್ಯವಹರಣಾ ಸಲಹೆಗಾರರನ್ನು (Transaction Advisor) ಆಯ್ಕೆ ಮಾಡಲಾಗಿದ್ದು, ಕಾರ್ಯ ಸಾಧ್ಯತಾ ವರದಿ (Feasibility Report) ತಯಾರಿಸಲಾಗುತ್ತಿದೆ
ಉಡುಪಿ ಜಿಲ್ಲೆಯ 7 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 1 ದ್ವೀಪಗಳಿಗೆ Feasibility Report ತಯಾರಿಸಲಾಗಿದೆ. ಈ ಪೈಕಿ 3 ದ್ವೀಪಗಳಾದ ದರಿಯಾ ಬಹದ್ದೂರ್ ಘಡ, ಮಲ್ಪೆ ಮತ್ತು ಅಯಾಬಾ ದ್ವೀಪಗಳನ್ನು ಅಭಿವೃದ್ಧಿಪಡಿಸಲು GIS (Master Plan) ಸಿದ್ಧಪಡಿಸಲಾಗಿದೆ.
ರಾಜ್ಯವು ಸುಮಾರು 185.21 ನಾಟಿಕಲ್ ಮೈಲಿ (ಸುಮಾರು 343 ಕಿ.ಮೀ) ಕಡಲ ತೀರವನ್ನು ಹೊಂದಿದ್ದು, ರಾಜ್ಯದಲ್ಲಿ ಒಟ್ಟು 13 ಸಣ್ಣ ಬಂದರುಗಳು ಹಾಗೂ ಒಂದು ಬೃಹತ್ ಬಂದರು (ನವ ಮಂಗಳೂರು ಬಂದರು) ಇರುತ್ತದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಅರಣ್ಯ ಭೂಮಿ-ಸಿಆರ್ಝಡ್ ಸಂಘರ್ಷ; ಜಿಲ್ಲೆಯ ಶೇ 86ರಷ್ಟು ಆಸ್ತಿಗಳಿಗೆ ಸಿಗದ ‘ಇ-ಸ್ವತ್ತು’ ಮಾನ್ಯತೆ
2024-25ನೇ ಸಾಲಿನಲ್ಲಿ ಕಾರವಾರ ಬಂದರಿನಲ್ಲಿ 5,50,502 ಮೆಟ್ರಿಕ್ ಟನ್ ಸರಕು ನಿರ್ವಹಣೆ ಹಾಗೂ ಹಳೇ ಮಂಗಳೂರು ಬಂದರಿನಲ್ಲಿ 55,505 ಮೆಟ್ರಿಕ್ ಟನ್ ಸರಕು ನಿರ್ವಹಣೆ ವಾರ್ಷಿಕ ವಹಿವಾಟು ಮಾಡಲಾಗಿದ್ದು, ಉಳಿದ ಬಂದರುಗಳಲ್ಲಿ ಯಾವುದೇ ವಾಣಿಜ್ಯ ಸರಕು ವಹಿವಾಟು ನಡೆಯುತ್ತಿರುವುದಿಲ್ಲ.
ರಾಜ್ಯದಲ್ಲಿ ಮೀನುಗಾರರಿಗೆ ತೊಂದರೆಯಾಗದಂತೆ ಬಂದರು ಗಳನ್ನು ಮತ್ತು ಕರಾವಳಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.





