ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ಹೆಸರಿಗೆ ಮಾತ್ರ ಸಮುದಾಯ ಆಸ್ಪತ್ರೆ ಇದೆ. ಇಲ್ಲಿಗೆ ಬರುವ ರೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ವೈದ್ಯಾಧಿಕಾರಿ ಸೇರಿದಂತೆ ಹಲವು ಹುದ್ದೆಗಳು ಖಾಲಿ ಇದ್ದರೆ, ಇನ್ನೊಂದೆಡೆ ಆಸ್ಪತ್ರೆಯನ್ನು ಕೆಳದರ್ಜೆಗೆ ಇಳಿಸಲಾಗುತ್ತದೆ ಎಂಬ ಗುಮಾನಿ ಹಬ್ಬಿದೆ.
ವಿಟ್ಲ ಪಟ್ಟಣ ಪಂಚಾಯತ್ ಸಭೆಯಲ್ಲಿ ಸಮುದಾಯ ಆಸ್ಪತ್ರೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಕೆಳದರ್ಜೆಗೆ ಇಳಿಸಲಾಗುತ್ತದೆ ಎಂದು ಚರ್ಚೆ ನಡೆದು ಸರ್ಕಾರದ ಗಮನ ಸೆಳೆಯುವುದಾಗಿ ತೀರ್ಮಾನಿಸಲಾಗಿತ್ತು. ಹಾಗೆಯೇ ಕೂಡಲೇ ವೈದ್ಯಾಧಿಕಾರಿ ಸೇರಿದಂತೆ ಇತರೆ ಸಿಬ್ಬಂದಿ ನೇಮಕಾತಿ ಮಾಡುವಂತೆ ಒತ್ತಾಯಿಸಲಾಗಿತ್ತು. ವಿಶೇಷವೆಂದರೆ ವಿಟ್ಲ ಸಮುದಾಯ ಆಸ್ಪತ್ರೆಯನ್ನು ಎಂಡೋ ಪೀಡಿತರಿಗೆ ಶುಶ್ರೂಷೆ ಮತ್ತು ಪಾಲನೆ ಮಾಡುವ ಪಟ್ಟಿಯಲ್ಲಿ ಕೆಲವು ವರ್ಷಗಳ ಹಿಂದೆಯೇ ಸೇರಿಸಲಾಗಿದೆ. ಆದರೆ ಇಲ್ಲಿ ಎಂಡೋ ಪೀಡಿತರ ವಿಶೇಷ ಆರೈಕೆಗಿಂತ ಸಾಮಾನ್ಯ ರೋಗಿಗಳೇ ಪರದಾಡುವಂತಿದೆ.
ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳ ಗ್ರಾಮೀಣ ಸೇವೆಯ ಕಾರಣ ಸಾಮಾನ್ಯ ಕಾಯಿಲೆಗಳಿಗೆ ಸಮಾಧಾನ ಸಿಕ್ಕರೂ, ಸಮುದಾಯ ಆಸ್ಪತ್ರೆ ಎಂಬ ಹೆಸರಿಗೆ ಕಳಂಕವಿದೆ. ಸರ್ಕಾರದಿಂದ ಔಷಧಿ ಪೂರೈಕೆ ಸೇರಿದಂತೆ ಉಪಕರಣಗಳ ರಿಪೇರಿ ತಕ್ಕ ಕಾಲಕ್ಕೆ ಆಗುತ್ತಿದ್ದರೂ ಸಿಬ್ಬಂದಿಯದೇ ಕೊರತೆ. ಎಕ್ಸ್-ರೇ ವಿಭಾಗದಲ್ಲಿ, ರಕ್ತ ಪರೀಕ್ಷೆ, ಸ್ಕ್ಯಾನಿಂಗ್ ವಿಭಾಗಗಳಲ್ಲಿ ತಲಾ ಒಬ್ಬರು ಸಿಬ್ಬಂದಿಯಿದ್ದು, ಹತ್ತು ಶುಶ್ರೂಷಕಿಯರ ಕೊರತೆ ಇದೆ. 14 ಬೆಡ್ಗಳಿದ್ದರೂ ಇಲ್ಲಿ ಒಳರೋಗಿಯಾಗಿ ಯಾರನ್ನೂ ತೆಗೆದುಕೊಳ್ಳುತ್ತಿಲ್ಲ. ಸಿಬ್ಬಂದಿ ಕೊರತೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ.

“ವಿಟ್ಲ ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ಬಂದವರನ್ನು ಪ್ರಾಥಮಿಕ ಚಿಕಿತ್ಸೆ ನೀಡಿ ಬಂಟ್ವಾಳ, ಪುತ್ತೂರು ಅಥವಾ ಮಂಗಳೂರಿಗೆ ಕಳುಹಿಸಲಾಗುತ್ತದೆ. ಶುಶ್ರೂಷಕರ ಕೊರತೆ ಹಿನ್ನೆಲೆಯಲ್ಲಿ ಈ ಕ್ರಮ ಅನುಸರಿಸಲಾಗುತ್ತದೆ” ಎಂದು ಹಿರಿಯ ನರ್ಸ್ ತಿಳಿಸಿದ್ದಾರೆ.
“ವಿಟ್ಲ ನಿವಾಸಿ, ಹಿರಿಯ ನಾಗರಿಕ ವಿ. ಮಹಮ್ಮದ್ ಮೂಸಾ ಅವರ ಪ್ರಕಾರ ವಿಟ್ಲ ಆಸ್ಪತ್ರೆಗೆ ತನ್ನದೇ ಹೆಸರಿದೆ. ಇಲ್ಲಿಗೆ ಬಂದ ಎಲ್ಲ ವೈದ್ಯಾಧಿಕಾರಿಗಳೂ ನಾಗರಿಕ ಸ್ನೇಹಿಗಳಾಗಿ, ರೋಗಿಗಳ ಜತೆಗೆ ಉತ್ತಮ ಭಾಂಧವ್ಯ ಹೊಂದಿರುತ್ತಾರೆ. ಒಳ್ಳೆಯ ಹೆಸರು ಕೂಡ ಸಂಪಾದಿಸುತ್ತಾರೆ. ಒಳ್ಳೆಯ ವೈದ್ಯರಿದ್ದಾಗ ಶ್ರೀಮಂತರೂ ಸರ್ಕಾರಿ ಆಸ್ಪತ್ರೆಗಳ ಕಡೆ ಬರುತ್ತಾರೆ. ವಿಟ್ಲ ಆಸ್ಪತ್ರೆಯಲ್ಲಿ ಈ ಹಿಂದೆ ಹೆರಿಗೆ ಚಿಕಿತ್ಸೆಗಳೂ ನಡೆಯುತ್ತಿದ್ದವು. ಅದಕ್ಕೆ ತಕ್ಕಂತೆ ಅನುಭವಿ ಶುಶ್ರೂಷಕಿಯರು, ವೈದ್ಯರೂ ಇದ್ದರು. ಈಗ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇದು ಸರ್ಕಾರ ತುರ್ತಾಗಿ ಗಮನಹರಿಸಬೇಕಾದ ವಿಚಾರವಾಗಿದೆ” ಎನ್ನುತ್ತಾರೆ ಸ್ಥಳೀಯರು.
ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಮಾತನಾಡಿ, “ಈ ಬಗ್ಗೆ ಶಾಸಕರ ಗಮನ ಸೆಳೆಯಲಾಗಿದೆ. ಹಾಗೆಯೇ ಭರವಸೆ ಕೂಡಾ ಸಿಕ್ಕಿದೆ. ಶೀಘ್ರದಲ್ಲಿಯೇ ಏನಾದರೂ ವ್ಯವಸ್ಥೆ ಆಗಬಹುದು” ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ವಿಟ್ಲದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರ ಗಮನ ಸೆಳೆದಾಗ ಈ ಬಗ್ಗೆ ಆರೋಗ್ಯ ಇಲಾಖೆಯ ಗಮನ ಸೆಳೆದಿದ್ದು, ರಾಜ್ಯಾದ್ಯಂತ ಈ ಕುರಿತು ಪರಿಶೀಲಿಸಿ, ಹೆಚ್ಚುವರಿ ವೈದ್ಯರು, ಸಿಬ್ಬಂದಿ ಇರುವಲ್ಲಿಂದ ವರ್ಗಾವಣೆ ಪಡೆಯುವ ಬಗ್ಗೆ ಮಾತುಕತೆ ನಡೆಸಲಾಗಿದೆ” ಎಂದಿದ್ದಾರೆ.
ಇದನ್ನೂ ಓದಿದ್ದೀರಾ? ದಕ್ಷಿಣ ಕನ್ನಡ | ಸೇತುವೆ ಮುಚ್ಚಿ ಎರಡು ವರ್ಷ ಕಳೆದರೂ ದುರಸ್ತಿ, ನಿರ್ಮಾಣ ಪ್ರಕ್ರಿಯೆ ನಡೆಸಿಲ್ಲ: ಮುನೀರ್ ಕಾಟಿಪಳ್ಳ ಆರೋಪ
“ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ತಿಮ್ಮಯ್ಯ ಅವರು ಜಿಲ್ಲೆಯಾದ್ಯಂತ ಇರುವ ಸರ್ಕಾರಿ ಆಸ್ಪತ್ರೆಗಳ ಕೊರತೆ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. ಆದಷ್ಟು ಬೇಗ ಖಾಲಿ ಹುದ್ದೆಗಳು ಭರ್ತಿಯಾಗಬಹುದೆಂಬ ನಿರೀಕ್ಷೆ ಇದೆ” ಎನ್ನುತ್ತಾರೆ.
ಸರ್ಕಾರ ಹಾಗೂ ಆರೋಗ್ಯ ಇಲಾಖೆಯು ತಕ್ಷಣವೇ ವಿಟ್ಲದ ಸಮುದಾಯ ಆಸ್ಪತ್ರೆಯಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ, ಆಸ್ಪತ್ರೆಯ ಮೂಲಸೌಕರ್ಯ ಮತ್ತು ಸೇವೆಗಳ ಗುಣಮಟ್ಟವನ್ನು ಹೆಚ್ಚಿಸಬೇಕಾಗಿದೆ. ಇಲ್ಲದಿದ್ದರೆ, ವೈದ್ಯಕೀಯ ಉಪಕರಣಗಳಿದ್ದರೂ ಬಳಕೆಗಿಲ್ಲದಿರುವುದು ಜನಸಾಮಾನ್ಯರ ಆರೋಗ್ಯ ಹಕ್ಕುಗಳಿಗೆ ಧಕ್ಕೆಯಾಗುವುದರ ಜತೆಗೆ ವಿಟ್ಲದ ಸಮುದಾಯ ಆಸ್ಪತ್ರೆಯ ಅಸ್ತಿತ್ವವೇ ಪ್ರಶ್ನಾರ್ಥಕವಾಗಲಿದೆ.
ವರದಿ : ರಾಜೇಶ್ ಶೆಟ್ಟಿ ಬಿ, ಮಂಗಳೂರು





