ಮೈಸೂರಿನ ಭಾರತೀಯ ಬಾಷಾ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರದಂದು ಬೃಹತ್ ಕೈಗಾರಿಕೆ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ತಂಬಾಕು ಬೆಳೆಗಾರರ ಹಿತಕಾಯಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಖರೀದಿದಾರರು ಉತ್ತಮ ಬೆಲೆಗೆ ತಂಬಾಕು ಖರೀದಿ ಮಾಡುವಂತೆ ಸೂಚನೆ ನೀಡಿದರು.
ತಂಬಾಕು ಮಂಡಳಿ, ಖಾಸಗಿ ಕಂಪನಿಗಳ ಪ್ರತಿನಿಧಿಗಳು, ಬೆಳೆಗಾರರು ಹಾಗೂ ಜನಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ, ರಾಜ್ಯದ ಯಾವುದೇ ತಂಬಾಕು ಮಾರುಕಟ್ಟೆಗಳಲ್ಲಿ ರೈತರಿಂದ ಹಿಂದಿನ ಸರಾಸರಿ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಗೆ ತಂಬಾಕು ಖರೀದಿ ಮಾಡಬೇಕು. ಇದರ ಜೊತೆಗೆ ತಂಬಾಕು ಮಂಡಳಿಯು ಹರಾಜು ಪ್ರಕ್ರಿಯೆಯ ಮೇಲೆ ನಿಗಾ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಆಂಧ್ರ ತಂಬಾಕು ಮಾರುಕಟ್ಟೆಯಲ್ಲಿ ₹470 ರೂಪಾಯಿಗೆ ಖರೀದಿ ಮಾಡಲಾಗಿದ್ದು, ರಾಜ್ಯದಲ್ಲಿ ನಿಗದಿಯಾಗಿರುವ ₹370 ರೂಪಾಯಿಗಳನ್ನು ನೀಡದೆ ಮನಸೋ ಇಚ್ಛೆ ಖರೀದಿ ಮಾಡುತ್ತಿರುವುದು ಸೂಕ್ತವಲ್ಲ. ನಿಗದಿಯಾದ ದರದಂತೆ ಕೊಳ್ಳಬೇಕು. ಐಟಿಸಿ ಕಂಪನಿ ಅತಿ ಹೆಚ್ಚು ಖರೀದಿ ಮಾಡುವುದರಿಂದ ಇದರ ಕಡೆಗೆ ಗಮನಹರಿಸಬೇಕು ಎಂದರು.
ತಂಬಾಕು ಉತ್ಪನ್ನಗಳಿಗೆ ವಿಧಿಸಲಾಗುತ್ತಿರುವ ತೆರಿಗೆ ಕುರಿತಾಗಿ ದೂರುಗಳಿದ್ದಲ್ಲಿ, ಲಿಖಿತ ರೂಪದಲ್ಲಿ ಸಲ್ಲಿಸಿದರೆ ಕೇಂದ್ರ ಹಣಕಾಸು ಸಚಿವರ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿಯೂ, ರೈತರಿಗೆ ತೆರಿಗೆ ಹೆಸರಿನಲ್ಲಿ ಯಾವುದೇ ಕಾರಣಕ್ಕೂ ಅನ್ಯಾಯ ಆಗಬಾರದು ಎಂದರು.
ಐಟಿಸಿ ಕಂಪನಿ ಅಧಿಕಾರಿ ರವಿ ಮಾತನಾಡಿ, ತಂಬಾಕು ಉತ್ಪನ್ನಗಳಿಗೆ ವಿಧಿಸುತ್ತಿರುವ ಜಿಎಸ್ಟಿಯನ್ನು ಕೇಂದ್ರ ಶೇ.18 ರಿಂದ 40ಕ್ಕೆ ಏರಿಸಿದೆ. ಸಿಗರೇಟು ಬೆಲೆ ಏರಿಕೆ ಕಂಡಿದ್ದು, ಉತ್ಪನ್ನಗಳ ಬೇಡಿಕೆ ಕುಸಿಯುತ್ತಿದೆ. ಇದರಿಂದಾಗಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ತಂಬಾಕು ಖರೀದಿ ಮಾಡುತ್ತಿರುವುದಾಗಿ ತಿಳಿಸಿದರು. ಸಚಿವರಾದ ಕೆ.ವೆಂಕಟೇಶ್ ಮಾತನಾಡಿ, ಸಿಗರೇಟ್ ಮೇಲಿನ ಜಿಎಸ್ಟಿ ಹೆಚ್ಚಳಕ್ಕೆ ರೈತರ ತಂಬಾಕು ಖರೀದಿಯಲ್ಲಿ ಬೆಲೆ ಕಡಿಮೆ ಮಾಡುವುದು, ಹಠಾತ್ ಖರೀದಿ ನಿಲ್ಲಿಸಿ ರೈತರಿಗೆ ಅನ್ಯಾಯ ಮಾಡುವುದು ಸರಿಯಲ್ಲ ಎಂದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ತಂಬಾಕು ಮಂಡಳಿ ವಿದೇಶಿ ಕಂಪನಿಗಳಿಗೆ ಆಹ್ವಾನ ನೀಡಿ ಖರೀದಿಗೆ ಮುಕ್ತ ಅವಕಾಶ ಕಲ್ಪಿಸಬೇಕು ಆಗ ಬೆಲೆಯಲ್ಲಿ ಏರಿಕೆ ಕಾಣಲು ಸಾಧ್ಯ. ಈಗ ಸಧ್ಯದ ಪರಿಸ್ಥಿತಿಯಲ್ಲಿ ಐಟಿಸಿ ಕಂಪನಿಯೊಂದೆ ತಂಬಾಕು ಮಂಡಳಿ ನಿಯಂತ್ರಿಸುತ್ತಿರುವುದು ಈ ಸಮಸ್ಯೆಗಳಿಗೆಲ್ಲ ಕಾರಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ತಾಂತ್ರಿಕ ಗೊಂದಲಗಳು; ಎನ್ಯೂಮರೇಷನ್ ಹಂತಕ್ಕೆ ಪೂರ್ವ ಸಿದ್ಧತೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
ಸಭೆಯಲ್ಲಿ ಶಾಸಕರಾದ ಎ. ಮಂಜು, ಡಿ. ರವಿಶಂಕರ್, ಜಿ.ಡಿ. ಹರೀಶ್ ಗೌಡ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ಕೆ. ವಿವೇಕಾನಂದ ಸೇರಿದಂತೆ ಇನ್ನಿತರರು ಇದ್ದರು.





