ಔರಾದ್ ಪಟ್ಟಣ ಪಂಚಾಯತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಿರುವುದು ರಾಜ್ಯ ಕಾಂಗ್ರೆಸ್ ಸರಕಾರದ ಕೊಡುಗೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಕಾಂಗ್ರೆಸ್ ಮುಖಂಡ ಡಾ.ಭೀಮಸೇನರಾವ ಶಿಂಧೆ ನೇತೃತ್ವದಲ್ಲಿ ಭಾನುವಾರ ಭಾಲ್ಕಿಯ ತಮ್ಮ ನಿವಾಸದಲ್ಲಿ ಔರಾದ್ ನಾಗರಿಕರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ʼಔರಾದ್ ಜನತೆಯ ಬಹುದಿನಗಳ ಬೇಡಿಕೆಯನ್ನು ಕಾಂಗ್ರೆಸ್ ಸರಕಾರ ನೇರವೇರಿಸಿದೆ. ಈ ಹಿಂದಿನ ಬಿಜೆಪಿ ಸರಕಾದಿಂದ ಆಗದಿರುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಔರಾದ್ ಪಟ್ಟಣದ ಜನರಿಗೆ ಆಶ್ವಾಸನೆ ನೀಡಿದೆ. ಅದರಂತೆ ಔರಾದ್ ಪಟ್ಟಣ ಪಂಚಾಯತಿಯನ್ನು ಪುರಸಭೆಯನ್ನಾಗಿ ಮಾಡಿದ್ದೇನೆʼ ಎಂದರು.
ʼಈ ಹಿಂದೆ ನಾನು ಪೌರಾಡಳಿತ ಸಚಿವನಾಗಿದ್ದ ವೇಳೆ ನಿಯಮದ ಪ್ರಕಾರ ಎಲ್ಲ ಮಾನದಂಡಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದೆ. ಈಗ ಎಲ್ಲವನ್ನು ಸಿದ್ಧಪಡಿಸಿಕೊಂಡು ಸಚಿವ ಸಂಪುಟದಲ್ಲಿ ಪುರಸಭೆ ಘೋಷಣೆಯ ನಿರ್ಣಯ ಕೈಗೊಳ್ಳಲಾಗಿದೆ. ಇದರಿಂದ ಔರಾದ್ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆʼ ಎಂದು ಹರ್ಷ ವ್ಯಕ್ತಪಡಿಸಿದರು.
ಮುಖಂಡ ಡಾ. ಭೀಮಸೇನರಾವ ಶಿಂಧೆ ಮಾತನಾಡಿ, ʼಲೋಕಸಭೆ ಚುನಾವಣೆಯ ವೇಳೆ ಪುರಸಭೆ ಮೇಲ್ದರ್ಜೆಗೇರಿಸುವ ಭರವಸೆಯೊಂದಿಗೆ, ಔರಾದ್ ಪಟ್ಟಣ ಅಭಿವೃದ್ಧಿಗೆ 5 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದೀರಿ ಎಂದು ನೆನಪಿಸಿದರು. ಅದಕ್ಕೆ ತಕ್ಷಣ ಸ್ಪಂದಿಸಿದ ಸಚಿವ ಈಶ್ವರ ಖಂಡ್ರೆ ಅವರು 5 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದ ಅವರು ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ತಿಳಿಸಿದರು.
ಔರಾದ್ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಚನ್ನಪ್ಪ ಉಪ್ಪೆ, ಔರಾದ್ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಬಾಬುರಾವ ತಾರೆ, ಪಟ್ಟಣ ಪಂಚಾಯತಿ ಸದಸ್ಯ ಸುನಿಲಕುಮಾರ ದೇಶಮುಖ ಸೇರಿದಂತೆ ಪ್ರಮುಖರಾದ ಪ್ರಶಾಂತ ಫುಲಾರಿ, ಶರಣಪ್ಪ ಪಾಟೀಲ್, ಶಾಲೊಮನ್ ಮಹೀಮಕರ್, ಸುನಿಲ ಮೀತ್ರಾ, ಅನೀಲ ನಿರ್ಮಳೆ, ಪಪ್ಪು ದೇವಕತ್ತೆ, ಪ್ರವೀಣ ಕರಂಜೆ, ಅನೀಲ ಒಡಿಯಾರ್, ಮಹೋಹರ್, ಬಾಲಾಜಿ, ಕಮಳಮ್ಮ ಚಿಕ್ಲಿ, ವೆಂಕಟರಾವ ಪಾಟೀಲ್, ಸೂರ್ಯಕಾಂತ ಉಡಬಾಳೆ ಸೇರಿದಂತೆ ಮತ್ತಿತರರಿದ್ದರು.
ಔರಾದ್ ಪಟ್ಟಣ ಪಂಚಾಯತಿ ಮೇಲ್ದರ್ಜೆಗೇರಿಸುವ ಕುರಿತು 2023ರ ಜೂನ್ 23ರಂದು ʼಈದಿನʼ ದಲ್ಲಿ ʼಬೀದರ್ | ಔರಾದ ಪಟ್ಟಣ ಪಂಚಾಯತಿಗೆ ಒಲಿಯುವುದೇ ಪುರಸಭೆ ಭಾಗ್ಯ?ʼ ಎಂಬ ಶೀರ್ಷಿಕೆಯಡಿ ವಿಶೇಷ ಬರಹ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.





